ಕಲಬುರಗಿ: ಪತ್ನಿ ಜೈಲರ್, ಪತಿಯೇ ಕೈದಿ! ಇಂಥ ಕಾಕತಾಳೀಯಕ್ಕೆ ಇಲ್ಲಿನ ಕೇಂದ್ರ ಕಾರಾಗೃಹ ಶುಕ್ರವಾರ ಸಾಕ್ಷಿಯಾಯಿತು.
ಪಿಎಸ್ಐ ನೇಮಕಾತಿ ಪರೀಕ್ಷೆಯ ಹಗರಣದಲ್ಲಿ ಬಂಧಿತರಾದ, ಇಲ್ಲಿನ ಕೆಎಸ್ಆರ್ಪಿ ಸಹಾಯಕ ಕಮಾಂಡೆಂಟ್ (ಡಿವೈಎಸ್ಪಿ) ವೈಜನಾಥ ಕಲ್ಯಾಣಿ ರೇವೂರ ಅವರನ್ನು ಶುಕ್ರವಾರ ಕಲಬುರಗಿ ಕೇಂದ್ರ ಕಾರಾಗೃಹಕ್ಕೆ ಸೇರಿಸಲಾಯಿತು. ವೈಜನಾಥ ಅವರ ಪತ್ನಿ ಸುನಂದಾ ಇದೇ ಕಾರಾಗೃಹದ ಜೈಲರ್ ಆಗಿದ್ದಾರೆ.
ಪೊಲೀಸ್ ವಾಹನದಲ್ಲಿ ಆರೋಪಿಯನ್ನು ಕರೆತಂದ ಸಿಐಡಿ ಅಧಿಕಾರಿಗಳು ಜೈಲಿನ ಮುಂದೆ ನಿಲ್ಲಿಸಿದರು. ಅವಸರದಲ್ಲಿ ಇಳಿದ ವೈಜನಾಥ, ಲಗುಬಗೆಯಿಂದ ಜೈಲಿನೊಳಗೆ ಧಾವಿಸತೊಡಗಿದರು. ಬಾಗಿಲ ಮುಂದೆ ನಿಂತಿದ್ದ ಸಿಬ್ಬಂದಿ ಅವರನ್ನು ತಡೆದು ತಪಾಸಣೆ ನಡೆಸಿ ಒಳಗೆ ಬಿಟ್ಟರು.
ಇದೇ ಹಗರಣದಲ್ಲಿ ಈಗಾಗಲೇ ಜೈಲು ಸೇರಿರುವ ದಿವ್ಯಾ ಹಾಗರಗಿ, ಜ್ಯೋತಿ ಪಾಟೀಲ ಹಾಗೂ ಜ್ಞಾನಜ್ಯೋತಿ ಶಾಲೆಯ ಶಿಕ್ಷಕಿಯರು ಇರುವ ಬ್ಯಾರಕ್ನ ಭದ್ರತಾ ಉಸ್ತುವಾರಿಯನ್ನು ಸುನಂದಾ ಅವರೇ ನೋಡಿಕೊಳ್ಳುತ್ತಿದ್ದಾರೆ.
ವೈಜನಾಥ ಅವರ ಸಿಐಡಿ ಕಸ್ಟಡಿ ಶುಕ್ರವಾರ (ಮೇ 13)ಕ್ಕೆ ಮುಗಿದ ಕಾರಣ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. 3ನೇ ಹೆಚ್ಚುವರಿ ಜೆಎಂಎಫ್ಸಿ ನ್ಯಾಯಾಧೀಶರಾದ ಬಸವರಾಜ ನೇಸರ್ಗಿ ಅವರು ವಿಚಾರಣೆ ನಡೆಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದರು. ಸಹಾಯಕ ಸರ್ಕಾರಿ ಅಭಿಯೋಜಕ ಶಿವಶರಣಪ್ಪ ಹೋತಪೇಟ ಅವರು ಸಿಐಡಿ ಪರ ವಾದ ಮಂಡಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.