ADVERTISEMENT

ಹೆದ್ದಾರಿ ನಿರ್ಮಾಣಕ್ಕೆ ಜಮೀನು ಸ್ವಾಧೀನ

ವಾಡಿ: ಲಾಡ್ಲಾಪುರ ಗ್ರಾಮಸ್ಥರಲ್ಲಿ ಹೆಚ್ಚಿದ ಆತಂಕ, ಕಾಡುತ್ತಿದೆ ಭವಿಷ್ಯದ ಚಿಂತೆ

ಸಿದ್ದರಾಜ ಎಸ್.ಮಲಕಂಡಿ
Published 1 ಜನವರಿ 2018, 8:19 IST
Last Updated 1 ಜನವರಿ 2018, 8:19 IST
ಹೆದ್ದಾರಿ ನಿರ್ಮಾಣಕ್ಕೆ ಜಮೀನು ಸ್ವಾಧೀನ
ಹೆದ್ದಾರಿ ನಿರ್ಮಾಣಕ್ಕೆ ಜಮೀನು ಸ್ವಾಧೀನ   

ವಾಡಿ: ಕಲಬುರ್ಗಿ–ರಾಯಚೂರು ನಡುವಿನ ರಾಜ್ಯ ಹೆದ್ದಾರಿ ಮೇಲ್ದರ್ಜೆಗೇರಿದ್ದು, ರಾಷ್ಟ್ರೀಯ ಹೆದ್ದಾರಿ ಸ್ಥಾನಮಾನ ಪಡೆದಿದೆ. ಹೈದರಾಬಾದ್ ಬೆಂಗಳೂರು ನಡುವಿನ ರಾಷ್ಟ್ರೀಯ ಹೆದ್ದಾರಿ–167 ಬೆಸೆಯುವ ರಸ್ತೆ ಇದಾಗಿದ್ದು, ನಿರ್ಮಾಣ ಕಾಮಗಾರಿ ಆರಂಭಗೊಂಡಿದೆ. ಕಲಬುರ್ಗಿಯಿಂದ ಚಿತ್ತಾಪುರ ಕ್ರಸ್‌ವರೆಗಿನ 34 ಕಿ.ಮೀ. ರಸ್ತೆ ನಿರ್ಮಾಣ ಕಾರ್ಯ ಈಗಾಗಲೇ ಮುಗಿದಿದೆ.

ಕಲಬುರ್ಗಿಯಿಂದ ಬಂಕೂರು ಕ್ರಾಸ್‌ವರೆಗಿನ 19 ಕಿ.ಮೀ. ರಸ್ತೆಯನ್ನು ₹ 57 ಕೋಟಿ ವೆಚ್ಚದಲ್ಲಿ ಮತ್ತು ಬಂಕೂರು ಕ್ರಾಸ್‌ನಿಂದ ಚಿತ್ತಾಪುರ ಕ್ರಾಸ್‌ವರೆಗಿನ 15 ಕಿ.ಮೀ. ರಸ್ತೆಯನ್ನು ₹ 67 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ.

ಚಿತ್ತಾಪುರ ಕ್ರಾಸ್‌ನಿಂದ ಯಾದಗಿರಿ ವರೆಗೂ ಹೆದ್ದಾರಿ ನಿರ್ಮಾಣ ಕಾಮಗಾರಿ ಭರದಿಂದ ಸಾಗುತ್ತಿದ್ದು, ಜನರಲ್ಲಿ ಸಂತಸ ಮೂಡಿದೆ. ಹೆದ್ದಾರಿ ನಿರ್ಮಾಣ ಪ್ರಕ್ರಿಯೆ ಬೇಗನೇ ಪೂರ್ಣಗೊಳ್ಳುವುದರಿಂದ ಕಲಬುರ್ಗಿಯಿಂದ ಬೆಂಗಳೂರುವರೆಗಿನ ಪ್ರಯಾಣದ ಅವಧಿ ಕಡಿಮೆಯಾಗಲಿದೆ ಎಂಬ ಆಶಾಭಾವ ಜನರು ಹೊತ್ತಿದ್ದಾರೆ.

