ADVERTISEMENT

ಕಲಬುರಗಿ | ಸುಪಾರಿ ಕೊಲೆಗೆ ಸಂಚು; ಐವರ ಬಂಧನ

ಮೂರು ನಾಡ ಪಿಸ್ತೂಲ್, 11 ಜೀವಂತ ಗುಂಡು, ಎರಡು ಕಾರು ಜಪ್ತಿ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2024, 2:50 IST
Last Updated 1 ಅಕ್ಟೋಬರ್ 2024, 2:50 IST
ಕಲಬುರಗಿಯ ಕಮಿಷನರ್ ಕಚೇರಿಯಲ್ಲಿ ಸೋಮವಾರ ಆರೋಪಿಗಳಿಂದ ವಶಕ್ಕೆ ಪಡೆದ ನಾಡ ಪಿಸ್ತೂಲ್, ಜೀವಂತ ಗುಂಡುಗಳನ್ನು ಪೊಲೀಸ್ ಕಮಿಷನರ್ ಶರಣಪ್ಪ ಎಸ್‌.ಡಿ. ಪ್ರದರ್ಶಿಸಿದರು. ಡಿಸಿಪಿಗಳಾದ ಕನಿಕಾ ಸಿಕ್ರಿವಾಲ್ ಉಪಸ್ಥಿತರಿದ್ದರು
ಕಲಬುರಗಿಯ ಕಮಿಷನರ್ ಕಚೇರಿಯಲ್ಲಿ ಸೋಮವಾರ ಆರೋಪಿಗಳಿಂದ ವಶಕ್ಕೆ ಪಡೆದ ನಾಡ ಪಿಸ್ತೂಲ್, ಜೀವಂತ ಗುಂಡುಗಳನ್ನು ಪೊಲೀಸ್ ಕಮಿಷನರ್ ಶರಣಪ್ಪ ಎಸ್‌.ಡಿ. ಪ್ರದರ್ಶಿಸಿದರು. ಡಿಸಿಪಿಗಳಾದ ಕನಿಕಾ ಸಿಕ್ರಿವಾಲ್ ಉಪಸ್ಥಿತರಿದ್ದರು   

ಕಲಬುರಗಿ: ಹಳೆ ವೈಷಮ್ಯ ಇದ್ದಿದ್ದರಿಂದ ವ್ಯಕ್ತಿಯೊಬ್ಬರ ಕೊಲೆಗೈಯ್ಯಲು ಸುಪಾರಿ ಪಡೆದು, ಕೃತ್ಯಕ್ಕೆ ಬಳಸಲು ಮಧ್ಯಪ್ರದೇಶದಿಂದ ಅಕ್ರಮವಾಗಿ ಖರೀದಿಸಿ ತಂದಿದ್ದ 3 ನಾಡ ಪಿಸ್ತೂಲ್ ಹಾಗೂ 11 ಜೀವಂತ ಗುಂಡುಗಳನ್ನು ವಶಕ್ಕೆ ಪಡೆದ ಪೊಲೀಸರು, ಐವರನ್ನು ಬಂಧಿಸಿದ್ದಾರೆ.

