ADVERTISEMENT

ಕೂಲಿಕಾರ್ಮಿಕರ ಪುತ್ರಿಗೆ 11 ಚಿನ್ನದ ಪದಕ

ಚಿನ್ನದ ಪದಕದ ಸಾಧನೆಯಲ್ಲಿ ವಿದ್ಯಾರ್ಥಿನಿಯರದ್ದೇ ಮೇಲುಗೈ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2020, 21:16 IST
Last Updated 20 ನವೆಂಬರ್ 2020, 21:16 IST
ಚಿನ್ನದ ಹುಡುಗಿಯರು: ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ನಡೆದ 38ನೇ ಘಟಿಕೋತ್ಸವದಲ್ಲಿ ಪಲ್ಲ ಮೇಘನಾ, ಅರುಣಾಜ್ಯೋತಿ, ಜೂಹಿ ಸಿಮ್ರನ್, ಶ್ವೇತಾ ದೊಡ್ಡಮನಿ, ಜಯಶ್ರೀ ಶಿವಶರಣಪ್ಪ, ಸಯೀದಾ ಸೈಯದ್ ಇಕ್ಬಾಲ್, ಅಲ್ಮಾಸ್ ಮಹ್ಮದ್ ಉಸ್ಮಾನ್ ಅಲಿ ತಮ್ಮ ಪದಕ, ಪ್ರಮಾಣಪತ್ರಗಳನ್ನು ಸಂಭ್ರಮದಿಂದ ಪ್ರದರ್ಶಿಸಿದರು  –ಪ್ರಜಾವಾಣಿ ಚಿತ್ರ
ಚಿನ್ನದ ಹುಡುಗಿಯರು: ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ನಡೆದ 38ನೇ ಘಟಿಕೋತ್ಸವದಲ್ಲಿ ಪಲ್ಲ ಮೇಘನಾ, ಅರುಣಾಜ್ಯೋತಿ, ಜೂಹಿ ಸಿಮ್ರನ್, ಶ್ವೇತಾ ದೊಡ್ಡಮನಿ, ಜಯಶ್ರೀ ಶಿವಶರಣಪ್ಪ, ಸಯೀದಾ ಸೈಯದ್ ಇಕ್ಬಾಲ್, ಅಲ್ಮಾಸ್ ಮಹ್ಮದ್ ಉಸ್ಮಾನ್ ಅಲಿ ತಮ್ಮ ಪದಕ, ಪ್ರಮಾಣಪತ್ರಗಳನ್ನು ಸಂಭ್ರಮದಿಂದ ಪ್ರದರ್ಶಿಸಿದರು  –ಪ್ರಜಾವಾಣಿ ಚಿತ್ರ   

ಕಲಬುರ್ಗಿ: ಇಲ್ಲಿನ ಗುಲಬರ್ಗಾ ವಿಶ್ವವಿದ್ಯಾಲಯದ 38ನೇ ಘಟಿಕೋತ್ಸವದಲ್ಲಿ ಚಿನ್ನದ ಪದಕ ಪಡೆದವರಲ್ಲಿ ಬಹುತೇಕರು ವಿದ್ಯಾರ್ಥಿನಿಯರು. ಅವರ ಪೈಕಿ ಕನ್ನಡ ವಿಭಾಗದಲ್ಲಿ ಅತ್ಯುತ್ತಮ ಅಂಕಗಳನ್ನು ಗಳಿಸಿ ಅತ್ಯಧಿಕ 11 ಚಿನ್ನದ ಪದಕಗಳನ್ನು ಗಳಿಸಿದವರು ಜಯಶ್ರೀ ಶಿವಶರಣಪ್ಪ. ಅವರು ಜಿಲ್ಲೆಯ ಆಳಂದ ತಾಲ್ಲೂಕಿನ ಮಾಡಿಯಾಳ ಗ್ರಾಮದ ಕೂಲಿಕಾರ್ಮಿಕರ ಪುತ್ರಿ.

ವಿಶ್ವವಿದ್ಯಾಲಯದ ಡಾ.ಬಿ.ಆರ್.ಅಂಬೇಡ್ಕರ್ ಸಭಾಂಗಣದಲ್ಲಿ ಶುಕ್ರವಾರ ನಡೆದ ಘಟಿಕೋತ್ಸವದಲ್ಲಿ ಜಯಶ್ರೀ ಸೇರಿದಂತೆ ವಿವಿಧ ವಿಭಾಗಗಳಲ್ಲಿ ‘ಚಿನ್ನ’ದ ಸಾಧನೆ ಮಾಡಿದವರಿಗೆ ಹಂಗಾಮಿ ಕುಲಪತಿ ಪ್ರೊ.ಚಂದ್ರಕಾಂತ ಯಾತನೂರ ಅವರು ಪದಕ ಹಾಗೂ ಪದವಿ ಪ್ರಮಾಣಪತ್ರ ಪ್ರದಾನ ಮಾಡಿದರು.