ADVERTISEMENT

ಜನದಟ್ಟಣೆ ಮತ್ತು ತಿರುವುಗಳನ್ನು ಗಮನಿಸಿ, ಬೈಪಾಸ್ ರಸ್ತೆ ನಿರ್ಮಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಉದ್ದೇಶಿಸಿದೆ. ಲಾಡ್ಲಾಪುರ ಹಾಗೂ ಯಾದಗಿರಿ ಜಿಲ್ಲೆಯ ಯರಗೋಳ ಗ್ರಾಮದ ಬಳಿ 45 ಮೀಟರ್ ವಿಸ್ತೀರ್ಣದ ಬೈಪಾಸ್ ರಸ್ತೆ ನಿರ್ಮಿಸುವ ಗುರಿಯಿದೆ. ರಸ್ತೆಗೆ ಪೂರಕವಾಗಿ ಲಾಡ್ಲಾಪುರ ಬಳಿ 1 ಕಿ.ಮೀ. ಮತ್ತು ಯರಗೋಳ ಬಳಿ 3 ಕಿ.ಮೀ. ರಸ್ತೆ ಬೈ ಪಾಸ್ ನಿರ್ಮಿಸಲು ಸರ್ವೆ ಕಾರ್ಯ ಪ್ರಗತಿಯಲ್ಲಿದೆ.

ಇದರಿಂದಾಗಿ ಲಾಡ್ಲಾಪುರ ಗ್ರಾಮದ ಸುಮಾರು 10 ಎಕರೆಗೂ ಅಧಿಕ ಜಮೀನು ರಾಷ್ಟ್ರೀಯ ಹೆದ್ದಾರಿ ಪಾಲಾಗಲಿದೆ. ಇದು ರೈತರಿಗೆ ಆತಂಕ ಉಂಟು ಮಾಡಿದೆ. ಜಮೀನು ಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಪರಿಹಾರ ಸಮರ್ಪಕವಾಗಿ ಸಿಗುವುದೆ ಅಥವಾ ಇಲ್ಲವೆ ಎಂದ ಭೀತಿ ಅವರಲ್ಲಿ ಮೂಡಿದೆ.

ದ್ವಿಪಥ ರಸ್ತೆ ನಿರ್ಮಿಸಲಾಗುತ್ತಿದ್ದು, ವಾಹನ ಸಂಚಾರ ಸುಗಮವಾಗಲಿದೆ. 45 ಮೀಟರ್‌ ವಿಸ್ತೀರ್ಣದ ರಸ್ತೆ ನಿರ್ಮಿಸಲಾಗುವುದು. ಸದ್ಯಕ್ಕೆ 18 ರಿಂದ 20 ಮೀಟರ್‌ವರೆಗಿನ ವಿಸ್ತೀರ್ಣ ಮಾತ್ರ ಬಳಸಿಕೊಳ್ಳಲಾಗುವುದು. ಹಂತ ಹಂತವಾಗಿ ರಸ್ತೆ ಅಭಿವೃದ್ದಿ ಪಡಿಸಲಾಗುವುದು. ಲಾಡ್ಲಾಪುರ ಗ್ರಾಮದ ಹೊರವಲಯದಲ್ಲಿ ಬೈಪಾಸ್ ರಸ್ತೆ ನಿರ್ಮಾಣ ಸವರ್ೇ ಕಾರ್ಯ ಮುಗಿದಿದೆ’ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಕಾರ್ಯನಿರ್ವಾಹಕ ಎಂಜಿನಿಯರ್ ದೇವಿದಾಸ ಚವಾಣ್ ‘ಪ್ರಜಾವಾಣಿ’ಗೆ ತಿಳಿಸಿದರು.

‘45 ಮೀಟರ್ ವಿಸ್ತೀರ್ಣ ರಸ್ತೆ ನಿರ್ಮಾಣಕ್ಕೆ ಜಮೀನು ಸ್ವಾಧೀನ ಪಡಿಸಿಕೊಳ್ಳಬೇಕಿದೆ. ಭೂ ಸ್ವಾಧೀನ ಪ್ರಕ್ರಿಯೆ ಕುರಿತು ಒಂದು ತಿಂಗಳಲ್ಲಿ ಲಿ ರೈತರ ಸಭೆ ಕರೆದು ಚರ್ಚಿಸಲಾಗುವುದು. ಸರ್ಕಾರದ ಮಾರ್ಗಸೂಚಿಯಂತೆ ಪರಿಹಾರ ನೀಡಲಾಗುವುದು’ ಎಂದರು.

**

ಜಮೀನು ಸ್ವಾಧೀನ ಪ್ರಕ್ರಿಯೆಗೂ ಮುನ್ನ ರೈತರ ಸಭೆ ಕರೆಯಲಾಗುವುದು. ಸರ್ಕಾರದ ಸೂಚನೆಯಂತೆ ಪರಿಹಾರ ಕೊಡಲಾಗುವುದು.

–ದೇವಿದಾಸ ಚವಾಣ್, ಕಾರ್ಯನಿರ್ವಾಹಕ ಎಂಜಿನಿಯರ್ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.