ADVERTISEMENT

ಕೃಷಿ ಉತ್ಪನ್ನಗಳಿಗೆ ಭಾವಾಂತರ ಯೋಜನೆ ಜಾರಿಗೆ ಅಮರನಾಥ ಪಾಟೀಲ ಮನವಿ

ಎಚ್‌ಕೆಸಿಸಿಐ; ಸಚಿವ ಬಂಡೆಪ್ಪ ಕಾಶೆಂಪುರಗೆ ಸನ್ಮಾನ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2018, 11:59 IST
Last Updated 9 ಸೆಪ್ಟೆಂಬರ್ 2018, 11:59 IST
ಎಚ್‌ಕೆಸಿಸಿಐನಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅಮರನಾಥ ಪಾಟೀಲ ಮಾತನಾಡಿದರು
ಎಚ್‌ಕೆಸಿಸಿಐನಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅಮರನಾಥ ಪಾಟೀಲ ಮಾತನಾಡಿದರು   

ಕಲಬುರ್ಗಿ: ‘ಕೃಷಿ ಉತ್ಪನ್ನಗಳಿಗೆ ಭಾವಾಂತರ ಯೋಜನೆಯನ್ನು ಜಾರಿಗೆ ತರಬೇಕು’ ಎಂದು ಹೈದರಾಬಾದ್ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ (ಎಚ್‌ಕೆಸಿಸಿಐ) ಅಧ್ಯಕ್ಷ ಅಮರನಾಥ ಪಾಟೀಲ ಹೇಳಿದರು.

ಎಚ್‌ಕೆಸಿಸಿಐ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸಹಕಾರ ಸಚಿವ ಬಂಡೆಪ್ಪ ಕಾಶೆಂಪುರ ಅವರ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ದಾಲ್ ಮಿಲ್‌ಗಳ ಪುನಃಶ್ಚೇತನಕ್ಕೆ ವಿಶೇಷ ಅನುದಾನ ಬಿಡುಗಡೆ ಮಾಡಬೇಕು. ಕರ್ನಾಟಕ ತೊಗರಿ ಮಂಡಳಿಯನ್ನು ಕರ್ನಾಟಕ ಹಾಲು ಒಕ್ಕೂಟ (ಕೆಎಂಎಫ್‌) ಹಾಗೂ ಕಾಫಿ ಬೋರ್ಡ್‌ ಮಾದರಿಯಲ್ಲಿ ಸ್ವಾಯತ್ತ ಸಂಸ್ಥೆಯಾಗಿ ಮೇಲ್ದರ್ಜೆಗೆ ಏರಿಸಬೇಕು. ಎಪಿಎಂಸಿ ಪ್ರಾಂಗಣದ ವಿದ್ಯುಚ್ಛಕ್ತಿ ಸರಬರಾಜಿನ ನಿರ್ವಹಣಾ ಕೆಲಸವನ್ನು ಜೆಸ್ಕಾಂಗೆ ಹಸ್ತಾಂತರಿಸಬೇಕು’ ಎಂದು ಒತ್ತಾಯಿಸಿದರು.

ADVERTISEMENT

‘371(ಜೆ) ಸಮರ್ಪಕ ಅನುಷ್ಠಾನಕ್ಕಾಗಿ ಪ್ರತ್ಯೇಕ ಸಚಿವಾಲಯ ಸ್ಥಾಪಿಸಬೇಕು. ನಿಮ್ಜ್‌ ಯೋಜನೆಯನ್ನು ಅನುಷ್ಠಾನಗೊಳಿಸಬೇಕು. ಯಾದಗಿರಿ ಜಿಲ್ಲೆಯಲ್ಲಿ ಔದ್ಯೋಗಿಕರಣ ಕೈಗೊಳ್ಳಬೇಕು. ಗುಲಬರ್ಗಾ ವಿಮಾನ ನಿಲ್ದಾಣವನ್ನು ‘ಉಡಾನ್’ ಯೋಜನೆಯಡಿ ಸೇರಿಸಬೇಕು. ಕಲಬುರ್ಗಿಯಲ್ಲಿ ಎಐಐಎಂಎಸ್‌ ಸ್ಥಾಪಿಸಬೇಕು’ ಎಂದು ಮನವಿ ಮಾಡಿದರು.

ಸಚಿವ ಬಂಡೆಪ್ಪ ಕಾಶೆಂಪುರ ಮಾತನಾಡಿ, ‘ದಾಲ್ ಮಿಲ್‌ಗಳ ಪುನಃಶ್ಚೇತನ ಹಾಗೂ ಎಪಿಎಂಸಿ ಸಮಸ್ಯೆಗಳ ಬಗ್ಗೆ ಕೇಂದ್ರ ಸರ್ಕಾರದ ಸಂಬಂಧಿಸಿದ ಇಲಾಖೆ ಸಚಿವರಿಗೆ ಮನವರಿಕೆ ಮಾಡಿಕೊಡಲಾಗಿದೆ. ಎಪಿಎಂಸಿ ಪ್ರಾಂಗಣದಲ್ಲಿ ಕನಿಷ್ಠ ಬೆಂಬಲ ಬೆಲೆಗಿಂತ ಕಡಿಮೆ ದರದಲ್ಲಿ ಕೃಷಿ ಉತ್ಪನ್ನಗಳು ಮಾರಾಟವಾಗಬಾರದು ಹಾಗೂ ಸರ್ಕಾರವು ರೈತರಿಗೆ ನಬಾರ್ಡ್‌ನಿಂದ ಸರಳ ಸಾಲಗಳನ್ನು ನೀಡಲು ಯೋಚಿಸುತ್ತಿದೆ’ ಎಂದು ತಿಳಿಸಿದರು.

ಉಪಾಧ್ಯಕ್ಷ ಶರಣಬಸಪ್ಪ ಎಂ.ಪಪ್ಪಾ, ಜಂಟಿ ಗೌರವ ಕಾರ್ಯದರ್ಶಿ ರವಿಕುಮಾರ ಸರಸಂಬಿ, ಆಡಳಿತ ಸಮಿತಿ ಸದಸ್ಯರಾದ ಶಿವರಾಜ ಇಂಗಿನಶೆಟ್ಟಿ, ಸಂತೋಷಕುಮಾರ ಜಿ.ಲಂಗರ, ಗೋಪಾಲ ಬುಚನಳ್ಳಿ, ಜಗದೀಶ ಆರ್.ಕಡಗಂಚಿ, ಚನ್ನಬಸಯ್ಯ ಜಿ.ನಂದಿಕೋಲ, ಅಣ್ಣಾರಾವ ಮಾಲಿಪಾಟೀಲ ಇದ್ದರು.

ಸಂಸ್ಥೆಯ ಗೌರವ ಕಾರ್ಯದರ್ಶಿಗ ಶಶಿಕಾಂತ ಬಿ.ಪಾಟೀಲ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.