ಚಿಕ್ಕಂದಿನಿಂದ ಓದಿನಲ್ಲಿ ಚುರುಕಿರುವ ಜಯಶ್ರೀ ಕನ್ನಡ ಅಧ್ಯಯನ ವಿಭಾಗದಲ್ಲಿ ಪ್ರಾಧ್ಯಾಪಕರ ಕೊರತೆ ನೀಗಿಕೊಂಡು ತಾವೇ ಸ್ವತಃ ಅಧ್ಯಯನ ಮಾಡುವ ಮೂಲಕ ಸಾಧನೆ ಮಾಡಿದ್ದಾರೆ. ಕೂಲಿಗೆಲಸಕ್ಕೆ ಹೋಗುವ ಶಿವಶರಣಪ್ಪ–ಶೋಭಾ ದಂಪತಿ ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸಿದ್ದಾರೆ. ಐವರು ಮಕ್ಕಳ ಪೈಕಿ ಹಿರಿಯ ಪುತ್ರಿ ಎಂ.ಎ. ಬಿ.ಇಡಿ. ಪೂರೈಸಿದ್ದರೆ, ದ್ವಿತೀಯ ಪುತ್ರಿ ಜಯಶ್ರೀ ವಿಶಿಷ್ಟ ಸಾಧನೆ ತೋರಿದ್ದಾರೆ.

ADVERTISEMENT

ಶ್ವೇತಾಗೆ 10 ಚಿನ್ನ: ಪ್ರಾಣಿವಿಜ್ಞಾನ ವಿಭಾಗದಲ್ಲಿ 10 ಚಿನ್ನದ ಪದಕಗಳನ್ನು ಗಳಿಸಿರುವ ಕಲಬುರ್ಗಿಯ ಶ್ವೇತಾ ದೊಡ್ಡಮನಿ ಅವರ ತಂದೆ ತೀರಿಕೊಂಡಿದ್ದಾರೆ. ಅರಣ್ಯ ಇಲಾಖೆಯಲ್ಲಿ ಉದ್ಯೋಗಿಯಾಗಿದ್ದ ತಂದೆ ಯಲ್ಲಪ್ಪ ದೊಡ್ಡಮನಿ ಅವರ ಅಗಲಿಕೆಯ ಚಿಂತೆ ಕಾಡದಂತೆ ನೋಡಿಕೊಂಡ ತಾಯಿ ವಿಜಯಲಕ್ಷ್ಮಿ ಅವರು ಶ್ವೇತಾ ಅವರಿಗೆ ಉತ್ತಮ ಶಿಕ್ಷಣ ಕೊಡಿಸಿದ್ದಾರೆ.

ಮಗಳ ಪಕ್ಕ ನಿಂತು ಚಿನ್ನದ ಪದಕಗಳನ್ನು ದಿಟ್ಟಿಸಿ ನೋಡುತ್ತಿದ್ದ ವಿಜಯಲಕ್ಷ್ಮಿ ಅವರ ಕಣ್ಣಲ್ಲಿ ಆನಂದಭಾಷ್ಪ ಸುರಿಯುತಿತ್ತು. ‘ಮಗಳಿಗೆ ಯಾವ ಕೊರತೆಯನ್ನೂ ಮಾಡಲಿಲ್ಲ. ಆಕೆ ಎಲ್ಲಿಯವರೆಗೆ ಓದುತ್ತಾಳೋ ಅಲ್ಲಿಯವರೆಗೆ ಓದಿಸುತ್ತೇವೆ. ಆಕೆ ಯುಪಿಎಸ್‌ಸಿ ಪರೀಕ್ಷೆಯಲ್ಲೂ ಉತ್ತಮ ಸಾಧನೆ ಮಾಡುವ ವಿಶ್ವಾಸವಿದೆ’ ಎಂದು ವಿಜಯಲಕ್ಷ್ಮಿ ‘ಪ್ರಜಾವಾಣಿ’ಗೆ ತಿಳಿಸಿದರು.

ಸೂಕ್ಷ್ಮಜೀವಿಶಾಸ್ತ್ರ ವಿಭಾಗದಲ್ಲಿ 7 ಚಿನ್ನದ ಪದಕ ಗಳಿಸಿರುವ ವಿದ್ಯಾರ್ಥಿನಿ ಅರುಣಜ್ಯೋತಿ ಬಸವರಾಜ ಯಾದಗಿರಿ ಜಿಲ್ಲೆಯ ನಗನೂರ ಗ್ರಾಮದವರು. ವಿಶ್ವವಿದ್ಯಾಲಯದ ಹಾಸ್ಟೆಲ್‌ನಲ್ಲೇ ಉಳಿದು ಓದು ಪೂರೈಸಿದ ಅವರು ಪಿಎಚ್‌.ಡಿ ಪಡೆದು ಪ್ರಾಧ್ಯಾಪಕರಾಗುವ ಹಂಬಲ ಹೊಂದಿದ್ದಾರೆ.

15 ವಿದ್ಯಾರ್ಥಿನಿಯರಿಗೆ ಚಿನ್ನದ 85 ಪದಕ

ಕಲಾ, ಸಮಾಜ ವಿಜ್ಞಾನ, ವಿಜ್ಞಾನ, ವಾಣಿಜ್ಯ, ಕಾನೂನು ಸೇರಿ ವಿವಿಧ ನಿಕಾಯಗಳ 16 ಪೈಕಿ 15 ವಿಭಾಗಗಳಲ್ಲಿ ವಿದ್ಯಾರ್ಥಿನಿಯರೇ ಒಟ್ಟು 84 ಚಿನ್ನದ ಪದಕಗಳನ್ನು ಪಡೆಯುವ ಮೂಲಕ ಹೊಸ ದಾಖಲೆ ಬರೆದಿದ್ದಾರೆ. ರಾಜ್ಯಶಾಸ್ತ್ರ ವಿಭಾಗದಲ್ಲಿ ಮಾತ್ರ ವಿದ್ಯಾರ್ಥಿ ಬಸವಲಿಂಗಪ್ಪ ದುರ್ಗಪ್ಪ 5 ಚಿನ್ನದ ಪದಕಗಳನ್ನು ಪಡೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.