ADVERTISEMENT

ಕಲಬುರ್ಗಿ ಬಸ್‌ನಿಲ್ದಾಣದಲ್ಲಿ ಯುವಕನ ಕೊಲೆ: ಆರೋಪಿಗಳನ್ನು ಬಂಧಿಸಿದ ಪೊಲೀಸರು

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2021, 5:51 IST
Last Updated 8 ನವೆಂಬರ್ 2021, 5:51 IST
ಅಭಿಷೇಕ ಕೊಲೆ ಪ್ರಕರಣದ ಆರೋಪಿಗಳನ್ನು ಪೊಲೀಸರು ಬಂಧಿಸಿರುವುದು. ದಕ್ಷಿಣ ಉಪವಿಭಾಗದ ಎಸಿಪಿ ಅಂಶುಕುಮಾರ್, ಪಿಎಸ್‌ಐಗಳಾದ ಬಸವರಾಜ, ವಾಹಿದ್ ಕೊತ್ವಾಲ್ ಹಾಗೂ ಸಿಬ್ಬಂದಿ ಇದ್ದರು
ಅಭಿಷೇಕ ಕೊಲೆ ಪ್ರಕರಣದ ಆರೋಪಿಗಳನ್ನು ಪೊಲೀಸರು ಬಂಧಿಸಿರುವುದು. ದಕ್ಷಿಣ ಉಪವಿಭಾಗದ ಎಸಿಪಿ ಅಂಶುಕುಮಾರ್, ಪಿಎಸ್‌ಐಗಳಾದ ಬಸವರಾಜ, ವಾಹಿದ್ ಕೊತ್ವಾಲ್ ಹಾಗೂ ಸಿಬ್ಬಂದಿ ಇದ್ದರು   

ಕಲಬುರಗಿ: ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ನವೆಂಬರ್ 4ರಂದು ನಡೆದ ಅಭಿಷೇಕ ನಂದೂರ (26) ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಭಾನುವಾರ ಆರು ಜನರನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಜಮಾದಾರ ಲೇನ್, ಪೊಲೀಸ್ ಕಾಲೊನಿ ನಿವಾಸಿ ಮುರ್ತುಜಾ ಮೊಹಮ್ಮದ್ ಅಲಿ ರೋತೆ (25), ರಾಮನಗರದ ಸಾಗರ ಮಹಾಂತೇಶ ಭೈರಾಮಡಗಿ (22), ಸಿಐಬಿ ಕಾಲೊನಿಯ ಆಕಾಶ ಮಹಾದೇವ ಜಾಧವ (22), ಗೋದುತಾಯಿ ನಗರ ಸಾಗನೂರನ ಶುಭಂ ಅಶೋಕ ದೊಡ್ಡಮನಿ (23), ಅಮರ ಪ್ಯಾಲೇಸ್ ಬಳಿಯ ಅಶೋಕ ರಾಜಕುಮಾರ ಮೂಲಭಾರತಿ (21) ಹಾಗೂ ಶಾಂತಿ ನಗರ ನಿವಾಸಿ ಕೌಶಿಕ್ ಸೋಮಶೇಖರ ಹಳೆಮನಿ (21) ಎಂಬುವರನ್ನು ಬಂಧಿಸಲಾಗಿದೆ. ಕೃತ್ಯಕ್ಕೆ ಬಳಸಲಾದ ನಾಲ್ಕು ಲಾಂಗ್ ಮಚ್ಚು, ಎರಡು ಬೈಕ್ ಮತ್ತು ಇನ್ನೊವಾ ಕಾರನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ತನಿಖಾಧಿಕಾರಿಯಾಗಿರುವ ದಕ್ಷಿಣ ಉಪವಿಭಾಗದ ಎಸಿಪಿ ಅಂಶಕುಮಾರ್‌ ನೇತೃತ್ವದಲ್ಲಿ ಅಶೋಕ ನಗರ ಪೊಲೀಸ್‌ ಇನ್‌ಸ್ಪೆಕ್ಟರ್ ಪಂಡಿತ ಸಗರ, ರೌಡಿ ನಿಗ್ರಹ ದಳದ ಬಸವರಾಜ ಮಂಜಾಳಕರ ಹಾಗೂ ಸಿಇಎನ್ ಠಾಣೆಯ ಪಿಎಸ್‌ಐ ವಾಹಿದ್ ಕೊತ್ವಾಲ್ ಅವರಿದ್ದ ತಂಡವು ಆರೋಪಿಗಳನ್ನು ಬಂಧಿಸಿದೆ.

ADVERTISEMENT

ಆರೋಪಿಗಳ ವಿರುದ್ಧ ಕೊಲೆ, ಪರಿಶಿಷ್ಟ ಜಾತಿ ದೌರ್ಜನ್ಯ ಪ್ರತಿಬಂಧಕ ಕಾಯ್ದೆ ಸೇರಿದಂತೆ ವಿವಿಧ ಕಲಂಗಳಡಿ ಪ್ರಕರಣ ದಾಖಲಾಗಿತ್ತು.

ಸುಮಾರು ಒಂದೂವರೆ ವರ್ಷದ ಹಿಂದೆ ಅಭಿಷೇಕ ತಂಡ ಕಟ್ಟಿಕೊಂಡು ಸಾಗರ ಭೈರಾಮಡಗಿ ಮೇಲೆ ಹಲ್ಲೆ ನಡೆಸಿದ್ದ ಎಂದು ಆರೋಪಿಸಿ ಪ್ರಕರಣ ದಾಖಲಾಗಿತ್ತು. ಅದನ್ನೇ ಮನಸ್ಸಿನಲ್ಲಿ ಇಟ್ಟುಕೊಂಡು ಆರು ಜನ ಆರೋಪಿಗಳು ಕೊಲೆ ಮಾಡಿದ್ದಾರೆ ಎಂದು ಅಭಿಷೇಕ ತಂದೆ ಚಂದ್ರಕಾಂತ ನಂದೂರು ಅಶೋಕ ನಗರ ಠಾಣೆಗೆ ದೂರು ನೀಡಿದ್ದರು.

ಪೊಲೀಸ್‌ ಕಮಿಷನರ್‌ ಡಾ.ವೈ.ಎಸ್. ರವಿಕುಮಾರ್ ಅವರು ಅಂಶಕುಮಾರ್ ನೇತೃತ್ವದಲ್ಲಿ ತನಿಖಾ ತಂಡವನ್ನು ರಚಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.