ADVERTISEMENT

‘ರಂಗಭೂಮಿಗೆ ರಚನಾ ಕಮ್ಮಟ ಪೂರಕ’

​ಪ್ರಜಾವಾಣಿ ವಾರ್ತೆ
Published 5 ಜನವರಿ 2018, 6:50 IST
Last Updated 5 ಜನವರಿ 2018, 6:50 IST

ಕಲಬುರ್ಗಿ: ‘ನಾಟಕ ರಚನೆ ಪ್ರಕ್ರಿಯೆಯು ರಂಗಭೂಮಿಯ ನಿರಂತರ ಚಟುವಟಿಕೆಗೆ ಪೂರಕವಾಗುವುದು. ಅಲ್ಲದೇ ಪ್ರತಿಭಾವಂತ ರಂಗಕರ್ಮಿಗಳನ್ನು ಬೆಳಕಿಗೆ ತರಲು ನೆರವಾಗುವುದು’ ಎಂದು ರಂಗ ಸಂಘಟಕ ವಿಶ್ವರಾಜ ಪಾಟೀಲ ಅಭಿಪ್ರಾಯಪಟ್ಟರು.

ರಂಗಾಯಣದಲ್ಲಿ ಗುರುವಾರ ನಡೆದ ನಾಟಕ ರಚನೆ ಮತ್ತು ಆಯ್ಕೆ ಕಾರ್ಯಾಗಾರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ರಂಗಭೂಮಿ ಹಿತದೃಷ್ಟಿಯಿಂದ ನಾಟಕ ರಚನಾ ಕಮ್ಮಟ ಅಗತ್ಯ’ ಎಂದರು.

‘ನಾಟಕ ರಚನಾ ಕಮ್ಮಟವು ತನ್ನದೇ ಆದ ಛಾಪನ್ನು ಹೊಂದಿದ್ದು, ಬೆಂಗಳೂರಿನಂತಹ ಮಹಾನಗರದಲ್ಲಿ ಪ್ರಭಾವ ಬೀರಿದೆ. ಅಲ್ಲಿ ನಡೆಯುವ ಕಮ್ಮಟಗಳು ಈಗ ಸಾಂಸ್ಕೃತಿಕ ಸ್ವರೂಪ ಪಡೆದಿವೆ’ ಎಂದು ಅವರು ತಿಳಿಸಿದರು.

ADVERTISEMENT

‘ಉತ್ತಮ ನಾಟಕಗಳನ್ನು ರೂಪಿಸಲು ಮತ್ತು ಕಲಾವಿದರಿಗೆ ಸೂಕ್ತ ಮಾರ್ಗದರ್ಶನ ನೀಡಲು ನಾಟಕ ರಚನಾ ಕಮ್ಮಟಗಳು ಸಹಕಾರಿ ಆಗುತ್ತವೆ. ಕಮ್ಮಟಗಳು ಬೆಂಗಳೂರಿಗೆ ಮಾತ್ರವೇ ಸೀಮಿತಗೊಳ್ಳದೆ ರಾಜ್ಯವ್ಯಾಪಿ ವಿಸ್ತರಿಸಬೇಕು. ಕಲಬುರ್ಗಿಯಲ್ಲಿ ರಚನಾ ಕಮ್ಮಟ ನಡೆಯುತ್ತಿರುವುದು ಸಂತಸದ ಸಂಗತಿ’ ಎಂದರು.

ಹಿರಿಯ ರಂಗಕರ್ಮಿ ಎಲ್‌.ಬಿ.ಕೆ.ಆಲ್ದಾಳ ಮಾತನಾಡಿ, ‘ರಂಗಭೂಮಿಯ ಮೇಲೆ ಆಸಕ್ತಿ ಹೊಂದಿ ಹೆಚ್ಚಿನ ಸಾಧನೆ ಮಾಡಲು ಪ್ರಯತ್ನಿಸುತ್ತಿರುವ ಯುವ ಪ್ರತಿಭೆಗಳನ್ನು ಪ್ರೋತ್ಸಾಹಿಸಬೇಕು. ಅವರಿಗೆ ಹಿರಿಯ ರಂಗಕರ್ಮಿಗಳು ಸೂಕ್ತ ಮಾರ್ಗದರ್ಶನ ನೀಡಬೇಕು. ಈ ನಿಟ್ಟಿನಲ್ಲಿ ರಂಗಾಸಕ್ತರು ಮುಂದಾಗಬೇಕು’ ಎಂದು ಸಲಹೆ ನೀಡಿದರು.

ಹಿರಿಯ ರಂಗಕರ್ಮಿ ಪಾರ್ವತಿ ವಿ.ಸೋನಾರೆ ಮಾತನಾಡಿ, ‘ಹೈದರಾಬಾದ್‌ ಕರ್ನಾಟಕ ಪ್ರದೇಶದಲ್ಲಿ ನಾಟಕ ರಚನಾ ಕಮ್ಮಟ ನಡೆಯುತ್ತಿರುವುದು ಸಂತಸದ ವಿಷಯ. ಬೀದರ್‌ನಲ್ಲೂ ರಂಗಕರ್ಮಿಗಳು ಮತ್ತು ರಂಗಾಸಕ್ತರಿದ್ದು, ಅಲ್ಲಿಯೂ ಇಂತಹ ಕಮ್ಮಟಗಳನ್ನು ಆಯೋಜಿಸಬೇಕು. ಈ ಕಾರ್ಯಕ್ಕೆ ಅಗತ್ಯ ಸಹಕಾರ ನೀಡಲಾಗುವುದು’ ಎಂದರು.

ರಂಗಾಯಣ ನಿರ್ದೇಶಕ ಮಹೇಶ ವಿ. ಪಾಟೀಲ ನಾಟಕ ರಚನೆ ಮತ್ತು ಆಯ್ಕೆ ಕಾರ್ಯಗಾರದ ಸ್ವರೂಪ ವಿವರಿಸಿದರು. ಕಾರ್ಯಾಗಾರದ ಭಾಗವಾಗಿ ಶುಕ್ರವಾರ ಸಂಜೆ 6 ರಿಂದ 8ರವರೆಗೆ ಮುಖಾಮುಖಿ ಚರ್ಚೆ ನಡೆಯಲಿದೆ. ಶನಿವಾರ ಕಾರ್ಯಾಗಾರದ ಸಮಾರೋಪ ಸಮಾರಂಭ ಜರುಗುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.