ADVERTISEMENT

ಡಿ.18ರಿಂದ 6ನೇ ಎಐಟಿಯುಸಿ ರಾಜ್ಯ ಸಮ್ಮೇಳನ

ಕೆಎಸ್‌ಆರ್‌ಟಿಸಿ ಸ್ಟಾಫ್ ಅಂಡ್ ವರ್ಕರ್ಸ್ ಫೆಡರೇಷನ್

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2018, 9:09 IST
Last Updated 12 ಡಿಸೆಂಬರ್ 2018, 9:09 IST
ಅಲ್ಲಮಪ್ರಭು ಪಾಟೀಲ
ಅಲ್ಲಮಪ್ರಭು ಪಾಟೀಲ   

ಕಲಬುರ್ಗಿ: ಕೆಎಸ್‌ಆರ್‌ಟಿಸಿ ಸ್ಟಾಫ್ ಅಂಡ್ ವರ್ಕರ್ಸ್ ಫೆಡರೇಷನ್‌ನ(ಎಐಟಿಯುಸಿ) 6ನೇ ರಾಜ್ಯ ಸಮ್ಮೇಳನವು ನಗರದ ಹೊಸ ಜೇವರ್ಗಿ ರಸ್ತೆಯ ನೀಲಾಂಬಿಕಾ ಕಲ್ಯಾಣ ಮಂಟಪದಲ್ಲಿ ಡಿ. 18ರಿಂದ 20ರ ವರೆಗೆ ಜರುಗಲಿದೆ.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಸಮ್ಮೇಳನದ ಸ್ವಾಗತ ಸಮಿತಿ ಗೌರವ ಅಧ್ಯಕ್ಷ ಅಲ್ಲಮಪ್ರಭು ಪಾಟೀಲ, ‘ಅಂದು ಬೆಳಿಗ್ಗೆ 11 ಗಂಟೆಗೆ ಕೇಂದ್ರ ಬಸ್ ನಿಲ್ದಾಣದಿಂದ ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತ, ಜಗತ್ ವೃತ್ತದ ಮಾರ್ಗವಾಗಿ ಬೃಹತ್ ರ್‍ಯಾಲಿ ಆಯೋಜಿಸಲಾಗಿದ್ದು, ಸಾರ್ವಜನಿಕ ಉದ್ಯಾನದಲ್ಲಿ ಬಹಿರಂಗ ಅಧಿವೇಶವನ್ನು ಹಮ್ಮಿಕೊಳ್ಳಲಾಗಿದೆ’ ಎಂದರು.

‘ಫೆಡರೇಷನ್‌ನ ಗೌರವ ಅಧ್ಯಕ್ಷ ಡಾ. ಸಿದ್ದನಗೌಡ ಪಾಟೀಲ ಉದ್ಘಾಟಿಸುವರು. ನ್ಯಾಷನಲ್ ಫೆಡರೇಷನ್ ಆಫ್ ಇಂಡಿಯನ್ ರೋಡ್ ಟ್ರಾನ್ಸ್‌ಪೋರ್ಟ್‌ ವರ್ಕರ್ಸ್ (ಎನ್‌ಎಫ್‌ಐಆರ್‌ಟಿಡಬ್ಲ್ಯು) ಅಧ್ಯಕ್ಷ ಎಚ್.ವಿ.ಅನಂತ ಸುಬ್ಬರಾವ್, ಹಿರಿಯ ಉಪಾಧ್ಯಕ್ಷ ಎಂ.ಎಲ್.ಯಾದವ, ಮೇಯರ್ ಮಲ್ಲಮ್ಮ ವಳಕೇರಿ, ಎಐಟಿಯುಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ವಿಜಯಭಾಸ್ಕರ್ ಡಿ.ಎ., ಹಿರಿಯ ವಕೀಲ ಪಿ.ವಿಲಾಸಕುಮಾರ, ಭಾರತೀಯ ಮಹಿಳಾ ಒಕ್ಕೂಟದ ರಾಜ್ಯ ಸಮಿತಿ ಅಧ್ಯಕ್ಷೆ ಎ.ಜ್ಯೋತಿ, ಭಾರತ ಕಮ್ಯುನಿಸ್ಟ್ ಪಕ್ಷದ ರಾಜ್ಯ ಸಹ ಕಾರ್ಯದರ್ಶಿ ಡಾ. ಕೆ.ಎಸ್.ಜನಾರ್ದನ್, ವಕೀಲ ಬಿ.ಆರ್.ಪಾಟೀಲ, ಕೇಂದ್ರೀಯ ಹೋಮಿಯೊಪಥಿಕ್ ಮಂಡಳಿ ಮಾಜಿ ಸದಸ್ಯ ಡಾ. ಸಂಪತರಾವ್ ಭಾಗವಹಿಸುವರು’ ಎಂದು ತಿಳಿಸಿದರು.

