ADVERTISEMENT

ಬಸವ ಜಯಂತಿ ಅಂಗವಾಗಿ ವಿಚಾರ ಸಂಕಿರಣ

ಸಾರ್ವಜನಿಕ ಉತ್ಸವ ಸಮಿತಿ ಗೌರವಾಧ್ಯಕ್ಷರಾಗಿ ಡಾ. ಅಜಯ್ ಸಿಂಗ್

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2022, 7:33 IST
Last Updated 24 ಏಪ್ರಿಲ್ 2022, 7:33 IST
ಆರ್‌.ಜಿ. ಶೆಟಗಾರ
ಆರ್‌.ಜಿ. ಶೆಟಗಾರ   

ಕಲಬುರಗಿ: ಜಾಗತಿಕ ಲಿಂಗಾಯತ ಮಹಾಸಭಾ ವತಿಯಿಂದ ಮೇ 3ರಿಂದ 11ರವರೆಗೆ ನಗರದಲ್ಲಿ ಬಸವ ಜಯಂತಿ ಆಚರಿಸಲು 889ನೇ ಸಾರ್ವಜನಿಕ ಬಸವ ಜಯಂತಿ ಉತ್ಸವದ ಅಂಗವಾಗಿ ನಿತ್ಯ ವಿಶೇಷ ಉಪನ್ಯಾಸಗಳನ್ನು ಆಯೋಜಿಸಲಾಗಿದೆ ಎಂದು ಮಹಾಸಭಾದ ರಾಜ್ಯ ಮಹಾ ಪ್ರಧಾನ ಕಾರ್ಯದರ್ಶಿ ಆರ್‌.ಜಿ. ಶೆಟಗಾರ ತಿಳಿಸಿದರು.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮೇ 3ರಂದು ಬೆಳಿಗ್ಗೆ 8ಕ್ಕೆ ಜಗತ್ ವೃತ್ತದಲ್ಲಿರುವ ವಿಶ್ವಗುರು ಬಸವಣ್ಣನವರ ಪುತ್ಥಳಿಗೆ ಮಾಲಾರ್ಪಣೆ ಹಾಗೂ ಪ್ರಾರ್ಥನೆ ಸಲ್ಲಿಸುವುದರೊಂದಿಗೆ ಸಾರ್ವಜನಿಕ ಬಸವ ಜಯಂತಿಗೆ ವಿದ್ಯುಕ್ತವಾಗಿ ಚಾಲನೆ ನೀಡಲಾಗುವುದು. 4ರಿಂದ 10ರವರೆಗೆ ಸಂಜೆ 6ರಿಂದ ರಾತ್ರಿ 9.30ರವರೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ಪ್ರತಿದಿನ ಉಪನ್ಯಾಸ ನೀಡಲು ಸಾಹಿತಿ ಎಸ್‌.ಜಿ. ಸಿದ್ದರಾಮಯ್ಯ, ಕರವೀರಶೆಟ್ಟರು, ಪ್ರೊ. ಕೆ.ಆರ್. ದುರ್ಗಾದಾಸ್, ಪ್ರೊ.ಟಿ.ಆರ್. ಚಂದ್ರಶೇಖರ್, ಜೆ.ಎಸ್‌. ಪಾಟೀಲ, ಶಶಿಧರ ಭಟ್, ಅತ್ತಿವೇರಿಯ ಬಸವೇಶ್ವರಿ ಮಾತಾಜಿ ಭಾಗವಹಿಸಲಿದ್ದಾರೆ’ ಎಂದರು.

ವಿಶೇಷ ಆಹ್ವಾನಿತರಾಗಿ ಇಚಲಕರಂಜಿ ಸಂಸದ ಡಾ. ಧೈರ್ಯಶೀಲ ಮಾನೆ, ತೆಲಂಗಾಣದ ಜಹೀರಾಬಾದ್ ಸಂಸದ ಬಿ.ಬಿ. ಪಾಟೀಲ ಹಾಗೂ ಜಿಲ್ಲೆಯ ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದು ಹೇಳಿದರು.

ADVERTISEMENT

ಮೇ 11ರಂದು ಸಂಜೆ 6ಕ್ಕೆ ಶರಣರ ಸ್ತಬ್ದಚಿತ್ರದೊಂದಿಗೆ ನಗರೇಶ್ವರ ಶಾಲೆಯಿಂದ ಜಗತ್ ವೃತ್ತದವರೆಗೆ ವಿವಿಧ ಶರಣರ ಪಾತ್ರಧಾರಿಗಳು, ಸಾಂಸ್ಕೃತಿಕ ಕಲಾ ತಂಡಗಳೊಂದಿಗೆ ವಚನ, ನೃತ್ಯ ಸಂಗೀತದ ಮೆರಗು ಇರಲಿದೆ ಎಂದರು.

ಬಸವ ಜಯಂತಿ ಉತ್ಸವ ಸಮಿತಿ ಅಧ್ಯಕ್ಷ ರಾಜಶೇಖರ ಯಂಕಂಚಿ, ಪ್ರಭುಲಿಂಗ ಮಹಾಗಾಂವಕರ್, ಶಿವಗೊಂಡಪಪ್ಪ ಎನ್. ಪಾಟೀಲ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.