ADVERTISEMENT

ಅಫಜಲಪುರ | ಅಧಿಕಾರಿಗಳ ನಿರ್ಲಕ್ಷ್ಯ: ತಲುಪದ ನೀರು

ಶಿವಾನಂದ ಹಸರಗುಂಡಗಿ
Published 2 ಜನವರಿ 2024, 5:09 IST
Last Updated 2 ಜನವರಿ 2024, 5:09 IST
ಅಫಜಲಪುರ ತಾಲ್ಲೂಕಿನ ಉಡಚಾಣ ಗ್ರಾಮದ ಭೀಮಾ ನದಿ ಬಳಿ ನಿರ್ಮಿಸಲಾದ ಜಾಕ್‌ವೆಲ್
ಅಫಜಲಪುರ ತಾಲ್ಲೂಕಿನ ಉಡಚಾಣ ಗ್ರಾಮದ ಭೀಮಾ ನದಿ ಬಳಿ ನಿರ್ಮಿಸಲಾದ ಜಾಕ್‌ವೆಲ್   

ಅಫಜಲಪುರ: ತಾಲ್ಲೂಕಿನ ಮಾಶಾಳ ಗ್ರಾಮಕ್ಕೆ ಕುಡಿಯುವ ನೀರು ಒದಗಿಸುವ ಉದ್ದೇಶದಿಂದ ಸುಮಾರು 10 ವರ್ಷಗಳ ಹಿಂದೆ ₹7 ಕೋಟಿ ವೆಚ್ಚದಲ್ಲಿ ಉಡಚಾಣ ಗ್ರಾಮದ ಭೀಮಾ ನದಿ ಜಾಕ್‌ವೆಲ್ ಹತ್ತಿರದಿಂದ ನೀರು ಸರಬರಾಜು ಮಾಡಲು ಕಾಮಗಾರಿ ಕೈಗೆತ್ತಿಕೊಂಡಿದೆ. ಆದರೂ ಗ್ರಾಮದ ಜನರಿಗೆ ಈವರೆಗೆ ಸಮರ್ಪಕವಾಗಿ ಕುಡಿಯುವ ನೀರು ಸಿಗುತ್ತಿಲ್ಲ.

ಬಹು ಗ್ರಾಮ ಕುಡಿಯುವ ನೀರು ಯೋಜನೆಯಡಿ ಹಣ ಮಂಜೂರಾಗಿ ಅರೆಬರೆ ಕಾಮಗಾರಿ ಮಾಡಲಾಗಿದೆ. ಬರಗಾಲದಿಂದಾಗಿ ನದಿ ಪ್ರಮಾಣದಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದೆ. ಅಲ್ಪಸ್ವಲ್ಪ ನೀರು ಇದ್ದರೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ನೀರು ಪೂರೈಕೆ ಆಗುತ್ತಿಲ್ಲ ಎಂಬುದು ಗ್ರಾಮಸ್ಥರ ಆರೋಪ.

‘ಪೈಪ್‌ಲೈನ್‌ ಕಾಮಗಾರಿ ಹಾಗೂ ರಿಪೇರಿಗೆ ನೀಡಿದ ಅನುದಾನ ದುರ್ಬಳಕೆ ಮಾಡಿಕೊಳ್ಳಲಾಗಿದೆ. ಜಿಲ್ಲಾ ಪಂಚಾಯಿತಿ ಸಿಇಒ ಅವರು ಬಹು ಗ್ರಾಮ ಕುಡಿಯುವ ನೀರಿನ ಯೋಜನೆಯ ಬಗ್ಗೆ ಸ್ಥಳ ಪರಿಶೀಲನೆ ಮಾಡಬೇಕು. ತುರ್ತಾಗಿ ಗ್ರಾಮಕ್ಕೆ ಕುಡಿಯುವ ನೀರು ಪೂರೈಕೆ ಮಾಡುವ ವ್ಯವಸ್ಥೆ ಮಾಡಬೇಕು’ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಣುಬಾಯ್ ರೋಹಿದಾಸ್ ಚೌಹಾಣ್.

