ಕಲಬುರಗಿ: ದೇಶ ಸೇವೆಗಾಗಿ ತಮ್ಮ ಜೀವ ಮುಡುಪಾಗಿಟ್ಟು, ಸೇವೆ ಸಲ್ಲಿಸಿ ನಿವೃತ್ತಿಯಾದ ನಂತರ ಸುಖಮಯ ಜೀವನ ನಡೆಸಲು ಮಾಜಿ ಸೈನಿಕರು ಹಾಗೂ ಹುತಾತ್ಮ ಯೋಧರ ಕುಟುಂಬಕ್ಕೆ ಸರ್ಕಾರ ಕೃಷಿ ಭೂಮಿ ನೀಡಬೇಕು ಎಂಬ ನಿಯಮ ಇದ್ದರೂ ಜಿಲ್ಲೆಯಲ್ಲಿ ಅದು ಮಾತ್ರ ಸಾಕಾರಗೊಂಡಿಲ್ಲ.
ಜಿಲ್ಲೆಯಲ್ಲಿ ಸುಮಾರು 750ಕ್ಕೂ ಹೆಚ್ಚು ಮಾಜಿ ಸೈನಿಕರಿದ್ದಾರೆ. ಸುಮಾರು ವರ್ಷಗಳ ಕಾಲ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿಯಾಗಿ ಮರಳಿದ್ದಾರೆ. ಇನ್ನೂ ಕೆಲ ಸೈನಿಕರು ಸೇನೆಯಲ್ಲಿ ಕರ್ತವ್ಯ ನಿರ್ವಹಿಸುವಾಗಲೇ ಹುತಾತ್ಮರಾಗಿದ್ದಾರೆ. ಸರ್ಕಾರದ ನಿಯಮಗಳಂತೆ ಭೂಮಿಯ ಹಕ್ಕನ್ನು ಪಡೆದುಕೊಳ್ಳಲು ಜಿಲ್ಲೆಯಲ್ಲಿ 81 ಮಾಜಿ ಸೈನಿಕರು ಅರ್ಜಿ ಸಲ್ಲಿಸಿದ್ದಾರೆ.
‘ಜಿಲ್ಲಾಡಳಿತ ಮಟ್ಟದಲ್ಲಿ ಅರ್ಜಿಗಳ ವಿಲೇವಾರಿ ಕಾರ್ಯ ಸಮರ್ಪಕವಾಗಿ ಆಗುತ್ತಿಲ್ಲ. ಭೂಮಿ ಲಭ್ಯವಿದ್ದರೂ ಅಧಿಕಾರಿಗಳು ಅರ್ಜಿಗಳನ್ನು ವಿಲೇವಾರಿ ಮಾಡಲು ಮುಂದೆ ಬರುತ್ತಿಲ್ಲ. ಪ್ರತಿದಿನ ಕಚೇರಿಗೆ ಅಲೆದಾಡಿ ಸಾಕಾಗಿದೆ’ ಎನ್ನುವುದು ಮಾಜಿ ಸೈನಿಕರ ಅಳಲು.