‘ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲ್ಲೂಕಿನ ಕೊರ್ತಿ ಕೋಲಾರ ಗ್ರಾಮದ ಗೈಬುಸಾಬ್‌ ಹಾಜಿಸಾಬ್, ಆಳಂದ ತಾಲ್ಲೂಕಿನ ಬೆಟ್ಟ ಜೇವರ್ಗಿಯ ಯಶ್ವಂತ ಶ್ರೀಪತಿ, ಕಮಲಾಪುರ ತಾಲ್ಲೂಕಿನ ಮುರಡಿಯ ಗೌತಮ ನಾಮನೂರ, ಮಡಕಿಯ ಶಿವಕುಮಾರ ಸಾಗರ ಹಾಗೂ ಕೊಲೆಗೆ ಸುಪಾರಿ ಕೊಟ್ಟ ಭೋದನ ಗ್ರಾಮದ ಹಣಮಂತರಾಯ ಪಗಡೆ ಬಂಧಿತ ಆರೋಪಿಗಳು. ಪಿಸ್ತೂಲ್, ಜೀವಂತ ಗುಂಡುಗಳ ಜತೆಗೆ ಎರಡು ಕಾರುಗಳನ್ನು ಜಪ್ತಿ ಮಾಡಲಾಗಿದೆ’ ಎಂದು ಪೊಲೀಸ್ ಕಮಿಷನರ್ ಶರಣಪ್ಪ ಎಸ್‌.ಡಿ. ಅವರು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಅಕ್ರಮ ಶಸಾಸ್ತ್ರ, ಕಳವು, ದರೋಡೆ, ಸರಗಳ್ಳತನ ಸೇರಿ ಹಲವು ಪ್ರಕರಣಗಳಲ್ಲಿ ಗೈಬುಸಾಬ್‌ ಭಾಗಿಯಾಗಿದ್ದರು. ಯಶವಂತ್ ಕೂಡ ಎರಡು ಕೊಲೆ, ವಾಹನ ಕಳವು, ಅಧಿಕಾರಿಗಳ ಮೇಲೆ ಹಲ್ಲೆ ಸೇರಿ 9 ಪ್ರಕರಣಗಳಲ್ಲಿ ಆರೋಪಿಯಾಗಿದ್ದಾನೆ. ಒಂದು ಪ್ರಕರಣದಲ್ಲಿ 3 ವರ್ಷ ಜೈಲು ಶಿಕ್ಷೆಗೆ ಒಳಗಾಗಿದ್ದನು. ಈ ಇಬ್ಬರು ಜೈಲಿನಲ್ಲಿ ಇದ್ದಾಗ ಪರಿಚಯವಾದವರು’ ಎಂದರು.

ADVERTISEMENT

‘ಪ್ರಕರಣದ 5ನೇ ಆರೋಪಿ ಹಣಮಂತರಾಯ ಅವರ ಮಗ 2021ರಲ್ಲಿ ಕೊಲೆಯಾಗಿದ್ದರು. ಇದರ ಸೇಡು ತೀರಿಸಿಕೊಳ್ಳಲು ಹಣಮಂತರಾಯ ಅವರು ಶರಣಬಸಪ್ಪ ಕೊಲೆಗೆ 2022ರಲ್ಲಿ ಗೈಬುಸಾಬ್‌ಗೆ ₹20 ಲಕ್ಷ ಕೊಟ್ಟು ಸುಪಾರಿ ನೀಡಿದ್ದರು. ಕೋರ್ಟ್‌ ವಿಚಾರಣೆಯ ಹಂತದಲ್ಲೇ ಕೊಲೆ ಮಾಡಿದರೆ ಅನುಮಾನ ಬರುತ್ತದೆ ಎಂದು ಕೆಲ ವರ್ಷಗಳು ಕಾದು, ಖುಲಾಸೆಗೊಂಡ ಬಳಿಕ ಕೊಲೆ ಮಾಡಲು ನಿರ್ಧರಿಸಿದ್ದರು’ ಎಂದರು.

‘ಅಂತೆಯೇ ಆರೋಪಿಗಳು ಸೆಪ್ಟೆಂಬರ್ ತಿಂಗಳ ಮೊದಲ ವಾರದಲ್ಲಿ ಮಧ್ಯಪ್ರದೇಶಕ್ಕೆ ತೆರಳಿ ನಾಡ ಪಿಸ್ತೂಲ್‌ ಖರೀದಿಗೆ ಯತ್ನಿಸಿದ್ದರೂ ಸಫಲವಾಗಲಿಲ್ಲ. ಮತ್ತೊಮ್ಮೆ ಮಧ್ಯಪ್ರದೇಶಕ್ಕೆ ಹೋಗಿ 30 ಕಿ.ಮೀ. ಕಾಡಿನಲ್ಲಿ ನಡೆದುಕೊಂಡು ಹೋಗಿ, ಜೀವ ಪಣಕ್ಕೆ ಇಟ್ಟು ಮೂರು ನಾಡ ಪಿಸ್ತೂಲ್ ತಂದರು. ಒಂದೂವರೆ ತಿಂಗಳು ಶರಣಬಸಪ್ಪ ಅವರನ್ನು ಹಿಂಬಾಲಿಸಿ, ಚಲನವಲನಗಳ ಮೇಲೆ ನಿಗಾ ಇರಿಸಿದ್ದರು. ಆದರೆ, ಇದ್ಯಾವುದು ಶರಣಬಸಪ್ಪ ಅವರಿಗೆ ಗೊತ್ತಿರಲಿಲ್ಲ’ ಎಂದು ಮಾಹಿತಿ ನೀಡಿದರು.

