ಕಲಬುರಗಿ: ಲೋಕಸಭಾ ಚುನಾವಣೆಯ ಮತದಾನಕ್ಕೆ ಒಂದು ವಾರ ಬಾಕಿ ಉಳಿದಿರುವಂತೆ ಬಿಜೆಪಿಯ ನಾಯಕರು ಕಲಬುರಗಿಯತ್ತ ದೌಡಾಯಿಸುತ್ತಿದ್ದು, ಸೋಮವಾರದಿಂದಲೇ ಕ್ಷೇತ್ರದ ವಿವಿಧೆಡೆ ತಮ್ಮ ಅಭ್ಯರ್ಥಿಯಾದ ಸಂಸದ ಡಾ. ಉಮೇಶ ಜಾಧವ ಅವರ ಪರ ಮತಯಾಚನೆ ಮಾಡುವರು.
ಏಪ್ರಿಲ್ 29ರ ಮಧ್ಯಾಹ್ನ 3ಕ್ಕೆ ಚಿತ್ತಾಪುರದಲ್ಲಿ ನಡೆಯುವ ಯುವ ಸಮಾವೇಶದಲ್ಲಿ ಮಾಜಿ ಸಚಿವ ಸಿ.ಟಿ. ರವಿ, ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ, ಸಂಸದ ತೇಜಸ್ವಿ ಸೂರ್ಯ ಸೇರಿದಂತೆ ಹಲವರು ಪಾಲ್ಗೊಳ್ಳುವರು. ಸಮಾವೇಶದ ನಂತರ ನಗರದ ಗೋವಾ ಹೋಟೆಲ್ ಸಮೀಪದ ಬಸವರಾಜಪ್ಪ ಅಪ್ಪ ಸ್ಮರಣಾರ್ಥ ಭವನದಲ್ಲಿ ಸಂಜೆ 6.30ಕ್ಕೆ ಪ್ರಚಾರ ಸಭೆ ನಡೆಸುವರು. ನಗರದಲ್ಲಿ ವಾಸ್ತವ್ಯ ಮಾಡಿ ಏ.30ರಂದು ಪಕ್ಷದ ಪ್ರಮುಖರ ಸಭೆ ನಡೆಸಿ, ಚುನಾವಣಾ ಪ್ರಚಾರದ ಬಗ್ಗೆಯೂ ಚರ್ಚಿಸುವರು ಎಂದು ಬಿಜೆಪಿ ಮುಖಂಡರು ತಿಳಿಸಿದ್ದಾರೆ.
ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಎನ್.ಮಹೇಶ ಅವರು ಸಹ ನಗರಕ್ಕೆ ಬಂದು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಸಮುದಾಯದ ಮುಖಂಡರ ಸಭೆ ಮಾಡುವರು ಎಂದು ಹೇಳಿದ್ದಾರೆ.
ವಿಜಯೇಂದ್ರ ಮೂರು ದಿನ ಪ್ರಚಾರ: ಬಿಜೆಪಿ ರಾಜ್ಯಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಮೂರು ದಿನಗಳ ಕಾಲ ಕ್ಷೇತ್ರದಲ್ಲಿ ಬೀಡುಬಿಟ್ಟು ಚುನಾವಣೆಯ ಸಭೆಗಳನ್ನು ಮಾಡುವರು.
ಏ.29ರ ಸಂಜೆ 5.30ಕ್ಕೆ ಜೇವರ್ಗಿಯ ಷಣ್ಮುಖ ಶಿವಯೋಗಿ ಅಖಂಡೇಶ್ವರ ಮಠದಿಂದ ವಿಜಯಪುರ ರಸ್ತೆಯ ಬಸವೇಶ್ವರ ಚೌಕ್ವರೆಗೂ ರೋಡ್ ಶೋ ನಡೆಸುವರು. ಏ.30ರಂದು ಬೆಳಿಗ್ಗೆ 11ಕ್ಕೆ ಕಮಲಾಪುರದ ರಾಂಪೂರೆ ಲೇಔಟ್ ಹಾಗೂ ಸಂಜೆ 5.30ಕ್ಕೆ ಆಳಂದದಲ್ಲಿ ಬಹಿರಂಗ ಸಭೆಗಳನ್ನು ಮಾಡುವರು.
ಮೇ 1ರ ಬೆಳಿಗ್ಗೆ 11ಕ್ಕೆ ಚಿತ್ತಾಪುರ ಹಾಗೂ ಸಂಜೆ 5.30ಕ್ಕೆ ಅಫಜಲಪುರದ ಮಹಾಂತೇಶ್ವರ ವಿದ್ಯಾವರ್ಧಕ ಸಂಘದ ಆವರಣದಲ್ಲಿ ಚುನಾವಣೆಯ ಬಹಿರಂಗ ಸಭೆಗಳನ್ನು ಉದ್ದೇಶಿಸಿ ಮಾತನಾಡುವರು. ರೋಡ್ ಶೋ ಹಾಗೂ ಸಭೆಗಳಲ್ಲಿ ಜಿಲ್ಲೆಯ ಬಿಜೆಪಿ ಮುಖಂಡರು ಪಾಲ್ಗೊಳ್ಳುವರು.
‘ರಾಜ್ಯದಲ್ಲಿ ಮೊದಲ ಹಂತದ ಚುನಾವಣೆ ಮುಗಿದಿದ್ದರಿಂದ ರಾಜ್ಯದ ವರಿಷ್ಠರು ಕಲಬುರಗಿಗೆ ಬಂದು, ನಿತ್ಯ ಮೂರ್ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರಚಾರ ಮಾಡುವರು. ಪ್ರಚಾರಕ್ಕೆ ಅಗತ್ಯವಾದ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದ್ದು, ಬೂತ್ ಮಟ್ಟದ ಕಾರ್ಯಕರ್ತರು ಪಾಲ್ಗೊಂಡು ನಾಯಕರ ವಿಚಾರಗಳನ್ನು ಮತದಾರರ ಮನೆ ಮನೆಗೆ ತಲುಪಿಸುವರು’ ಎಂದು ಬಿಜೆಪಿ ಜಿಲ್ಲಾ ಗ್ರಾಮೀಣ ಘಟಕದ ಅಧ್ಯಕ್ಷ ಶಿವರಾಜ ಪಾಟೀಲ ರದ್ದೇವಾಡಗಿ ತಿಳಿಸಿದರು.
‘ಮುಂದಿನ ದಿನಗಳಲ್ಲಿ ವರಿಷ್ಠರಾದ ಬಿ.ಎಸ್.ಯಡಿಯೂರಪ್ಪ, ಡಿ.ವಿ.ಸದಾನಂದಗೌಡ ಸೇರಿದಂತೆ ಹಲವು ನಾಯಕರು ಕ್ಷೇತ್ರದಲ್ಲಿ ಪ್ರಚಾರ ಮಾಡುವರು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.