ಕಲಬುರ್ಗಿ: ‘ಕೇಂದ್ರ ಸರ್ಕಾರ ತ್ರಿವಳಿ ತಲಾಖ್ ಮಸೂದೆಯನ್ನು ಕಾನೂನಾಗಿ ರೂಪಿಸುವ ಮೂಲಕ ಭಾರತೀಯ ಮುಸ್ಲಿಮರ ವೈಯಕ್ತಿಕ ಕಾನೂನಿನಲ್ಲಿ ಹಸ್ತಕ್ಷೇಪ ಮಾಡುತ್ತಿದೆ’ ಎಂದು ಆರೋಪಿಸಿ ಯುನೈಟೆಡ್ ಮುಸ್ಲಿಂ ಫೋರಂ ನೇತೃತ್ವದಲ್ಲಿ ಮುಸ್ಲಿಮರು ಶನಿವಾರ ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು.
‘ತ್ರಿವಳಿ ತಲಾಖ್ ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಿರುವುದು ಅಸಂವಿಧಾನಿಕವಾಗಿದೆ. ಅದು ಕಾನೂನಾಗಿ ಜಾರಿಗೊಂಡಲ್ಲಿ ಅದರ ಮೂಲ ಆಶಯಗಳೇ ಬುಡಮೇಲು ಆಗುವ ಸಾಧ್ಯತೆ ಇದೆ. ಅಲ್ಲದೆ ಮುಸ್ಲಿಂ ಕಾನೂನಿಗೆ ವಿರೋಧವಾಗುತ್ತದೆ. ಆದ್ದರಿಂದ ಯಾವುದೇ ಕಾರಣಕ್ಕೂ ಮುಸ್ಲಿಮರ ಕಾನೂನಿನಲ್ಲಿ ಹಸ್ತಕ್ಷೇಪ ಮಾಡಬಾರದು’ ಎಂದು ಆಗ್ರಹಿಸಿದರು.
‘ಮಸೂದೆ ಜಾರಿಯಿಂದ ಪತಿ ಮತ್ತು ಪತ್ನಿ ಇಬ್ಬರೂ ತೊಂದರೆ ಅನುಭವಿಸಬೇಕಾಗುತ್ತದೆ. ಆದ್ದರಿಂದ ಈ ಮಸೂದೆ ಜಾರಿಯಾಗದಂತೆ ತಡೆಹಿಡಿಯಬೇಕು. ಮುಸ್ಲಿಮರಿಗೆ ಅವರ ಹಕ್ಕುಗಳನ್ನು ಪ್ರತಿಪಾದಿಸಲು ಅವಕಾಶ ಕಲ್ಪಿಸಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟ ಮಾಡಲಾಗುವುದು’ ಎಂದು ಎಚ್ಚರಿಕೆ ನೀಡಿದರು.
ವಿವಿಧ ಸಂಘಟನೆಗಳ ಮುಖಂಡರಾದ ಡಾ.ಶಿರೀನ್, ತವೇರಿಯಾ ಫಾತಿಮಾ, ಮದಿಹಾ ಆಬಿದ್, ಸಿರಾಜುದ್ದಿನ್ ಜುನೈದಿ, ಅತೀಕ್–ಉರ್–ರೆಹಮಾನ್, ಜಾವಿದ್ ಅಕ್ತರ್, ರಜಾಖ್, ಬಾಬಾ ನಜರ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.