ಯಡ್ರಾಮಿ: ತಾಲ್ಲೂಕಿನ ಯಲಗೋಡ ಮಠದ ಗುರುಲಿಂಗ ಸ್ವಾಮೀಜಿ ಅವರ ಕಾರು, ಕಲಬುರಗಿ ತಾಲ್ಲೂಕಿನ ಕೂಡಿ ಕ್ರಾಸ್ ಹತ್ತಿರ ಶುಕ್ರವಾರ ಡಿಕ್ಕಿ ಹೊಡೆದ ಪರಿಣಾಮ ದಂಪತಿ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಸ್ವಾಮೀಜಿಯೂ ಸೇರಿದಂತೆ ಕಾರಿನಲ್ಲಿದ್ದ ಮೂವರಿಗೆ ಗಾಯಗಳಾಗಿವೆ.
‘ಕೋಣಹಿಪ್ಪರಗಾ ಗ್ರಾಮದ ನಿವಾಸಿಗಳಾದ ಶಿವಶರಣಪ್ಪ (60), ಗುಂಡಮ್ಮ (47) ಮೃತಪಟ್ಟವರು. ಹೊಲದ ಕೆಲಸಕ್ಕೆ ತೆರಳಿದ್ದ ಈ ದಂಪತಿ ಮರಳಿ ಮನೆಗೆ ಹೊರಟಿದ್ದರು. ಜೇವರ್ಗಿ ಮಾರ್ಗದ ರಸ್ತೆಯ ಬದಿಯಲ್ಲಿ ನಡೆದುಕೊಂಡು ಹೊರಟಾಗ ವೇಗವಾಗಿ ಬಂದ ಸ್ವಾಮೀಜಿ ಅವರ ಕಾರು, ನೇರವಾಗಿ ದಂಪತಿ ಮೇಲೆಯೇ ಹರಿಯಿತು. ತೀವ್ರ ಗಾಯಗೊಂಡು, ರಕ್ತಸ್ರಾವದಿಂದ ದಂಪತಿ ಕೆಲವೇ ಕ್ಷಣಗಳಲ್ಲಿ ಮೃತಪಟ್ಟರು’ ಎಂದು ಸಂಚಾರ ಠಾಣೆ–1ರ ಪೊಲೀಸರು ತಿಳಿಸಿದ್ದಾರೆ.
‘ಅಪಘಾತಕ್ಕೆ ಕಾರು ಚಾಲಕನ ನಿರ್ಲಕ್ಷ್ಯವೇ ಕಾರಣವಾಗಿದೆ. ವೇಗವಾಗಿ ಬಂದ ಕಾರು ದಂಪತಿಗೆ ಡಿಕ್ಕಿ ಹೊಡೆದು, ರಸ್ತೆ ಪಕ್ಕದಲ್ಲಿ ಉರುಳಿ ಬಿದ್ದಿದೆ. ಕಾರಿನಲ್ಲಿನ ‘ಏರ್ಬ್ಯಾಗ್’ ತೆರೆದುಕೊಂಡಿದ್ದರಿಂದ ಅದರ ಚಾಲಕ, ಪಕ್ಕದಲ್ಲಿ ಕುಳಿತಿದ್ದ ಸ್ವಾಮೀಜಿ ಹಾಗೂ ಹಿಂದೆ ಕುಳಿತಿದ್ದ ಇನ್ನೊಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗಾಯಗೊಂಡ ಅವರನ್ನು ಕಲಬುರಗಿಯ ಆಸ್ಪತ್ರೆಗೆ ಸಾಗಿಸಲಾಗಿದೆ’ ಎಂದೂ ಪೊಲೀಸರು ಮಾಹಿತಿ ನೀಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.