ಕಲಬುರಗಿ: ಜಿಲ್ಲೆಯ ಚಿತ್ತಾಪುರ ತಾಲ್ಲೂಕಿನ ಕೊಲ್ಲೂರು ಗ್ರಾಮದ ಸುಮಾರು 180 ಮನೆಗಳಿಗೆ ಭೀಮಾ ನದಿ ನೀರು ನುಗ್ಗಿದ್ದು, ನಿವಾಸಿಗಳು ಅಕ್ಷರಶಃ ತತ್ತರಿಸಿದ್ದಾರೆ. ವಿದ್ಯುತ್ ಪರಿವರ್ತಕಗಳು ನೀರಿನಲ್ಲಿ ಮುಳುಗಿರುವುದರಿಂದ ವಿದ್ಯುತ್ ಸಂಪರ್ಕ ಕಡಿತಗೊಂಡು ಇಡೀ ಗ್ರಾಮ ಕತ್ತಲು ಆವರಿಸಿದೆ.
ಗ್ರಾಮದ ಅಂದಾಜು ಜನಸಂಖ್ಯೆ 7,000 ಇದೆ. ಕೆಲ ಮನೆಗಳು ಅರ್ಧ ಮುಳುಗಿದರೆ, ಇನ್ನೂ ಕೆಲ ಮನೆಗಳ ಬಾಗಿಲುವರೆಗೆ ನೀರು ಬಂದಿದೆ. ಈ ಮನೆಗಳ ನಿವಾಸಿಗಳು ಸಂಬಂಧಿಕರ ಎತ್ತರದ ಮನೆಗಳು ಮತ್ತು ಕಾಳಜಿ ಕೇಂದ್ರದಲ್ಲಿ ಆಶ್ರಯ ಪಡೆದಿದ್ದಾರೆ.
ಗ್ರಾಮ ಪಂಚಾಯಿತಿ, ಬಸ್ ನಿಲ್ದಾಣ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಪ್ರೌಢಶಾಲೆ, ಗ್ರಂಥಾಲಯ, ಕರ್ನಾಟಕ ಗ್ರಾಮೀಣ ಬ್ಯಾಂಕ್, ಕೃಷಿ ಪತ್ತಿನ ಸಹಕಾರ ಸಂಘ, ಆಂಜನೇಯ ದೇವಸ್ಥಾನ, ಬಸವೇಶ್ವರ ದೇವಸ್ಥಾನ, ಜಾಮೀಯಾ ಮಸೀದಿಗೆ ನೀರು ನುಗ್ಗಿದೆ. ಗ್ರಾಮದ ಕರಿಬಸಪ್ಪ ವೃತ್ತ ಸೇರಿದಂತೆ ಪ್ರಮುಖ ಬೀದಿಗಳಲ್ಲಿ 3 ಫೀಟ್ ವರೆಗೆ ನೀರು ನಿಂತಿದೆ.
60 ಮಂದಿಗೆ ಆಶ್ರಯ: ‘ಗ್ರಾಮದಲ್ಲಿ 160-180 ಮನೆಗೆ ನೀರು ನುಗ್ಗಿದೆ. ಬಿಸಿಎಂ ಹಾಸ್ಟೆಲ್ ನಲ್ಲಿ ತಾಲ್ಲೂಕು ಆಡಳಿತದಿಂದ ಶನಿವಾರ ಕಾಳಜಿ ಕೇಂದ್ರ ತೆರೆಯಲಾಗಿದೆ. ಮಕ್ಕಳು, ಮಹಿಳೆಯರು ಸೇರಿದಂತೆ 60 ಜನ ಆಶ್ರಯ ಪಡೆದಿದ್ದಾರೆ’ ಎಂದು ಗ್ರಾಮ ಆಡಳಿತಾಧಿಕಾರಿ ರಾಜು ತಿಳಿಸಿದರು.
ಕುಡಿಯುವ ನೀರಿನ ಸಮಸ್ಯೆ: ವಿದ್ಯುತ್ ಪರಿವರ್ತಕ ನೀರಿನಲ್ಲಿ ಮುಳುಗಿರುವುದರಿಂದ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. 'ಕರೆಂಟ್ ಇದ್ದರೆ ಬೋರ್ ವೆಲ್ ಚಾಲೂ ಆಗಿ ಕುಡಿಯುವ ನೀರು ಸಿಗುತ್ತದೆ. ನದಿ ನೀರು ಕಾಯಿಸಿ ಆರಿಸಿ ಕುಡಿಯಲು ಯೋಗ್ಯವಿಲ್ಲ. ನಮಗೆ ದಿಕ್ಕೇ ತೋಚದಂತಾಗಿದೆ' ಎಂದು ನಿವಾಸಿಗಳು 'ಪ್ರಜಾವಾಣಿ' ಎದುರು ಅಳಲು ತೋಡಿಕೊಂಡರು.