‘ಸೆಪ್ಟೆಂಬರ್ 15ರ ರಾತ್ರಿ ಸಿದ್ಧರಾಮೇಶ್ವರ ಕಾಲೊನಿಯಲ್ಲಿ ಮುಖಕ್ಕೆ ಮಾಸ್ಕ್‌ ಹಾಕಿಕೊಂಡು ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ನಾಲ್ವರ ಪೈಕಿ ಗೈಬುಸಾಬ್‌ನನ್ನು ಹಿಡಿದ ಸ್ಥಳೀಯರು, ಚೌಕ್‌ ಠಾಣೆಯ ಪೊಲೀಸರಿಗೆ ಒ‍ಪ್ಪಿಸಿದರು. ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆಯ ಸುಪಾರಿ, ನಾಡ ಪಿಸ್ತೂಲ್ ಖರೀದಿ ಪ್ರಕರಣ ಹೊರಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವು ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರ ಬಂಧನಕ್ಕೆ ಬಲೆ ಬೀಸಲಾಗಿದೆ. ಪಿಸ್ತೂಲ್ ಖರೀದಿ ಸಂಬಂಧ ಮಧ್ಯಪ್ರದೇಶ ಪೊಲೀಸರ ನೆರವು ಪಡೆಯಲಾಗುತ್ತಿದೆ’ ಎಂದು ಅವರು ತಿಳಿಸಿದರು.

ಉತ್ತರ ವಿಭಾಗದ ಎಸಿಪಿ ಚಂದ್ರಶೇಖರ್, ಚೌಕ್ ಠಾಣೆಯ ಪಿಐ ರಾಘವೇಂದ್ರ, ಸಬ್‌ಅರ್ಬನ್ ಪಿಐ ಸಂತೋಷ ತಟ್ಟೆಪಲ್ಲಿ, ಸಿಬ್ಬಂದಿ ಶಿವಶರಣಪ್ಪ, ಶಿವಾನಂದ, ಗುರುಮೂರ್ತಿ, ರಾಜಕುಮಾರ, ತೌಸೀಫ್, ಮೋಸಿನ್, ನಾಗೇಂದ್ರ, ಮಾಳಪ್ಪ, ಮಂಜುನಾಥ ಕಾಡಾ, ಚೆನ್ನವಿರೇಶ, ಸುಮೀತ್, ಬಂದೇನವಾಜ್ ಅವರಿದ್ದ ತಂಡ ಆರೋಪಿಗಳನ್ನು ಬಂಧಿಸಿದೆ.

ಪತ್ರಿಕಾಗೋಷ್ಠಿಯಲ್ಲಿ ಡಿಸಿಪಿಗಳಾದ ಕನಿಕಾ ಸಿಕ್ರಿವಾಲ್, ಪ್ರವೀಣ ಎಚ್.ನಾಯಕ್ ಉಪಸ್ಥಿತರಿದ್ದರು.

ನಾಡ ಪಿಸ್ತೂಲ್ ಅಕ್ರಮ ಮಾರಾಟ ಜಾಲ ಪತ್ತೆ ಹಾಗೂ ನಿಯಂತ್ರಣಕ್ಕಾಗಿ ಈ ಹಿಂದೆ ಇಂತಹುದ್ದೆ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿಗಳು ಪ್ರಕರಣಗಳ ಮಾಹಿತಿಯನ್ನು ಕಲೆ ಹಾಕಲಾಗುತ್ತಿದೆ
ಶರಣಪ್ಪ ಎಸ್‌.ಡಿ. ಪೊಲೀಸ್ ಕಮಿಷನರ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.