ADVERTISEMENT

ಕಲಬುರಗಿ | ಪ್ರಶ್ನಿಸುವುದು ಕಲಿತರೆ ಜೀವನ ಉಜ್ವಲ: ನಟ ನೀನಾಸಂ ಸತೀಶ್

ಡಾ.ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ನಟ ನೀನಾಸಂ ಸತೀಶ್ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2023, 5:31 IST
Last Updated 15 ಏಪ್ರಿಲ್ 2023, 5:31 IST
ಕಲಬುರಗಿಯ ಜಗತ್ ವೃತ್ತದಲ್ಲಿ ಆಯೋಜಿಸಿದ್ದ ಅಂಬೇಡ್ಕರ್‌ ಜಯಂತ್ಯುತ್ಸವದಲ್ಲಿ ಚಿತ್ರನಟ ನೀನಾಸಂ ಸತೀಶ್‌ ಮಾತನಾಡಿದರು. ವಿಶಾಲ ದರ್ಗಿ, ದತ್ತಾತ್ರೇಯ ಪಾಟೀಲ ರೇವೂರ, ವಿಠ್ಠಲ ದೊಡ್ಡಮನಿ, ಧಮ್ಮನಾಗ ಭಂತೇಜಿ, ಸಂಘಾನಂದ ಭಂತೇಜಿ ಇದ್ದರು
ಕಲಬುರಗಿಯ ಜಗತ್ ವೃತ್ತದಲ್ಲಿ ಆಯೋಜಿಸಿದ್ದ ಅಂಬೇಡ್ಕರ್‌ ಜಯಂತ್ಯುತ್ಸವದಲ್ಲಿ ಚಿತ್ರನಟ ನೀನಾಸಂ ಸತೀಶ್‌ ಮಾತನಾಡಿದರು. ವಿಶಾಲ ದರ್ಗಿ, ದತ್ತಾತ್ರೇಯ ಪಾಟೀಲ ರೇವೂರ, ವಿಠ್ಠಲ ದೊಡ್ಡಮನಿ, ಧಮ್ಮನಾಗ ಭಂತೇಜಿ, ಸಂಘಾನಂದ ಭಂತೇಜಿ ಇದ್ದರು   

ಕಲಬುರಗಿ: ‘ನಾವೆಲ್ಲ ಕೈ ಕಟ್ಟಿ ಹಿಂದೆ ನಿಂತರೆ ಡಾ.ಬಿ.ಆರ್. ಅಂಬೇಡ್ಕರ್ ಅವರ ಆದರ್ಶಗಳನ್ನು ಪಾಲನೆ ಮಾಡಿದಂತೆ ಆಗುವುದಿಲ್ಲ. ನಾವೆಲ್ಲ ಮುಂದೆ ಬಂದು ಪ್ರಶ್ನಿಸುವುದನ್ನು ಕಲಿಯಬೇಕಾಗಿದೆ. ನಾವು ಪ್ರಶ್ನೆ ಮಾಡುವುದು ಕಲೆತರೆ ನಮ್ಮ ಜೀವನ ಉಜ್ವಲವಾಗುತ್ತದೆ’ ಎಂದು ಚಿತ್ರನಟ ನೀನಾಸಂ ಸತೀಶ್ ಅಭಿಪ್ರಾಯಪಟ್ಟರು.

ನಗರದ ಜಗತ್ ವೃತ್ತದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ 132ನೇ ಜಯಂತ್ಯುತ್ಸವ ಸಮಿತಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ಪ್ರಧಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‌‘ನಮ್ಮೆಲ್ಲರಿಗೂ ಮತ ಎಂಬ ಮಹಾನ್ ಶಕ್ತಿಯನ್ನು ಅಂಬೇಡ್ಕರರು ಕೊಟ್ಟಿದ್ದಾರೆ. ಅದರ ಬಳಕೆ ಮಾಡಿಕೊಂಡು ನಾವೆಲ್ಲ ಅಭಿವೃದ್ಧಿ ಹೊಂದಬೇಕಾಗಿದೆ’ ಎಂದರು.

