ಸೇಡಂ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಸಂಯುಕ್ತ ಅಂಗನವಾಡಿ ನೌಕರರ ಸಂಘ, ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ, ಕರ್ನಾಟಕ ರಾಜ್ಯ ಅಕ್ಷರ ದಾಸೋಹ ಕಾರ್ಮಿಕ ಸಂಘದ ಪದಾಧಿಕಾರಿಗಳು ಆಲ್ ಇಂಡಿಯಾ ಯುನೈಟೆಡ್ ಟ್ರೇಡ್ ಯೂನಿಯನ್ ಸೆಂಟರ್ ನೇತೃತ್ವದಲ್ಲಿ ಬುಧವಾರ ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಪಟ್ಟಣದ ಪ್ರವಾಸಿ ಮಂದಿರದಿಂದ ಉಪವಿಭಾಗಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು, ನ್ಯಾಯಕ್ಕಾಗಿ ಘೋಷಣೆ ಕೂಗಿದರು. ದೇಶದ ಒಂದು ಕೋಟಿಯಷ್ಟಿರುವ ಅಂಗನವಾಡಿ, ಆಶಾ ಮತ್ತು ಬಿಸಿಯೂಟ ಕಾರ್ಯಕರ್ತೆಯರನ್ನು ಕಾರ್ಮಿಕರೆಂದು ಪರಿಗಣಿಸಬೇಕು. ಮಾಸಿಕ ಕನಿಷ್ಠ ವೇತನ ರೂ.18,000ಗಿಂತ ಕಡಿಮೆ ಇರದಂತೆ ವೇತನ ನೀಡಬೇಕು ಮತ್ತು ಮಾಸಿಕ ರೂ.3,000 ಪಿಂಚಣಿ ಜೊತೆಗೆ ಸಾಮಾಜಿಕ ಭದ್ರತೆ ನೀಡಬೇಕು.
ಕನಿಷ್ಠ ವೇತನದ ಸರಿಸಮ ವೇತನ ನೀಡಲು ಮತ್ತು ಐಸಿಡಿಎಸ್-ಎನ್ಎಚ್. ಎಂ-ಎಂಡಿಎಂ-ಎಸ್.ಎಸ್.ಎ ಮತ್ತಿತರ ಕೇಂದ್ರ ಸರ್ಕಾರದ ಪ್ರಾಯೋಜಿತ ಯೋಜನೆಗಳ ಉತ್ತಮ ಗುಣಮಟ್ಟ ಮತ್ತು ಸಮರ್ಪಕ ಅನುಷ್ಠಾನಕ್ಕೆ ಅಗತ್ಯ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಲು ಹಾಗೂ ಯೋಜನೆಯನ್ನು ಸಾರ್ವತ್ರೀಕರಿಸಲು ಬೇಕಾಗುವ ಖರ್ಚು-ವೆಚ್ಚಗಳನ್ನು ಸರಿದೂಗಿಸುವಷ್ಟು ಹಣವನ್ನು ಮುಂಬರುವ 2018-19ನೇ ಸಾಲಿನ ಕೇಂದ್ರ ಬಜೆಟ್ನಲ್ಲಿ ಒದಗಿಸಬೇಕು ಹಾಗೂ ಯೋಜನೆಯನ್ನು ನಗದು ಹಣ ವರ್ಗಾವಣೆಯಂತಹ ಯಾವುದೇ ರೀತಿಯಲ್ಲಿ ಮಾರ್ಪಡಿಸುವುದು, ಬದಲಾಯಿಸುವುದು ಮತ್ತು ಖಾಸಗಿಯವರಿಗೆ ವಹಿಸುವುದನ್ನು ಮಾಡಬಾರದು ಎಂಬ ಬೇಡಿಕೆಗಳ ಮನವಿ ಪತ್ರವನ್ನು ಸಲ್ಲಿಸಿದರು.
ಕರ್ನಾಟಕ ರಾಜ್ಯ ಸಂಯುಕ್ತ ಅಂಗನವಾಡಿ ನೌಕರರ ಸಂಘ ಜಿಲ್ಲಾ ಮುಖಂಡ ವಿ.ಜೆ.ದೇಸಾಯಿ, ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಜಿಲ್ಲಾ ಮುಖಂಡ ಭಾಗಣ್ಣ ಬುಕ್ಕಾ, ನಾಗಮಣಿ, ಶಿವಕಾಂತಮ್ಮ, ಮಂಜುಳಾ ಮಳಖೇಡ, ನಾಗಮ್ಮ ಮದನಾ, ನಾಗಮ್ಮ ಕೋಡ್ಲಾ, ಕಾಂತಮ್ಮ ಕೋಡ್ಲಾ, ಮುದ್ದಮ್ಮ, ಯಡಗಾ, ರಾಜಶ್ರೀ, ಶಬಾನಾ, ಸಿದ್ದಮ್ಮ, ಗೌರಮ್ಮ ಶರಣು ಹೆರೂರು, ಶಿವಕುಮಾರ ಆಂದೋಲ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.