ಕಲಬುರ್ಗಿ: ಜಿಲ್ಲೆಯ ಆಳಂದ ತಾಲ್ಲೂಕಿನ ವಿವಿಧೆಡೆ ಭಾನುವಾರ ರಾತ್ರಿ ಸುರಿದ ಭಾರಿ ಮಳೆಗೆ ಅಮರ್ಜಾ ಅಣೆಕಟ್ಟೆ ಸೇರಿದಂತೆ ಹಲವು ಕೆರೆಗಳು ನೀರಿನಿಂದ ಭರ್ತಿಯಾಗಿವೆ. ತಾಲ್ಲೂಕಿನ ಖಜೂರಿ ವಲಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆ ಬಂದಿದೆ. ರಾತ್ರಿಯಿಡೀ ಸುರಿದ ಮಳೆಗೆ ಆ ಭಾಗದಲ್ಲಿನ ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ. ಅಳಂಗಾ, ಸಾಲೇಗಾಂವ, ಮಟಕಿ, ತೆಲೆಕುಣಿ, ಹೊನ್ನಳ್ಳಿ, ದಣ್ಣೂರು, ಶುಕ್ರವಾಡಿ ಕೆರೆಗಳು ಸಂಪೂರ್ಣ ಭರ್ತಿಯಾಗಿವೆ.
ಬೆಳಗ್ಗೆ ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಿಗೆ ಹೋಗಲು ಸಹ ಅಡ್ಡಿಯಾಯಿತು. ಆಳಂದ ಪಟ್ಟಣ ಸಂಪರ್ಕಿಸುವ ಆಳಂದ–ತಡಕಲ ಮಧ್ಯದ ದಬದಬಿ ಹಳ್ಳ ತುಂಬಿ ಹರಿದ ಪರಿಣಾಮ ಸಂಚಾರವು ಸ್ಥಗಿತಗೊಂಡಿದೆ. ಅದೇ ರೀತಿ ಆಳಂದ–ನಿರಗುಡಿ, ಶಕಾಪುರ, ಕಿಣ್ಣಿ ಸುಲ್ತಾನ, ಮಟಕಿ ಸೇತುವೆ ಮೇಲಿಂದ ನೀರು ಹರಿದಿದೆ. ಇದರಿಂದ ಸಾರ್ವಜನಿಕರು ಬೆಳಗ್ಗೆ ಸಂಚರಿಸಲು ಸಾಧ್ಯಾವಾಗಲಿಲ್ಲ. ಮೂರು ವರ್ಷದಿಂದ ಅಮರ್ಜಾ ಅಣೆಕಟ್ಟೆಗೆ ನೀರಿನ ಅಭಾವ ಕಾಡುತ್ತಿತ್ತು. ಇದರಿಂದ ಪಟ್ಟಣಕ್ಕೆ ವಾರಕ್ಕೊಮ್ಮೆ ನೀರು ಪೂರೈಕೆ ಮಾಡಲಾಗುತ್ತಿದೆ.
ಭಾನುವಾರ ರಾತ್ರಿ ಸುರಿದ ಮಳೆಗೆ ಶೇ 40ರಷ್ಟು ಅಣೆಕಟ್ಟೆ ತುಂಬಿದೆ ಎಂದು ರೈತ ಪ್ರಶಾಂತ ಪಾಟೀಲ ಹೇಳಿದರು. ಆಳಂದ, ಕೊರಳ್ಳಿ, ಖಜೂರಿ ಸುತ್ತಲೂ ಗ್ರಾಮದಲ್ಲಿ ಮಳೆಯ ಪ್ರಮಾಣ ಅಧಿಕವಾಗಿದೆ. ಆದರೆ ತಾಲ್ಲೂಕಿನ ಮಾದನ ಹಿಪ್ಪರಗಾ, ನರೋಣಾ ವಲಯದಲ್ಲಿ ಅಲ್ಪಪ್ರಮಾಣದಲ್ಲಿ ಮಳೆ ಸುರಿದಿದೆ.
ಕಲಬುರ್ಗಿ ನಗರದಲ್ಲಿಯೂ ಸೋಮವಾರ ಬೆಳಿಗ್ಗೆಯಿಂದ ಜಿಟಿ ಜಿಟಿ ಮಳೆ ಸುರಿಯುತ್ತಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.