ಕಲಬುರ್ಗಿ: ಜಿಲ್ಲೆಯಲ್ಲಿ ಪ್ರಥಮ ಹಂತವಾಗಿ ಸೋಮವಾರದಿಂದ ಮೂರು ದಿನಗಳ ಕಾಲ ಹಮ್ಮಿಕೊಂಡಿರುವ ಸಮಗ್ರ ಕೃಷಿ ಅಭಿಯಾನಕ್ಕೆ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಜಿಲ್ಲಾಧಿಕಾರಿ ಆರ್. ವೆಂಕಟೇಶಕುಮಾರ್ ಚಾಲನೆ ನೀಡಿದರು.
17 ಹೋಬಳಿಗಳಲ್ಲಿ ಕೃಷಿ ಅಭಿಯಾನ ನಡೆಯಲಿದೆ. ಅಫಜಲಪುರ ತಾಲ್ಲೂಕಿನ ಅಫಜಲಪುರ ಮತ್ತು ಆತನೂರ, ಆಳಂದ ತಾಲ್ಲೂಕಿನ ಆಳಂದ ಮತ್ತು ನಿಂಬರ್ಗಾ, ಚಿಂಚೋಳಿ ತಾಲ್ಲೂಕಿನ ಚಿಂಚೋಳಿ ಮತ್ತು ಚಿಮ್ಮನಚೋಡ, ಚಿತ್ತಾಪುರ ತಾಲ್ಲೂಕಿನ ಚಿತ್ತಾಪುರ, ನಾಲವಾರ, ಶಹಾಬಾದ್. ಕಲಬುರ್ಗಿ ತಾಲ್ಲೂಕಿನ ಕಲಬುರ್ಗಿ, ಪಟ್ಟಣ, ಮಹಾಗಾಂವ. ಜೇವರ್ಗಿ ತಾಲ್ಲೂಕಿನ ಜೇವರ್ಗಿ, ಅಂದೋಲಾ, ಇಜೇರಿ. ಸೇಡಂ ತಾಲ್ಲೂಕಿನ ಸೇಡಂ ಮತ್ತು ಮುಧೋಳ ರೈತ ಸಂಪರ್ಕ ಕೇಂದ್ರಗಳ ವ್ಯಾಪ್ತಿಯಲ್ಲಿ ಸಮಗ್ರ ಕೃಷಿ ಅಭಿಯಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ದ್ವಿತೀಯ ಹಂತವಾಗಿ ಜೂನ್ 7 ರಿಂದ 9ರವರೆಗೆ 15 ಹೋಬಳಿಗಳಲ್ಲಿ ಸಮಗ್ರ ಕೃಷಿ ಅಭಿಯಾನ ನಡೆಯಲಿದೆ. ರೈತರಿಗೆ ಕೃಷಿ, ಕೃಷಿಯೇತರ ಚಟುವಟಿಕೆ, ಬೆಳೆ ವಿಮೆ, ಕೃಷಿ ಸಾಲ ಬಗ್ಗೆ ಕೃಷಿ ಇಲಾಖೆಯಿಂದ ಕರಪತ್ರಗಳನ್ನು ಮುದ್ರಿಸಿ ರೈತರಿಗೆ ಮಾಹಿತಿ ನೀಡಲಾಗುವುದು. ಮೂರನೇ ದಿನ ಹೋಬಳಿ ಕೇಂದ್ರ ಸ್ಥಾನದಲ್ಲಿ ಕೃಷಿ ವಸ್ತು ಪ್ರದರ್ಶನ ಮತ್ತು ವಿಜ್ಞಾನಿಗಳೊಂದಿಗೆ ರೈತರ ಸಂವಾದ ನಡೆಸಲಾಗುವುದು. ಇದಕ್ಕಾಗಿ ಒಟ್ಟು 17 ವಾಹನಗಳನ್ನು ಸಿದ್ಧಪಡಿಸಲಾಗಿದ್ದು, ವಾಹನಗಳು ಎಲ್ಲ ಗ್ರಾಮಗಳಿಗೆ ಸಂಚರಿಸಿ ಮಾಹಿತಿ ನೀಡಲಿವೆ ಎಂದು ಅಧಿಕಾರಿಗಳು ತಿಳಿಸಿದರು.
ಜಂಟಿ ಕೃಷಿ ನಿರ್ದೇಶಕ ರಿತೇಂದ್ರನಾಥ ಸುಗೂರ, ಕೃಷಿ ಇಲಾಖೆ ಉಪ ನಿರ್ದೇಶಕ ಸಮದ್ ಪಟೇಲ್, ಉಪನಿರ್ದೇಶಕ ಬಾಲರಾಜ, ರೇಷ್ಮೆ ಇಲಾಖೆಯ ಉಪನಿರ್ದೇಶಕ ಉಪ್ಪಾರ, ಸಹಾಯಕ ಕೃಷಿ ನಿರ್ದೇಶಕ ಚಂದ್ರಕಾಂತ ಜೀವಣಗಿ, ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಸುವರ್ಣಾ ಬಿ. ಯದ್ಲಾಪುರ ಪಾಲ್ಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.