‘ಬಸವಣ್ಣ, ಅಂಬೇಡ್ಕರ್, ಕುವೆಂಪು ಅವರ ವಿಚಾರಧಾರೆಗಳನ್ನು ಬೇರೆಯರಿಗೆ ತಿಳಿಸುವ ಕೆಲಸ ಮಾಡಬೇಕು. ಅಂಬೇಡ್ಕರ್ ನಮ್ಮೆಲ್ಲರಲ್ಲಿ ಬದುಕಿದ್ದಾರೆ. ಅವರ ವಿಚಾರಗಳನ್ನು ನಾವು ಅನುಸರಿಸಬೇಕಾಗಿದೆ’ ಎಂದು ತಿಳಿಸಿದರು.

ADVERTISEMENT

ಕೆಕೆಆರ್‌ಡಿಬಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ ಮಾತನಾಡಿ, ‘ಡಾ.ಅಂಬೇಡ್ಕರ್ ಅವರ ಜಯಂತಿಯನ್ನು ದೀಪಾವಳಿ ಹಬ್ಬದಂತೆ ಆಚರಣೆ ಮಾಡುವುದನ್ನು ನೋಡಲು ಕಣ್ಣಿಗೆ ಖುಷಿಯಾಗುತ್ತಿದೆ. ₹ 1 ಕೋಟಿ ವೆಚ್ಚದಲ್ಲಿ ಅಂಬೇಡ್ಕರ್ ಪ್ರತಿಮೆಯ ಆವರಣ ಅಭಿವೃದ್ಧಿ ಕಾಮಗಾರಿ ನಡೆಯುತ್ತಿವೆ. ನಗರದ ಹೊರವಲಯದ ರಿಂಗ್ ರಸ್ತೆಯ ಮೇಲ್ಸೆತುವೆಗೆ ಡಾ.ಅಂಬೇಡ್ಕರ್ ಹೆಸರಿಡಲಾಗಿದೆ’ ಎಂದರು.

ಜಯಂತ್ಯತ್ಸವ ನಿಮಿತ್ತ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಅಂಬಿಕಾ ದಿಗಂಬರ ಶಿಂಧೆ ಅವರಿಗೆ ₹ 10 ಸಾವಿರ ನಗದು ಬಹುಮಾನ, ದ್ವಿತೀಯ ಸ್ಥಾನ ಪಡೆದ ವಿದ್ಯಾಶ್ರೀ ರಾಜಶೇಖರ ಪ್ಯಾಟಿ ಅವರಿಗೆ ₹ 6 ಸಾವಿರ ನಗದು, ತೃತೀಯ ಸ್ಥಾನ ಪಡೆದ ವಿಜಯಲಕ್ಷ್ಮಿ ಅವರಿಗೆ ₹ 4 ಸಾವಿರ ನಗದು ನೀಡಿ ಸನ್ಮಾನಿಸಲಾಯಿತು.

ಧಮ್ಮನಾಗ ಭಂತೇಜಿ, ಸಂಘಾನಂದ ಭಂತೆಜೀ, ಮಹಾನಗರ ಪಾಲಿಕೆ ಮೇಯರ್ ವಿಶಾಲ ದರ್ಗಿ, ವಿಧಾನಪರಿಷತ್ ಮಾಜಿ ಸದಸ್ಯರಾದ ಅಲ್ಲಮಪ್ರಭು ಪಾಟೀಲ, ತಿಪ್ಪಣ್ಣಪ್ಪ ಕಮಕನೂರ, ಮುಖಂಡ ನೀಲಕಂಠರಾವ ಮೂಲಗೆ, ಜಯಂತ್ಯುತ್ಸವ ಸಮಿತಿ ಗೌರವಾಧ್ಯಕ್ಷ ವಿಠ್ಠಲ ದೊಡ್ಡಮನಿ, ಅಧ್ಯಕ್ಷ ದಿನೇಶ ದೊಡ್ಡಮನಿ, ಶಾಂತಪ್ಪ ಕೂಡಿ, ಸಿದ್ಧಾರ್ಥ ಪ್ಯಾಟಿ, ರಾಜು ಕಪನೂರು, ಸುನೀಲ್ ಮಾನಪಡೆ, ಸುರೇಶ ಬಡಿಗೇರ, ದಶರಥ, ಅಶ್ವಿನ್ ಸಂಕಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.