ADVERTISEMENT

‘ಕೂಲಿ ಹಣ ಸಾಲದ ಖಾತೆಗೆ ಜಮೆ; ಬ್ಯಾಂಕ್ ಎದುರು ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 6 ಜೂನ್ 2025, 15:49 IST
Last Updated 6 ಜೂನ್ 2025, 15:49 IST
ಅಫಜಲಪುರ ತಾಲ್ಲೂಕಿನ ಗೊಬ್ಬುರ್ (ಬಿ) ಗ್ರಾಮದ ಕರ್ನಾಟಕ ಗ್ರಾಮೀಣ ಬ್ಯಾಂಕ್‌ನವರು ಕೂಲಿ ಹಣವನ್ನು ಸಾಲದ ಖಾತೆಗೆ ಜಮಾ ಮಾಡುತ್ತಿರುವುದನ್ನು ಖಂಡಿಸಿ ಶನಿವಾರ ಬ್ಯಾಂಕ್ ಎದುರುಗಡೆ ಕರ್ನಾಟಕ ಪ್ರಾಂತ ರೈತ ಸಂಘ ಹಾಗೂ ನರೇಗಾ ಕೂಲಿಕಾರರು ಪ್ರತಿಭಟನೆ ನಡೆಸಿದರು
ಅಫಜಲಪುರ ತಾಲ್ಲೂಕಿನ ಗೊಬ್ಬುರ್ (ಬಿ) ಗ್ರಾಮದ ಕರ್ನಾಟಕ ಗ್ರಾಮೀಣ ಬ್ಯಾಂಕ್‌ನವರು ಕೂಲಿ ಹಣವನ್ನು ಸಾಲದ ಖಾತೆಗೆ ಜಮಾ ಮಾಡುತ್ತಿರುವುದನ್ನು ಖಂಡಿಸಿ ಶನಿವಾರ ಬ್ಯಾಂಕ್ ಎದುರುಗಡೆ ಕರ್ನಾಟಕ ಪ್ರಾಂತ ರೈತ ಸಂಘ ಹಾಗೂ ನರೇಗಾ ಕೂಲಿಕಾರರು ಪ್ರತಿಭಟನೆ ನಡೆಸಿದರು   

ಅಫಜಲಪುರ: ನರೇಗಾ ಕೂಲಿ ಕಾರ್ಮಿಕರ ಹಣವನ್ನು ಗೊಬ್ಬುರ್ (ಬಿ) ಗ್ರಾಮದ ಕರ್ನಾಟಕ ಗ್ರಾಮೀಣ ಬ್ಯಾಂಕ್‌ ಅಧಿಕಾರಿಗಳು ಸಾಲದ ಖಾತೆಗೆ ಜಮೆ ಮಾಡುತ್ತಿರುವುದನ್ನು ಪ್ರತಿಭಟಿಸಿ ಶನಿವಾರ ಬ್ಯಾಂಕ್ ಎದುರು ಕರ್ನಾಟಕ ಪ್ರಾಂತ ರೈತ ಸಂಘ ಹಾಗೂ ನರೇಗಾ ಕೂಲಿಕಾರರು ಪ್ರತಿಭಟನೆ ನಡೆಸಿದರು.

ಈ ವೇಳೆ ಮಾತನಾಡಿದ ತಾಲ್ಲೂಕು ಪ್ರಾಂತ ರೈತ ಸಂಘದ ಅಧ್ಯಕ್ಷ ಶ್ರೀಮಂತ ಬಿರಾದಾರ, ‘ಕೂಲಿ ಹಣವನ್ನು ಬ್ಯಾಂಕ್‌ ಅಧಿಕಾರಿಗಳು ಸಾಲದ ಖಾತೆಗೆ ಜಮೆ ಮಾಡುತ್ತಾರೆ. ಸದ್ಯಕ್ಕೆ ಮುಂಗಾರು ಮಳೆ ಅನುಕೂಲಕರವಾಗಿದ್ದು ಸಣ್ಣ ರೈತರು ತಿಂಗಳಗಟ್ಟಲೆ ನರೇಗಾದಲ್ಲಿ ಕೆಲಸ ಮಾಡಿ ಅದೇ ಕೂಲಿ ಹಣದಲ್ಲಿ ಬಿತ್ತನೆ ಮಾಡಬೇಕೆಂದರೆ ಬ್ಯಾಂಕ್‌ನವರು ಸಾಲದ ಖಾತೆಗೆ ಹಣ ಜಮೆ ಮಾಡುತ್ತಿದ್ದಾರೆ. ಈ ಬಗ್ಗೆ ಬ್ಯಾಂಕ್‌ ಮೇಲಧಿಕಾರಿಗಳು ಮತ್ತು ಜಿಲ್ಲಾಧಿಕಾರಿಗಳು ಕ್ರಮ ಜರುಗಿಸಬೇಕು. ವಾರದಲ್ಲಿ ಕೂಲಿಕಾರರ ಹಣವನ್ನು ಅವರ ಬ್ಯಾಂಕ್ ಖಾತೆಗೆ ಜಮೆ ಮಾಡದಿದ್ದರೆ ಜಿಲ್ಜೆ ಹಾಗೂ ರಾಜ್ಯಮಟ್ಟದಲ್ಲಿ ಹೋರಾಟ ಮಾಡುತ್ತೇವೆ’ ಎಂದು ತಿಳಿಸಿದರು.

