
ಕಲಬುರಗಿ: ‘ಅಲ್ಲಮಪ್ರಭುಗಳು ಶರಣ ಚಳವಳಿಯ ಆತ್ಮಬಲವಾಗಿದ್ದರು’ ಎಂದು ರಾಜ್ಯ ಪತ್ರಗಾರ ಇಲಾಖೆ ಕಲಬುರಗಿ ವಿಭಾಗದ ಹಿರಿಯ ಉಪನಿರ್ದೇಶಕ ವೀರಶೆಟ್ಟಿ ಬಿ. ಗಾರಂಪಳ್ಳಿ ಹೇಳಿದರು.
ನಗರದ ಬಸವ ಸಮಿತಿಯ ಅನುಭವ ಮಂಟಪದಲ್ಲಿ ಅಣ್ಣಾರಾವ ಪಾಟೀಲ ಸರಡಗಿ ಸ್ಮರಣಾರ್ಥ ಭಾನುವಾರ ಜರುಗಿದ ಅರಿವಿನ ಮನೆ ದತ್ತಿ ಉಪನ್ಯಾಸದಲ್ಲಿ ಅವರು ಮಾತನಾಡಿದರು.
‘ಅಲ್ಲಮನ ವಚನಗಳಲ್ಲಿ ಗೂಡಾರ್ಥವಿದೆ. ಚರಿತ್ರೆಯ ಹಂಗಿಲ್ಲ, ಒಂದೆಡೆ ನೆಲೆ ನಿಲ್ಲುತ್ತಿರಲಿಲ್ಲ. ಪ್ರಭುಲಿಂಗಲೀಲೆ ಓದುವಾಗ ಎಚ್ಚರವಿರಬೇಕೆಂದು ಶಿಶುನಾಳ ಶರೀಫರು ಹೇಳುತ್ತಾರೆ. ಭಾರತವು ದರ್ಶನಗಳ ನೆಲೆಬೀಡಾಗಿದೆ. ಈ ದರ್ಶನಗಳಲ್ಲಿಯೇ ಅಲ್ಲಮಪ್ರಭುವಿನ ದರ್ಶನ ವಿಶಿಷ್ಟವಾಗಿದೆ. ಅಲ್ಲಮನ ಬೆಡಗು ಬೆರಗುಗೊಳಿಸುವಂತದ್ದು’ ಎಂದು ಹೇಳಿದರು.
‘12ನೇ ಶತಮಾನದ ಚಳವಳಿ ಅರಿಯಲು ಸಾಮಾಜಿಕ ಮತ್ತು ರಾಜಕೀಯ ಚಳವಳಿಯ ಅರಿವಿರಬೇಕು. ಪಂಪ ಹೇಳುವಂತೆ ಛಲ ಹಾಗೂ ಗುಣವೇ ಕುಲವಾಗಿದೆ. ಮಾನವ ಜಾತಿ ತಾನೊಂದೇ ವಲಂ ಆಗಿದೆ. ಕೃತಕ ಅಧ್ಯಾತ್ಮಿಕತೆಯನ್ನು ಅಲ್ಲಮ ತಿರಸ್ಕರಿಸುತ್ತಾರೆ. ದೇವರು ಕಲ್ಲಾದರೆ ನಾನೇನಾಗಲಿ ಎಂದು ಪ್ರಶ್ನಿಸುತ್ತಾರೆ. ಬಸವಣ್ಣ ಅಂತರ್ಮುಖಿ ಆಗಿದ್ದರೂ ಸಮಾಜಮುಖಿ ಆಗಿದ್ದರು. ಅಲ್ಲಮ ಹೆಚ್ಚು ಅಂತರ್ಮುಖಿ ಆಗಿದ್ದರು. ದೇಹ ದಂಡಿಸಿದರೆ ದೇವರು ದೊರಕಲಾರ ಎಂಬುದು ಅಲ್ಲಮನ ನಿಲುವಾಗಿತ್ತು’ ಎಂದು ಹೇಳಿದರು.
ಕಲಬುರಗಿ ಬಸವ ಸಮಿತಿ ಅಧ್ಯಕ್ಷೆ ವಿಲಾಸವತಿ ಖೂಬಾ, ಉಪಾಧ್ಯಕ್ಷೆ ಜಯಶ್ರೀ ದಂಡೆ, ಕಾರ್ಯದರ್ಶಿ ಆನಂದ ಸಿದ್ಧಾಮಣಿ, ಕೆ.ಎಸ್.ವಾಲಿ, ಶರಣಗೌಡ ಪಾಟೀಲಪಾಳ, ಬಂಡಪ್ಪ ಕೇಸುರ, ದತ್ತಿ ದಾಸೋಹಿಗಳಾದ ನಾಗೇಂದ್ರಪ್ಪ ಅಣ್ಣಾರಾವ ಪಾಟೀಲ, ಉದ್ದಂಡಯ್ಯ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.