ADVERTISEMENT

‘ಹಿರಿಯ ಕಾರ್ಮಿಕ ನಾಯಕರಾದ ಅಡವೆಪ್ಪ ಹಾಗೂ ಎಸ್.ಕೆ.ಕಾಂತಾ ಅವರನ್ನು ಸನ್ಮಾನಿಸಲಾಗುವುದು. ಅಂದು ಸಂಜೆ ಸಂಜೆ 6 ಗಂಟೆಯಿಂದ ಡಿ. 20ರ ಮಧ್ಯಾಹ್ನ 3 ಗಂಟೆಯವರೆಗೆ ನೀಲಾಂಬಿಕಾ ಕಲ್ಯಾಣ ಮಂಟಪದಲ್ಲಿ ಪ್ರತಿನಿಧಿಗಳ ಅಧಿವೇಶನ ನಡೆಯಲಿದೆ’ ಎಂದು ಹೇಳಿದರು.

‘ಕಾರ್ಮಿಕರ ಮೇಲಿನ ಕೆಲಸದ ಒತ್ತಡ, ಪ್ರಯಾಣಿಕರು ಟಿಕೆಟ್ ಕಳೆದುಕೊಂಡಾಗ ನಿರ್ವಾಹಕರಿಗೆ ಶಿಕ್ಷೆ ವಿಧಿಸುವುದು, ಹದಗೆಟ್ಟಿರುವ ಸಾರಿಗೆ ನಿಗಮಗಳ ಆಡಳಿತ ವ್ಯವಸ್ಥೆ ಮತ್ತು ಆರ್ಥಿಕ ಪರಿಸ್ಥಿತಿ, ಕುಸಿದು ಬಿದ್ದಿರುವ ಕೈಗಾರಿಕಾ ಬಾಂಧವ್ಯ, ಕೇಂದ್ರ ಸರ್ಕಾರದ ಖಾಸಗೀಕರಣ ನೀತಿ, ರಾಜ್ಯದಲ್ಲಿ ಖಾಸಗಿ ಬಸ್ ಮಾಲೀಕರ ಕಾನೂನುಬಾಹಿರ ಚಟುವಟಿಕೆಗಳ ಬಗ್ಗೆ ಸಮ್ಮೇಳನದಲ್ಲಿ ಚರ್ಚೆ ನಡೆಯಲಿದೆ’ ಎಂದು ತಿಳಿಸಿದರು.

ಪ್ರಧಾನ ಕಾರ್ಯದರ್ಶಿ ಸಿದ್ದಪ್ಪ ಪಾಲ್ಕಿ, ಎಐಟಿಯುಸಿ ಜಿಲ್ಲಾ ಘಟಕದ ಅಧ್ಯಕ್ಷ ಪ್ರಭುದೇವ ಯಳಸಂಗಿ, ಪ್ರಧಾನ ಕಾರ್ಯದರ್ಶಿ ಎಚ್.ಎಸ್.ಪತಕಿ, ರತ್ನಪ್ಪ ಜೈನ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.