‘ಭೂ ರಹಿತರಿಗೆ ಸರ್ಕಾರ ಅರ್ಜಿ ಪಡೆದು ಖಾತೆ ಮಾಡಿಸಿಕೊಡುತ್ತದೆ. ಆದರೆ, ಮಾಜಿ ಸೈನಿಕರಿಗೆ ಭೂಮಿ ಹಂಚಿಕೆ ಮಾಡದೇ ತಾರತಮ್ಯ ಮಾಡುತ್ತಿದೆ. ಬೆರಳೆಣಿಕೆಯಷ್ಟು ಮಾಜಿ ಸೈನಿಕರ ಹೊರತು ಪಡಿಸಿ, ಬಹುತೇಕ ನಿವೃತ್ತ ಸೈನಿಕರಿಗೆ ಸರ್ಕಾರದ ಭೂಮಿ ಸಿಕ್ಕಿಲ್ಲ. ಅರ್ಜಿ ಸಲ್ಲಿಸಿ ವರ್ಷಾನುಗಟ್ಟಲೆ ಕಾದರೂ ತಾಲ್ಲೂಕು ವ್ಯಾಪ್ತಿಯಲ್ಲಿ ಜಮೀನು ಲಭ್ಯವಿಲ್ಲ. ತಾಲ್ಲೂಕು ವ್ಯಾಪ್ತಿಯಲ್ಲಿ ಭೂಮಿ ಇದ್ದರೆ ಗುರುತಿಸಿ ತಿಳಿಸಿ ಎಂದು ಅಧಿಕಾರಿಗಳು ಹೇಳುತ್ತಾರೆ. ಕಂದಾಯ ಭೂಮಿ ಲಭ್ಯವಿದ್ದರೂ ಮಂಜೂರು ಮಾಡಲು ಅಧಿಕಾರಿಗಳು ಮುಂದಾಗುತ್ತಿಲ್ಲ’ ಎನ್ನುತ್ತಾರೆ ಮಾಜಿ ಸೈನಿಕ ಈರಯ್ಯಸ್ವಾಮಿ ಮಠಪತಿ.
ಕಚೇರಿಗೆ ಅಲೆದಾಟ: ‘ಸೈನ್ಯದಿಂದ ಮರಳಿದ ನಂತರ ಅರ್ಜಿ ಸಲ್ಲಿಸಲಾಗಿದೆ. ದಿನವಿಡಿ ಕಚೇರಿಯಿಂದ ಕಚೇರಿಗೆ ಅಲೆದಾಟವೇ ಆಗಿದೆ. ಭೂ ಮಂಜೂರು ಮಾಡುವುದು ಕನಸಿನ ಮಾತಾಗಿದೆ. ಜಿಲ್ಲಾಧಿಕಾರಿ, ತಹಶೀಲ್ದಾರ್ ಕಂದಾಯ ಇಲಾಖೆ ಅಧಿಕಾರಿಗಳಿಗೂ ಹಲವು ಬಾರಿ ಮನವಿ ಮಾಡಿದರೂ ಪರಿಹಾರ ಮಾತ್ರ ಇಲ್ಲದಂತಾಗಿದೆ ಎನ್ನುತ್ತಾರೆ ಮಾಜಿ ಯೋಧರೊಬ್ಬರು.
ಅರ್ಜಿಗಳ ವಿಲೇವಾರಿ ಕುರಿತು ಪ್ರತಿಕ್ರಿಯೆ ಪಡೆಯಲು ಹೆಚ್ಚುವರಿ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ ಅವರಿಗೆ ಕರೆ ಮಾಡಿದಾಗ ಸಂಪರ್ಕಕ್ಕೆ ಲಭ್ಯವಾಗಿಲ್ಲ.
ಭೂಮಿ ಮಂಜೂರಾತಿಗೆ ಅರ್ಜಿ ಸಲ್ಲಿಸಿ ಹಲವಾರು ವರ್ಷಗಳೇ ಕಳೆದಿದೆ. ಅಧಿಕಾರಿಗಳು ಅರ್ಜಿ ವಿಲೇವಾರಿ ಮಾಡುತ್ತಿಲ್ಲಈರಯ್ಯಸ್ವಾಮಿ ಮಠಪತಿ ಮಾಜಿ ಸೈನಿಕ
ಭೂಮಿ ಮಂಜೂರು ಮಾಡಿ ಯೋಧರಿಗೆ ಗೌರವ ನೀಡುವ ಕೆಲಸ ಅಧಿಕಾರಿಗಳು ಮಾಡಬೇಕು. ಕಚೇರಿಗೆ ಅಲೆದಾಡಿ ಸಾಕಾಗಿದೆಚಂದ್ರಶೇಖರ ಬಿಲ್ಲಾಡ ಮಾಜಿ ಸೈನಿಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.