ಕಾಳಗಿ: ‘ಹೈನುಗಾರಿಕೆ ಒಂದು ಶ್ರೇಷ್ಠ ಉದ್ಯೋಗವಾಗಿದೆ. ರೈತರು ಕೃಷಿಯೊಂದಿಗೆ ಹೈನುಗಾರಿಕೆ ಮಾಡಿದರೆ ವರ್ಷಪೂರ್ತಿ ಆದಾಯ ಪಡೆಯಬಹುದು’ ಎಂದು ಇಲ್ಲಿನ ಸರ್ಕಾರಿ ಪಶು ಚಿಕಿತ್ಸಾಲಯದ ವೈದ್ಯಾಧಿಕಾರಿ ಡಾ.ಅಣ್ಣರಾವ ಪಾಟೀಲ ಹೇಳಿದರು.
ಬುಧವಾರ ಜಿಲ್ಲಾ ಪಂಚಾಯಿತಿ ರಾಜೀವಗಾಂಧಿ ಉದ್ಯೋಗ ಚೇತನದ ಫಲಾನುಭವಿಗಳು ಕಿಟಸರ್ಡ್ ಸಂಸ್ಥೆಯ ಸಹಯೋಗದೊಂದಿಗೆ ಸ್ಥಳೀಯ ಬಾಬರ ಶಹಾ ತೋಟಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅವರು ಮಾತನಾಡಿದರು.
‘ಹೈನುಗಾರಿಕೆಯು ಅತಿವೃಷ್ಠಿ ಹಾಗೂ ಅನಾವೃಷ್ಠಿಯ ಸಮಯದಲ್ಲಿ ಕೃಷಿಗೆ ಬೆಂಬಲ ನೀಡುತ್ತದೆ. ಅದರಿಂದ ರೈತರ ಆದಾಯ ಹೆಚ್ಚುತ್ತದೆ. ಅಲ್ಲದೆ, ಕರುಗಳ ಪಾಲನೆಯಿಂದ ಅಧಿಕ ಲಾಭವನ್ನು ಪಡೆದುಕೊಳ್ಳಬಹುದಾಗಿದೆ’ ಎಂದರು.
‘ಹೈನುಗಾರಿಕೆಯ ಉಪ ಉತ್ಪನ್ನವಾದ ಸಗಣಿ ಹಾಗೂ ಗೋಮೂತ್ರದಿಂದ ಭೂಮಿಯ ಫಲವತ್ತತೆ ಹೊಂದಿ ಅಧಿಕ ಇಳುವರಿಗೆ ಸಹಾಯಕವಾಗುತ್ತದೆ. ಎಮ್ಮೆಗಳ ಪಾಲನೆಯು ಮಿಶ್ರ ತಳಿ ಹಸುಗಳಿಗಿಂತ ಸರಳವಾಗಿದ್ದು, ಜನರಿಂದ ಎಮ್ಮೆ ಹಾಲಿಗೆ ಅಧಿಕ ಬೇಡಿಕೆಯಿದೆ’ ಎಂದು ತಿಳಿಸಿದರು.
ಯುವ ರೈತ ಬಾಬರ ಶಹಾ ಮಾತನಾಡಿ, ‘ನಾವು 2 ಎಮ್ಮೆಗಳಿಂದ ಹೈನುಗಾರಿಕೆ ಆರಂಭಿಸಿದ್ದು ಈಗ 26 ಎಮ್ಮೆಗಳನ್ನು ಹೊಂದಿದ್ದೇವೆ. ಸ್ಥಳೀಯವಾಗಿ ಹಾಲಿಗೆ ಹೆಚ್ಚಿನ ಬೇಡಿಕೆ ಇದ್ದು ರೈತರು ಹೈನುಗಾರಿಕೆ ಮಾಡಿ ಅಧಿಕ ಲಾಭ ಗಳಿಸಬಹುದಾಗಿದೆ. ಊರಲ್ಲಿನ ಹೋಟೆಲ್ ಹಾಗೂ ಮನೆಗಳಿಗೆ ತಾವು ಹಾಲು ಸರಬರಾಜು ಮಾಡುತ್ತೇವೆ. ಪಶು ವೈದ್ಯರ ಸಹಕಾರ ಹಾಗೂ ಬೆಂಬಲ ನಮಗಿದೆ’ ಎಂದರು. ಕಿಟಸರ್ಡ್ ಸಂಸ್ಥೆಯ ಅವಿನಾಶ ಸಿಂಧೆ, ಜಾನುವಾರು ಅಧಿಕಾರಿ ಮನೋಹರ ಕುಲಕರ್ಣಿ, ಸಹಾಯಕ ತಿಪ್ಪಣ್ಣ ಹಾಗೂ 36 ಫಲಾನುಭವಿಗಳು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.