ಕಲಬುರ್ಗಿ: ‘ಚಿತ್ರಕಲಾ ಪ್ರದರ್ಶನಗಳು ನಗರದ ಸಾಂಸ್ಕೃತಿಕ ಶ್ರೀಮಂತಿಕೆಗೆ ಮೆರಗು ನೀಡುತ್ತಿವೆ. ಕಲಾವಿದರಲ್ಲಿ ಪ್ರೋತ್ಸಾಹಿಸುವ ಕೆಲಸ ನಿರಂತರ ನಡೆಬೇಕು’ ಎಂದು ಗಿಲ್ಡಾ ಫೈನಾನ್ಸ್ ಇನ್ವೆಸ್ಟ್ಮೆಂಟ್ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಂಗೀತಾ ಗಿಲ್ಡಾ ಹೇಳಿದರು.
ಐ ಕಾಂಪ್ಯಾಕ್ಟ್ ಇಂಟಿರೀಯರ್ ಫರ್ನೀಚರ್ ಮತ್ತು ಡೆಕಾರೇಟರ್ಸ್ ಆಯೋಜಿಸಿದ ಎರಡು ದಿನಗಳ ಮೆಗಾ ಆರ್ಟ್ ಎಕ್ಸ್ಪೊ ಕಾರ್ಯಕ್ರಮದಲ್ಲಿ ಶನಿವಾರ ಭಾಗವಹಿಸಿ ಮಾತನಾಡಿದ ಅವರು, ‘ಕಲಾ ಪ್ರದರ್ಶನದಿಂದಾಗಿ ಕಲಾವಿದರಿಗೆ ಪ್ರೇರಣೆ ಸಿಗುವ ಜತೆಗೆ, ಹೊಸ ತಂತ್ರಜ್ಞಾನಗಳ ಬಳಕೆಗೂ ಇಂಬು ನೀಡಿದಂತಾಗುತ್ತದೆ. ವ್ಯಾವಹಾರಿಕ ಬದುಕಿನ ಆಚೆಗೂ ಕಲೆಗೆ ಹೆಚ್ಚು ಬೆಲೆ ಉಳಿದುಕೊಂಡಿದೆ’ ಎಂದರು.
ದಿ ಐಡಿಯಲ್ ಫೈನ್ ಆರ್ಟ್ ಇನ್ಸ್ಟಿಟ್ಯೂಟ್ನ ಪ್ರಾಂಶುಪಾಲರಾದ ರಾಜಶೇಖರ ಎಸ್. ಉದ್ಘಾಟಿಸಿದರು.ಮಹಾಲಕ್ಷ್ಮಿ ಗ್ರೂಪ್ನ ವ್ಯವಸ್ಥಾಪಕ ನಿರ್ದೇಶಕ ಕುನಾಲ್ ಆರ್. ಮೈಲಾಪುರ, ಕಾರ್ಯಕ್ರಮದ ಸಂಚಾಲಕ ಮಹ್ಮದ್ ಅಯಾಜುದ್ದಿನ್ ಪಟೇಲ್ ಮಾತನಾಡಿದರು. ಐ ಕಾಂಪ್ಯಾಕ್ಟ್ನ ಇಮ್ರಾನ್ ಖಾಲಿಕ್ ಸ್ವಾಗತಿಸದರು. ವ್ಯಂಗ್ಯ ಚಿತ್ರಕಲಾವಿದ ಎಂ. ಸಂಜೀವ ಕಾರ್ಯಕ್ರಮ ನಿರೂಪಿಸಿದರು.
ಕಲಾವಿದ ಡಾ.ರೆಹಮಾನ್ ಪಟೇಲ್, ಡಾ.ಸುಬ್ಬಯ್ಯ ನೀಲಾ, ಶಾಹೀದ್ ಪಾಶಾ, ಬಸವರಾಜ ಜಾನೆ, ಹನುಮಂತ ಮಂತಟ್ಟಿ, ಟಿ. ದೇವೇಂದ್ರ, ಖಾಜಾ ಪಟೇಲ್, ರಾಘವೇಂದ್ರ ಬುರ್ಲಿ, ಲಕ್ಷ್ಮೀ ಪೋದ್ದಾರ, ಸವಿತಾ ಹೀರೆಮಠ, ನೀಲಾಂಬಿಕಾ, ಲಕ್ಷ್ಮೀಕಾಂತ ಮನೋಕರ್, ಶೇಖ್ ಎಸಾನ್, ರೈಸ್ ಉದ್ದೀನ್, ನಾಗರಾಜ ಕುಂಬಾರ, ನಾರಾಯಣ ಎಂ. ಜೋಶಿ ಇದ್ದರು.
ಪ್ರದರ್ಶನದಲ್ಲಿ 50ಕ್ಕೂ ಹೆಚ್ಚು ಕಲಾವಿದರು ಪಾಲ್ಗೊಂಡಿದ್ದು, ಭಾನುವಾರ ರಾತ್ರಿ 8ರವರೆಗೆ ನಡೆಯಲಿದೆ. ಕಲಬುರ್ಗಿ, ಬೀದರ್, ರಾಯಚೂರು, ಯಾದಗಿರಿಯ ಕಲಾವಿದರು ತಮ್ಮ ಕಲಾಕೃತಿಗಳನ್ನು ಪ್ರದರ್ಶಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.