ADVERTISEMENT

₹5,000 ಕೋಟಿ ಕ್ರಿಯಾ ಯೋಜನೆಗೆ ಒಪ್ಪಿಗೆ

ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಸರ್ವಸದಸ್ಯರ ತೀರ್ಮಾನ

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2023, 5:41 IST
Last Updated 18 ಮಾರ್ಚ್ 2023, 5:41 IST
ಕೆಕೆಆರ್‌ಡಿಬಿ ಸಭೆಯಲ್ಲಿ ಅಧ್ಯಕ್ಷ ದತ್ತಾತ್ರೇಯ ಸಿ. ಪಾಟೀಲ ರೇವೂರ ಮಾತನಾಡಿದರು. ಸುಭಾಷ್ ಗುತ್ತೇದಾರ, ಬಸವರಾಜ ಮತ್ತಿಮಡು, ಅನಿರುದ್ಧ ಶ್ರಾವಣ್, ಶರಣಬಸಪ್ಪ ದರ್ಶನಾಪುರ, ವೆಂಕಟರೆಡ್ಡಿ ಮುದ್ನಾಳ, ಬಿ.ಜಿ.ಪಾಟೀಲ ಇದ್ದರು
ಕೆಕೆಆರ್‌ಡಿಬಿ ಸಭೆಯಲ್ಲಿ ಅಧ್ಯಕ್ಷ ದತ್ತಾತ್ರೇಯ ಸಿ. ಪಾಟೀಲ ರೇವೂರ ಮಾತನಾಡಿದರು. ಸುಭಾಷ್ ಗುತ್ತೇದಾರ, ಬಸವರಾಜ ಮತ್ತಿಮಡು, ಅನಿರುದ್ಧ ಶ್ರಾವಣ್, ಶರಣಬಸಪ್ಪ ದರ್ಶನಾಪುರ, ವೆಂಕಟರೆಡ್ಡಿ ಮುದ್ನಾಳ, ಬಿ.ಜಿ.ಪಾಟೀಲ ಇದ್ದರು   

ಕಲಬುರಗಿ: 2023-24 ನೇ ಸಾಲಿಗೆ ಆಯವ್ಯಯದಲ್ಲಿ ಸರ್ಕಾರವು ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಗೆ ₹ 5,000 ಕೋಟಿ ಘೋಷಿಸಿದ್ದು, ಅನುದಾನವನ್ನು ಮಂಡಳಿಗೆ ಒದಗಿಸಿರುವುದರಿಂದ ಮಂಡಳಿ ಯಿಂದಲೇ ಕ್ರಿಯಾ ಯೋಜನೆಯನ್ನು ಸಿಡಿಐ ಸೂಚ್ಯಂಕದ ಆಧಾರದ ಮೇಲೆ ತಯಾರಿಸಲು ಮಂಡಳಿಯ ಸರ್ವ ಸದಸ್ಯರು ನಿರ್ಣಯಿಸಿದರು.

ಮಂಡಳಿಯ ಅಧ್ಯಕ್ಷ ದತ್ತಾತ್ರೇಯ ಸಿ. ಪಾಟೀಲ ರೇವೂರ ಅಧ್ಯಕ್ಷತೆಯಲ್ಲಿ ನಡೆದ ಸದಸ್ಯರ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ ಎಂದು ಕಾರ್ಯದರ್ಶಿ ಅನಿರುದ್ಧ ಶ್ರಾವಣ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

₹ 5,000 ಕೋಟಿ ಪೈಕಿ ಮೊದಲನೇ ಹಂತದಲ್ಲಿ ₹ 3,000 ಕೋಟಿ ಹಾಗೂ ಎರಡನೇ ಹಂತದಲ್ಲಿ ₹ 2,000 ಕೋಟಿ ಅನುದಾನ ಮಂಡಳಿಗೆ ನೀಡಲಾಗುತ್ತದೆ. ಇದಕ್ಕೆ ಕ್ರಿಯಾ ಯೋಜನೆಯನ್ನು ತಯಾರಿಸಲಾಗುವುದು. ಇನ್ನು 2022-23 ನೇ ಸಾಲಿನ ಕ್ರಿಯಾ ಯೋಜನೆಯನ್ನು ಹಲವು ಷರತ್ತುಗಳನ್ನು ವಿಧಿಸಿ ಘಟನೋತ್ತರ ಅನುಮೋದನೆಯನ್ನು ಸಹ ನೀಡಲಾಯಿತು ಎಂದು ಅವರು ಮಾಹಿತಿ ನೀಡಿದ್ದಾರೆ.

