ADVERTISEMENT

‘ಸಂವಿಧಾನ ಬದಲಾವಣೆ ಮಾತು ಸರಿಯಲ್ಲ’

​ಪ್ರಜಾವಾಣಿ ವಾರ್ತೆ
Published 28 ಜನವರಿ 2018, 8:44 IST
Last Updated 28 ಜನವರಿ 2018, 8:44 IST
ಶಿವರಾಜ ಪಾಟೀಲ
ಶಿವರಾಜ ಪಾಟೀಲ   

ಕಲಬುರ್ಗಿ: ‘ಸಂವಿಧಾನದಲ್ಲಿನ ಕೆಲವು ಅಂಶಗಳನ್ನು ಚರ್ಚೆಗೆ ಒಳಪಡಿಸಿ, ತಿದ್ದುಪಡಿ ಮಾಡಲು ಅವಕಾಶವಿದೆ. ಆದರೆ ಸಂವಿಧಾನ ಬದಲಾವಣೆ ಬಗ್ಗೆ ಮಾತನಾಡುವುದು ಸರಿಯಲ್ಲ’ ಎಂದು ಕಾಂಗ್ರೆಸ್‌ನ ಹಿರಿಯ ಮುಖಂಡ ಶಿವರಾಜ ಪಾಟೀಲ ಹೇಳಿದರು.

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಈ ಹಿಂದೆ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿ ಇದ್ದಾಗ 100ಕ್ಕೂ ಅಧಿಕ ಬಾರಿ ಸಂವಿಧಾನಕ್ಕೆ ತಿದ್ದುಪಡಿ ತರಲಾಗಿದೆ. ಸಂವಿಧಾನದ ಮೂಲ ಆಶಯಕ್ಕೆ ಧಕ್ಕೆ ತರದೆ ತಿದ್ದುಪಡಿ ಮಾಡಲು ಎಲ್ಲ ದೇಶಗಳ ಸಂವಿಧಾನಗಳಲ್ಲೂ ಅವಕಾಶವಿದೆ. ಆದರೆ ಬದಲಾಯಿಸಲು ಯಾರಿಂದಲೂ ಸಾಧ್ಯವಿಲ್ಲ’ ಎಂದು ತಿಳಿಸಿದರು.

‘ಕೆಲವರು ಸಂವಿಧಾನದ ಪರಿವಿಡಿಯಲ್ಲಿರುವ ಸೆಕ್ಯುಲರ್ ಪದವನ್ನು ಕೈಬಿಡುವಂತೆ ಒತ್ತಾಯಿಸುತ್ತಿದ್ದಾರೆ. ಇದು ಕೂಡ ಅಸಾಧ್ಯವಾದ ಮಾತು. ಸಂವಿಧಾನದ ರಕ್ಷಣೆ ಎಲ್ಲರ ಹೊಣೆಯಾಗಿದೆ. ಸಂವಿಧಾನವನ್ನು ವಿರೋಧಿಸಿ ಯಾರೇ ಮಾತನಾಡಿದರೂ ಅದನ್ನು ಖಂಡಿಸುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ADVERTISEMENT

‘ತ್ರಿವಳಿ ತಲಾಖ್ ನಿಷೇಧ ಕಾಯ್ದೆ ಒಳ್ಳೆಯದು. ಆದರೆ ತಲಾಖ್ ನೀಡಿದ ವ್ಯಕ್ತಿಯನ್ನು ಮೂರು ವರ್ಷ ಜೈಲಿಗೆ ಕಳುಹಿಸಿದರೆ ತಲಾಖ್ ಎದುರಿವ ಮಹಿಳೆ ಮತ್ತು ಮಕ್ಕಳ ಗತಿ ಏನು ಎಂಬುದನ್ನು ಸರ್ಕಾರ ಪರಿಶೀಲಿಸಬೇಕು. ಇದನ್ನೇ ನಾವೆಲ್ಲರೂ ಒತ್ತಾಯಿಸುತ್ತಿದ್ದೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.