'ಪಿಡಿಒ ಗ್ರಾಮಕ್ಕೆ ಬರುತ್ತಿಲ್ಲ. ಫೋನ್ ಕರೆ ಮಾಡಿದರೆ ಬರುತ್ತೇನೆ ಎನ್ನುತ್ತಾರೆ. ಜನಪ್ರತಿನಿಧಿಗಳು ಗ್ರಾಮದತ್ತ ತಲೆಹಾಕಿಲ್ಲ. ನಿವಾಸಿಗಳು ಯಾರ ಮುಂದೆ ಸಮಸ್ಯೆ ಹೇಳಿಕೊಳ್ಳಬೇಕು' ಎಂದು ಅರುಣ ಕುಡಗುಂಟಿ, ಸಾಬಣ್ಣ ಪೂಜಾರಿ ಅಸಮಾಧಾನ ವ್ಯಕ್ತಪಡಿಸಿದರು.
'ನಾಲವಾರದಿಂದ 33 ಕೆ.ವಿ ಸನ್ನತಿ ಫೀಡರ್ ನ ಕಂಬಗಳು ನದಿಯ ಹಿನ್ನೀರಿನಲ್ಲಿ ಮುಳುಗಿದ್ದು, ಸನ್ನತಿ ಫೀಡರ್ ನಿಂದ ಹೊರಗೋಗುವ ಎಲ್ಲಾ 11 ಕೆ.ವಿಯ 9 ಗ್ರಾಮಗಳಲ್ಲಿ ವಿದ್ಯುತ್ ಸಂಪರ್ಕ ಕಡಿತವಾಗಿದೆ. ನೀರಿನ ಮಟ್ಟ ಕಡಿಮೆಯಾದರೆ ಮಾತ್ರ ವಿದ್ಯುತ್ ಸಂಪರ್ಕ ಕೊಡಬಹುದು' ಎಂದು ಹೇಳುತ್ತಾರೆ ಜೆಸ್ಕಾಂ ನಾಲವಾರ ಶಾಖಾಧಿಕಾರಿ ನಾಗಪ್ಪ ಕುಂಬಾರ.
'ಲೀಜ್ ಗೆ ಹಾಕಿಕೊಂಡಿರುವ 60 ಎಕರೆ ಭತ್ತ, 18 ಎಕರೆ ಹತ್ತಿ, 6 ಎಕರೆ ತೊಗರಿ ಬೆಳೆ ನದಿ ನೀರಲ್ಲಿ ಮುಳುಗಿದೆ' ಎಂಬುದು ಚಾಂದಪಾಶಾ ಅವರ ಅಳಲು.
ನಮ್ಮ ಮನೆಯಲ್ಲಿ 2-3 ಫೀಟ್ ನೀರು ಬಂದಿದ್ದು ಗೌಡರ ಗೋದಾಮಿನಲ್ಲಿ ಅಗತ್ಯ ವಸ್ತುಗಳೊಂದಿಗೆ ಕುಟುಂಬ ಸಮೇತ ಆಶ್ರಯ ಪಡೆದಿದ್ದೇವೆ.ಫಾತಿಮಾ ಬಾಗವಾನ್ ಸಂತ್ರಸ್ತೆ
ಕೊಲ್ಲೂರು ಸುತ್ತಮುತ್ತಲಿನ 25 ಕೆ.ವಿಯ 45 63 ಕೆ.ವಿಯ 25 100 ಕೆ.ವಿಯ 20 ಟಿಸಿಗಳು ನೀರಿನಲ್ಲಿ ಮುಳುಗಿವೆ.ಖಂಡಪ್ಪ ಸೋನವಣೆ ಅಧೀಕ್ಷಕ ಎಂಜಿನಿಯರ್ ಜೆಸ್ಕಾಂ ಕಾರ್ಯ ಮತ್ತು ಪಾಲನೆ ಕಲಬುರಗಿ ವೃತ್ತ ಕಚೇರಿ
ರಸ್ತೆ ಸಂಪರ್ಕ ಕಡಿತ ಕೊಲ್ಲೂರು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ನಾಲವಾರ- ಸನ್ನತಿ ರಾಜ್ಯ ರಸ್ತೆ ಮತ್ತು ಕೊಲ್ಲೂರು-ಶಾಂಪುರಹಳ್ಳಿ ರಸ್ತೆಗಳು ನೀರಿನಲ್ಲಿ ಮುಳುಗಿವೆ. ವಾಹನಗಳ ಸಂಚಾರ ಸಂಪೂರ್ಣ ಬಂದ್ ಆಗಿದೆ. ಗ್ರಾಮಸ್ಥರು ಅಚ್ಚೋಲಾ-ಅರಕೇರಾ ರಸ್ತೆ ಮೂಲಕ ಸಂಚರಿಸುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.