ADVERTISEMENT

ಮ್ಯಾಕ್ರೊ ಯೋಜನೆಯಡಿಯಲ್ಲಿ ಜಿಲ್ಲೆಗಳ ಕೇಂದ್ರ ಸ್ಥಾನ ಹಾಗೂ ಇತರೆ ನಗರ ಪ್ರದೇಶಗಳಿಗೆ ಹೆಚ್ಚಿನ ಆದ್ಯತೆ ನೀಡಲು ತೀರ್ಮಾನಿಸಲಾಯಿತು. ಕ್ರಿಯಾ ಯೋಜನೆಯ ಅನುಷ್ಠಾನ ಕುರಿತು ಮಂಡಳಿಯ ಕಾರ್ಯದರ್ಶಿಗಳು ಕಾಮಗಾರಿವಾರು ಕಾಲಮಿತಿಯನ್ನು ನಿಗದಿಪಡಿಸಿ ಪ್ರಗತಿ ಸಾಧಿಸಬೇಕು ಎಂದು ತಿಳಿಸಲಾಯಿತು.

ಮುಖ್ಯಮಂತ್ರಿ ಅವರ ಸೂಚನೆಯ ಮೇರೆಗೆ ಹೊಸ ತಾಲ್ಲೂಕುಗಳಿಗೆ ಸಿ.ಡಿ.ಐ ಸೂಚ್ಯಂಕದ ಕುರಿತು ಹಾಗೂ ಪ್ರಸ್ತುತ ಸಿ.ಡಿ.ಐ ಸೂಚ್ಯಂಕದ ಅಭಿವೃದ್ಧಿಯ ಕುರಿತು ತಾಲ್ಲೂಕು ಹಾಗೂ ಮತಕ್ಷೇತ್ರವಾರು ಅಭಿವೃದ್ಧಿಯ ಕುರಿತು ಅಧ್ಯಯನ ನಡೆಸಲು ತೀರ್ಮಾನಿಸಲಾಯಿತು.

ಮಂಡಳಿ ಸದಸ್ಯರು ಹಾಗೂ ಶಾಸಕರಾದ ಸುಭಾಷ್‌ ಗುತ್ತೇದಾರ್, ಬಸವರಾಜ ಮತ್ತಿಮೂಡ, ವೆಂಕಟರೆಡ್ಡಿ ಮುದ್ನಾಳ, ಶರಣಬಸಪ್ಪ ದರ್ಶನಾಪುರ, ವಿಧಾನ ಪರಿಷತ್ ಸದಸ್ಯ ಬಿ.ಜಿ. ಪಾಟೀಲ ಅವರು ಸಭೆಯಲ್ಲಿ ಸಲಹೆ- ಅಭಿಪ್ರಾಯಗಳನ್ನು ನೀಡಿದರು.

ಕೆಕೆಆರ್‌ಡಿಬಿ ಜಂಟಿ ನಿರ್ದೇಶಕಿ ಪ್ರವೀಣಪ್ರಿಯಾ ಡೇವಿಡ್, ಉಪಕಾರ್ಯದರ್ಶಿ ಆನಂದ ಪ್ರಕಾಶ ಮೀನಾ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.

ಇದೇ ವೇಳೆ ಆನ್‍ಲೈನ್ ಮೂಲಕ ಸಭೆಯಲ್ಲಿ ರಾಯಚೂರು ಸಂಸದ ರಾಜಾ ಅಮರೇಶ್ವರ ನಾಯಕ, ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್, ಕಲಬುರಗಿ ಪ್ರಾದೇಶಿಕ ಆಯುಕ್ತ ಕೃಷ್ಣ ಭಾಜಪೇಯಿ, ಆರ್ಥಿಕ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.