ADVERTISEMENT

‘ಜಾನಪದ ಸಾಹಿತ್ಯದಲ್ಲಿ 5 ಮಹಾಕಾವ್ಯ’

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2018, 10:13 IST
Last Updated 30 ಡಿಸೆಂಬರ್ 2018, 10:13 IST
ವಿಕಾಸಕ್ಕಾಗಿ ಜಾನಪದ ಕಾರ್ಯಕ್ರಮವನ್ನು ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಲಾಯಿತು
ವಿಕಾಸಕ್ಕಾಗಿ ಜಾನಪದ ಕಾರ್ಯಕ್ರಮವನ್ನು ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಲಾಯಿತು   

ಕಲಬುರ್ಗಿ: ‘ಜಾನಪದ ಸಾಹಿತ್ಯದಲ್ಲಿ ಮೈಲಾರಲಿಂಗ, ಸವದತ್ತಿ ಯಲ್ಲಮ್ಮ, ಮಲೆ ಮಹದೇಶ್ವರ, ಮಂಟೇಸ್ವಾಮಿ ಮತ್ತು ಜಂಬಣ್ಣ ಎಂಬ ಐದು ಮಹಾಕಾವ್ಯಗಳಿವೆ’ ಎಂದು ಕನ್ನಡ ಜಾನಪದ ಪರಿಷತ್ ರಾಜ್ಯ ಘಟಕದ ಅಧ್ಯಕ್ಷ ಡಾ. ಎಸ್.ಬಾಲಾಜಿ ಹೇಳಿದರು.

ನಗರದ ಎಂ.ಎ.ಟೆಂಗಳಿಕರ್ ಜನಪದ ಮಹಾವಿದ್ಯಾಲಯದಲ್ಲಿ ಕನ್ನಡ ಜಾನಪದ ಪರಿಷತ್ ಜಿಲ್ಲಾ ಘಟಕದ ಆಶ್ರಯದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ‘ವಿಕಾಸಕ್ಕಾಗಿ ಜಾನಪದ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಜಾನಪದ ಸಾಹಿತ್ಯದಲ್ಲಿ ಬಾಗಲಕೋಟೆಯ ಪಿ.ಕೆ.ಸಿ. ಗದಗಿನಮಠ ಅವರು ‘ಗರತಿ ಹಾಡುಗಳು’ ಕವನ ಸಂಕಲನವನ್ನು ಬರೆದು ಡಾಕ್ಟರೇಟ್ ಪದವಿಯನ್ನು ಪಡೆದರು. ನಂತರ ಕರ್ನಾಟಕದಲ್ಲಿ ಜಾನಪದ ವಿಷಯದ ಮೇಲೆ ಸಂಶೋಧಿತ ಕೃತಿಗಳನ್ನು ರಚಿಸಿ ಸುಮಾರು 195 ಜನರು ಡಾಕ್ಟರೇಟ್ ಪದವಿಯನ್ನು ಪಡೆದಿದ್ದಾರೆ. ಜಾನಪದ ನೃತ್ಯ ಕಲೆಗಳಲ್ಲಿ 250 ಕಲೆಗಳು ಮೈಸೂರು ವಿಶ್ವವಿದ್ಯಾಲಯದಲ್ಲಿ ದಾಖಲಾಗಿವೆ’ ಎಂದರು.

ADVERTISEMENT

ಜಿಲ್ಲಾ ಘಟಕದ ಅಧ್ಯಕ್ಷ ಎಂ.ಬಿ.ನಿಂಗಪ್ಪ ಮಾತನಾಡಿ, ‘ಜಾನಪದ ಕಲೆ ಹುಟ್ಟಿನಿಂದ ಚಟ್ಟದವರೆಗೆ ಜೀವಂತ ಇರುತ್ತದೆ. ಜಾನಪದ ಸಾಮಾನ್ಯ ಜನರ ಜೀವಾಳಾಗಿದೆ, ಕಲೆಗೆ ಸಾವಿಲ್ಲ. ಜಾನಪದ ಜನರಿಂದ ಜನರಿಗಾಗಿ ಹರಿದುಬಂದ ಮೌಖಿಕ ಕಲಾ ಸಂಸ್ಕೃತಿಯಾಗಿದೆ. ಶ್ರಮದ ಬದುಕಿಗೆ ಬೀಸಣಿಕೆ ಗಾಳಿಯಂತೆ ಆಸರೆಯಾಗಿ, ಹಾಸ್ಯ ಹುಟ್ಟಿಸುವುದರ ಮೂಲಕ ಜೀವನದಲ್ಲಿನ ನೋವನ್ನು ಮರೆಯಲು ಸಹಕಾರಿಯಾಗಿದೆ’ ಎಂದು ಹೇಳಿದರು.

ಎಸ್.ಎಂ.ಪಟ್ಟಣಕರ್, ಎಂ.ಎ.ಟೆಂಗಳಿಕರ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷೆ ಚಿತ್ರಲೇಖಾ ಟೆಂಗಳಿಕರ ಮಾತನಾಡಿದರು. ಶಿವಶಂಕರ ಬಿ. ಜಾನಪದ ಹಾಡುಗಳನ್ನು ಹಾಡಿದರು. ಬುಡಗ ಜಂಗಮ ಜಿಲ್ಲಾ ಘಟಕದ ಅಧ್ಯಕ್ಷ ಮಾರುತಿ ಇದ್ದರು.

ವಿದ್ಯಾಲಯದ ಮುಖ್ಯಸ್ಥ ಶುಭವರ್ಧನ ಸ್ವಾಗತಿಸಿದರು. ಉಪನ್ಯಾಸಕಿ ನಂದಾ ನಿರೂಪಿಸಿ, ಪ್ರಾಚಾರ್ಯ ರಮೇಶ ಬಡಿಗೇರ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.