ಪ್ರಾಂತ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಗುರು ಚಾಂದ್ಕೋಟೆ ಮಾತನಾಡಿ, ‘ರೈತರಿಗೆ ಮಂಜುರಾಗಿರುವ ಸಹಾಯಧ ಸೇರಿದಂತೆ ಇತರೆ ಯಾವುದೇ ಕಾರ್ಯಕ್ರಮದಲ್ಲಿ ಅನುದಾನ ಬಂದರೆ ಬ್ಯಾಂಕ್‌ನವರು ಸಾಲದ ಖಾತೆಗೆ ಜಮೆ ಮಾಡುತ್ತಾರೆ. ಉಳಿತಾಯ ಖಾತೆಯಲ್ಲಿ ಜಮೆ ಆಗಿರುವ ಹಣವನ್ನು ಸಾಲದ ಖಾತೆಗೆ ವರ್ಗಾವಣೆ ಮಾಡಬಾರದು. ಇದರಿಂದ ರೈತರಿಗೆ ಕಷ್ಟವಾಗುತ್ತದೆ. ಇದೇ ಮುಂದುವರಿದರೆ ನಾವು ಎಲ್ಲಾ ಬ್ಯಾಂಕ್‌ಗಳ ಮುಂದೆ ಧರಣಿ ಮಾಡುತ್ತೇವೆ’ ಎಂದು ತಿಳಿಸಿದರು.

ADVERTISEMENT

‘ಬ್ಯಾಂಕ್‌ಗಳಲ್ಲಿ ದಲ್ಲಾಳಿಗಳ ಕಾಟ ಹೆಚ್ಚಾಗಿದೆ. ದಲ್ಲಾಳಿಗಳು ಮತ್ತು ಬ್ಯಾಂಕ್‌ನವರು ಕೂಡಿ ಹಣ ಪಡೆದು ಸಾಲ ಮಂಜೂರು ಮಾಡುತ್ತಾರೆ. ಇದರಿಂದ ಅನುಕೂಲಸ್ಥರಿಗೆ ಸಾಲ ದೊರೆಯುತ್ತಿದೆ. ಇದರ ಬಗ್ಗೆ ಮೇಲಿಂದ ಮೇಲೆ ರಾಜ್ಯ ಮತ್ತು ಜಿಲ್ಲೆಯ ಬ್ಯಾಂಕ್ ಉನ್ನತ ಅಧಿಕಾರಿಗಳು ಭೇಟಿ ನೀಡಿ ಸಾಲಕ್ಕಾಗಿ ಬ್ಯಾಂಕ್‌ಗೆ ಬಂದಿರುವ ಬಡ ರೈತರನ್ನ ಮಾತನಾಡಿಸಿ ಅವರ ಸಮಸ್ಯೆ ಕೇಳಬೇಕು. ಉನ್ನತ ಅಧಿಕಾರಿಗಳ ಮೊಬೈಲ್ ಸಂಖ್ಯೆಗಳನ್ನ ಪ್ರದರ್ಶಿಸಬೇಕು. ವಿವಿಧ ಪಿಂಚಣಿ ಹಣವನ್ನೂ ಸಾಲದ ಖಾತೆಗೆ ಜಮೆ ಮಾಡುತ್ತಾರೆ. ಈ ಬಗ್ಗೆ ಕ್ರಮ ಜರುಗಿಸಬೇಕು’ ಎಂದು ಮುಖಂಡರಾದ ಭೀಮಶೆಟ್ಟಿ, ನಿಂಗಬಸಪ್ಪ ತಿಳಿಸಿದರು.

ಮುಖಂಡರಾದ ಬಾಬು ಮೇಳಕುಂದಿ, ಗುರುನಾಥ್ ಚಾಂದ್ಕೋಟೆ, ಕಾಶಿನಾಥ್ ಮಾಂಗ, ಸಾಹಿ ಬಣ್ಣ ಕೊರಬ, ಕರ್ನಾಟಕ ಪ್ರಾಂತ ಕೃಷಿ ಹುಲಿತಾರರ ಸಂಘದ ಜಿಲ್ಲಾಧ್ಯಕ್ಷ ಭೀಮಶೆಟ್ಟಿ ಹಾಗೂ ಶೇಖಮ್ಮ ಕುರಿ ಕೂಲಿಕಾರ ಸಂಘದ ಜಿಲ್ಲಾ ಉಪಾಧ್ಯಕ್ಷ ನಾಗರಾಜ ಅವರಳ್ಳಿ, ಅಶೋಕ್ ಚೌಹಾಣ್ ಮತ್ತಿತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.