ADVERTISEMENT

ಮಾರಕಾಸ್ತ್ರಗಳಿಂದ ಯುವಕನ ಮೇಲೆ ಹಲ್ಲೆ

​ಪ್ರಜಾವಾಣಿ ವಾರ್ತೆ
Published 12 ಜೂನ್ 2020, 16:39 IST
Last Updated 12 ಜೂನ್ 2020, 16:39 IST
ಕಲಬುರ್ಗಿಯ ಐವಾನ್‌ ಇ ಶಾಹಿ ಅತಿಥಿ ಗೃಹದ ಬಳಿ ಬಿದ್ದಿದ್ದ ಗಾಯಾಳು ಬಸವರಾಜ ಅಮಟೆ ಅವರಿಗೆ ಸೇರಿದ ಬೈಕ್
ಕಲಬುರ್ಗಿಯ ಐವಾನ್‌ ಇ ಶಾಹಿ ಅತಿಥಿ ಗೃಹದ ಬಳಿ ಬಿದ್ದಿದ್ದ ಗಾಯಾಳು ಬಸವರಾಜ ಅಮಟೆ ಅವರಿಗೆ ಸೇರಿದ ಬೈಕ್   

ಕಲಬುರ್ಗಿ: ಇಲ್ಲಿನ ರೈಲ್ವೆ ಇಲಾಖೆಯ ಹೌಸ್ ಕೀಪಿಂಗ್ ವಿಭಾಗದ ಮೇಲ್ವಿಚಾರಕ ಬಸವರಾಜ ಆನಂದ ಅಮಟೆ (23) ಎಂಬುವರ ಮೇಲೆ ಬೈಕ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ, ಪರಾರಿಯಾಗಿದ್ದಾರೆ.

ನಗರದ ಐವಾನ್‌ ಇ ಶಾಹಿ ಅತಿಥಿ ಗೃಹದ ಬಳಿ ಶುಕ್ರವಾರ ಮಧ್ಯಾಹ್ನ ಘಟನೆ ನಡೆದಿದ್ದು, ಕುತ್ತಿಗೆ ಹಾಗೂ ಮುಖಕ್ಕೆ ತೀವ್ರ ಗಾಯಗಳಾಗಿವೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

30ಕ್ಕೆ ಮದುವೆ: ಸದ್ಯ ಖಾಸಗಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿರುವ ಬಸವರಾಜ ಅವರ ಮದುವೆ ಇದೇ 30ಕ್ಕೆ ನಿಶ್ಚಯವಾಗಿತ್ತು. ಅದಕ್ಕಾಗಿ ಜಿಲ್ಲಾಡಳಿತದಿಂದ ಅನುಮತಿಯನ್ನೂ ಪಡೆದಿದ್ದರು.‌ ಸಹೋದರನ ವಿವಾಹವೂ ಇದೇ ದಿನ ನೆರವೇರಬೇಕಿತ್ತು.

ADVERTISEMENT

ರೈಲ್ವೆ ನಿಲ್ದಾಣದಲ್ಲಿ ಹೌಸ್ ಕೀಪಿಂಗ್‌ ಮೇಲ್ವಿಚಾರಣೆಯ ಕೆಲಸ ಮುಗಿಸಿ ಆರ್‌ಟಿಒ ಕಚೇರಿ ಬಳಿಯ ಜಗಜೀವನರಾಂ ನಗರದ ಮನೆಗೆ ಬೈಕ್‌ನಲ್ಲಿ ತೆರಳುತ್ತಿದ್ದರು. ಇವರನ್ನೇ ಕಾಯುತ್ತಿದ್ದ ಇಬ್ಬರು ಯುವಕರ ತಂಡ ಬೈಕ್‌ನಲ್ಲಿ ಬಸವರಾಜ ತೆರಳುವಾಗಲೇ ಮಾರಕಾಸ್ತ್ರಗಳಿಂದ ಮುಖಕ್ಕೆ ಹೊಡೆದರು. ಹೊಡೆದ ಏಟಿಗೆ ಬೈಕ್ ಸುಮಾರು 15 ಅಡಿ ಮುಂದಕ್ಕೆ ಹೋಗಿ ಬಿದ್ದರೆ, ಬಸವರಾಜ ಎಸಿಬಿ ಕಚೇರಿಯ ಎದುರಿನ ರಸ್ತೆಯ ಮೇಲೆ ಬಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.