ADVERTISEMENT

ಮಾಶಾಳ ತಾಲ್ಲೂಕಿನಲ್ಲಿಯೇ ಅತಿ ದೊಡ್ಡ ಗ್ರಾಮವಾಗಿದ್ದು, ಸುಮಾರು 10 ಸಾವಿರ ಜನಸಂಖ್ಯೆ ಹೊಂದಿದೆ. ಕುಡಿಯುವ ನೀರಿನ ಸಮಸ್ಯೆ ಹೋಗಲಾಡಿಸಲು ಗ್ರಾಮದಲ್ಲಿ ತಲಾ ₹19 ಲಕ್ಷದಲ್ಲಿ 4 ಶುದ್ಧ ಕುಡಿಯುವ ನೀರಿನ ಘಟಕವನ್ನು ಮಂಜೂರು ಮಾಡಲಾಗಿದೆ. ಆದರೆ ನಿರ್ವಹಣೆ ಇಲ್ಲದೇ ಅವು ಹಾಳಾಗಿ ಹೋಗಿವೆ. ಮಾಶಾಳ ಗ್ರಾಮದಲ್ಲಿ ವಿವಿಧ ಯೋಜನೆ ಅಡಿಯಲ್ಲಿ ಕೊರೆದಿರುವ ಕೊಳವೆ ಬಾವಿಗಳಲ್ಲಿ ಪ್ಲೊರೈಡ್ ಅಂಶ ಇರುವದರಿಂದ ಜನರಿಗೆ ಕಿಡ್ನಿ ಸಮಸ್ಯೆ, ಮೊಳಕಾಲು ಸಮಸ್ಯೆ ಬರುತ್ತಿವೆ ಎನ್ನುತ್ತಾರೆ ಗ್ರಾಮಸ್ಥರು.

ಮಾಶಾಳ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಗುತ್ತಿದಾರರಿಗೆ ಜೇಬು ತುಂಬಿಸಿಕೊಳ್ಳುವ ಯೋಜನೆಯಾಗಿದೆ. ಕಳಪೆ ಕಾಮಗಾರಿ ಕುರಿತು ಸೂಕ್ತ ತನಿಖೆ ಮಾಡಿ ಕ್ರಮ ಜರುಗಿಸಬೇಕು.
- ಶಿವು ಪ್ಯಾಟಿ, ಗ್ರಾಮ ಪಂಚಾಯಿತಿ ಸದಸ್ಯ

‘ಭೀಮಾನದಿಯಲ್ಲಿ ನೀರು ಕಡಿಮೆಯಾಗಿರುವುದರಿಂದ ಜಾಕ್‌ವೆಲ್‌ಗೆ ನೀರು ಬರುತ್ತಿಲ್ಲ. ಜೆಸಿಬಿ ಮೂಲಕ ಹೊಂಡ ಕೊರೆಯಲಾಗಿದೆ. ಗ್ರಾಮಕ್ಕೆ ಸರಬರಾಜು ಮಾಡುವ ಮೋಟರ್‌ ಸುಟ್ಟಿದ್ದು ರಿಪೇರಿ ಮಾಡಿಸಿ ನೀರು ಬಿಡಲಾಗುವುದು’ ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಶಂಕರ್ ರುಭೀಕರ ‘ಪ್ರಜಾವಾಣಿ’ಗೆ ತಿಳಿಸಿದರು.

‘ಶುದ್ಧ ಕುಡಿಯುವ ನೀರಿನ ಘಟಕದ ಗುತ್ತಿಗೆಯನ್ನು ಹೈದರಾಬಾದ್‌ ಮೂಲದ ಕಂಪನಿಗೆ ನೀಡಲಾಗಿತ್ತು. ಅವರು ಅಪೂರ್ಣ ಮಾಡಿ ಹೋಗಿದ್ದಾರೆ. ಅವುಗಳ ಪರಿಸ್ಥಿತಿ ಬಗ್ಗೆ ಪರಿಶೀಲನೆ ಮಾಡಿ ಜನರಿಗೆ ಉಪಯೋಗವಾಗುವಂತೆ ಮಾಡಲಾಗುವುದು ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.