ಕಲಬುರ್ಗಿ: ಡಾ. ಬಿ.ಆರ್.ಅಂಬೇಡ್ಕರ್ ಅವರ ವಿಚಾರಗಳನ್ನು ಓದುವುದು ವಿಶ್ವ, ಸಮಾಜ, ದೇಶವನ್ನು ಓದಿದ ಹಾಗೆ ಎಂದು ಗುಲಬರ್ಗಾ ವಿಶ್ವವಿದ್ಯಾಲಯದ ಜೈವಿಕ ತಂತ್ರಜ್ಞಾನ ವಿಭಾಗದ ಪ್ರಾಧ್ಯಾಪಕ ಪ್ರೊ. ರಮೇಶ ಲಂಡನಕರ್ ಅಭಿಪ್ರಾಯಪಟ್ಟರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಶ್ರೀಮತಿ ಪಿಲ್ಲೂಹೋಮಿ ಇರಾಣಿ ಮಹಿಳಾ ಕಲಾ ಮಹಾವಿದ್ಯಾಲಯದ ಸಂಯುಕ್ತಾಶ್ರಯದಲ್ಲಿಮಂಗಳವಾರ ನಡೆದ ‘ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ್ ಓದು ಅಭಿಯಾನ’ ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವ ಮೂಲಕ ಉದ್ಘಾಟಸಿ ಅವರು ಮಾತಾಡಿದರು.
‘ಕೇವಲ ಜಯಂತಿಗೆ ಮಾತ್ರ ಅವರ ಚಿಂತನೆಗಳು, ವಿಚಾರಗಳು ಸೀಮಿತವಾಗದೆ, ನಮ್ಮೆಲ್ಲರ ಬದುಕಿನಲ್ಲಿ ಅಳವಡಿಸಿಕೊಂಡು ಬಾಳಬೇಕು. ಎಲ್ಲಾ ಸಮಸ್ಯೆಗಳಿಗೆ ಸಂವಿಧಾನ ಒಂದೇ ಪರಿಹಾರವಾಗಿದೆ. ಮಹಿಳೆಯರು ಹೆಚ್ಚಾಗಿ ಅಂಬೇಡ್ಕರ್ ಅವರ ಬಗ್ಗೆ ಓದಿ ತಿಳಿದುಕೊಳ್ಳುವ ಅವಶ್ಯಕತೆ ಇದೆ’ ಎಂದು ತಿಳಿಸಿದರು.
ಮುಖ್ಯ ಅತಿಥಿಯಾಗಿದ್ದ ಅಂಬೇಡ್ಕರ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ. ಐ.ಎಸ್. ವಿದ್ಯಾಸಾಗರ ಮಾತನಾಡಿ, ಜನ್ಮಕೊಟ್ಟ ತಾಯಿಗಿಂತ ಹೆಚ್ಚಾಗಿ ಮಹಿಳೆಯರಿಗಾಗಿ ದುಡಿದವರು ಅಂಬೇಡ್ಕರ್ ಒಬ್ಬರೇ, ಆಧುನಿಕ ಭಾರತ ಕಟ್ಟಿದ ಮಹಾನ್ ನಾಯಕ ಅಂಬೇಡ್ಕರ್ ಅವರ ಬಗ್ಗೆ ಓದುವುದು, ತಿಳಿಯುವುದು ಯುವಕರಲ್ಲಿ ಮೂಡಬೇಕು ಎಂದು ಸಲಹೆ ನೀಡಿದರು.
ಪಿಲ್ಲೂಹೋಮಿ ಇರಾಣಿ ಕಲಾ ಕಾಲೇಜಿನ ಪ್ರಾಂಶುಪಾಲೆ ಕವಿತಾ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ದತ್ತಪ್ಪ ಸಾಗನೂರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಯುವಕವಿ ಸಿದ್ದಾರ್ಥ ಇದ್ಲಾಯಿ ಕವಿತೆ ವಾಚನ ಮಾಡಿದರು. ವಿದ್ಯಾರ್ಥಿಗಳು ಬುದ್ಧವಂದನೆ ಬೋಧಿಸಿದರು. ಶಿವಶಂಕರ ನಿರೂಪಿಸಿದರು. ಉಪನ್ಯಾಸಕಿ ಸೀತಾ ವಂದಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.