ಚಿಂಚೋಳಿ (ಕಲಬುರಗಿ ಜಿಲ್ಲೆ): ಮೂತ್ರಪಿಂಡ ಸಮಸ್ಯೆಯಿಂದ ಬಳಲುತ್ತಿದ್ದ ಇಬ್ಬರು ರೋಗಿಗಳು ತಾಲ್ಲೂಕಿನ ಕುಂಚಾವರಂ ಸಮುದಾಯ ಆರೋಗ್ಯ ಕೇಂದ್ರದ ಮುಖ್ಯ ವೈದ್ಯಾಧಿಕಾರಿ ಡಾ.ಬಾಲಾಜಿ ಪಾಟೀಲ ಮೇಲೆ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಎದುರಿನಲ್ಲೇ ಮಂಗಳವಾರ ಹಲ್ಲೆ ನಡೆಸಿದ್ದಾರೆ.
ಹಲ್ಲೆ ನಡೆಸಿದ ರಾಜಸ್ಥಾನ ಮೂಲದ ಅರ್ಜುನ್ ಹಾಗೂ ಪವನ್ ಅವರನ್ನು ಬಂಧಿಸಲಾಗಿದೆ.
ಮೂತ್ರಪಿಂಡದಲ್ಲಿ ಕಲ್ಲು ಬೆಳೆದಿರುವುದರಿಂದ ನೋವಿನಿಂದ ಬಳಲುತ್ತಿದ್ದ ಅರ್ಜುನ್ ಹಾಗೂ ಪವನ್ ಅವರು ಚಿಕಿತ್ಸೆಗಾಗಿ ಆಸ್ಪತ್ರೆಗೆ ಬಂದಾಗ ವೈದ್ಯಾಧಿಕಾರಿ ಇರಲಿಲ್ಲ. ವೈದ್ಯಾಧಿಕಾರಿ ತಮ್ಮ ವಸತಿ ಗೃಹದಲ್ಲಿ ಎಸ್ಐ ವೆಂಕಟೇಶ ಅವರಿಗೆ ಚಿಕಿತ್ಸೆ ನೀಡುತ್ತಿದ್ದರು. ಆಗ ಅಲ್ಲಿಗೆ ಬಂದ ಅರ್ಜುನ್ ಹಾಗೂ ಪವನ್ ಅವರು ಜೋರಾಗಿ ಬಾಗಿಲನ್ನು ಬಡಿದಿದ್ದಾರೆ. ‘ಬಾಗಿಲನ್ನೇಕೆ ಈ ರೀತಿ ಬಡಿಯುತ್ತೀರಿ, ಬೆಲ್ ಬಾರಿಸಿದ್ದರೆ ಸಾಕಾಗುತ್ತಿತ್ತು’ ಎಂದು ವೈದ್ಯಾಧಿಕಾರಿ ಆಕ್ಷೇಪಿಸಿದ್ದಾರೆ. ಈ ವೇಳೆ ವಾಗ್ವಾದ ನಡೆಸಿದ ಇಬ್ಬರು ರೋಗಿಗಳು, ವೈದ್ಯಾಧಿಕಾರಿ ಮೇಲೆ ಹಲ್ಲೆ ನಡೆಸಿದ್ದಾರೆ. ತಡೆಯಲು ಬಂದ ಎಸ್ಐ ವೆಂಕಟೇಶ ಅವರನ್ನೂ ತಳ್ಳಾಡಿದ್ದಾರೆ.
ಈ ಬಗ್ಗೆ ಕುಂಚಾವರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಿಬ್ಬಂದಿ ಪ್ರತಿಭಟನೆ: ವೈದ್ಯಾಧಿಕಾರಿ ಮೇಲೆ ನಡೆದ ಹಲ್ಲೆಯನ್ನು ಖಂಡಿಸಿ ಆಸ್ಪತ್ರೆಯ ಸಿಬ್ಬಂದಿ ಸೇವೆ ಸ್ಥಗಿತಗೊಳಿಸಿ ಪ್ರತಿಭಟಿಸಿದರು. ಆರೋಪಿಗಳನ್ನು ಬಂಧಿಸಿರುವುದು ಖಚಿತಗೊಂಡ ಬಳಿಕವೇ ಸಿಬ್ಬಂದಿ ಸೇವೆಗೆ ಮರಳಿದರು.
ಸುದ್ದಿ ತಿಳಿದು ಟಿಎಚ್ಒ ಡಾ.ಮಹಮದ್ ಗಫಾರ್, ತಾಲ್ಲೂಕು ಆಸ್ಪತ್ರೆಯ ಸಿಎಂಒ ಡಾ.ಸಂತೋಷ ಪಾಟೀಲ ಅವರು ಆಸ್ಪತ್ರೆಗೆ ಭೇಟಿ ನೀಡಿ ಮಾಹಿತಿ ಪಡೆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.