
ಕಾಳಗಿ: ತಾಲ್ಲೂಕಿನ ಹೇರೂರ ಕೆ. ಬೆಣ್ಣೆತೊರಾ ಜಲಾಶಯದ ಕೆಳಭಾಗದ ನೀರಿನಲ್ಲಿ ಯುವಕನೊಬ್ಬ ನಾಪತ್ತೆಯಾಗಿರುವ ಘಟನೆ ಶನಿವಾರ ಸಂಭವಿಸಿದೆ.
ಕಲಬುರಗಿಯ ಆಜಾದಪುರ ನಿವಾಸಿ ಹಸನ್ ಅಬ್ದುಲ್ ಗಫರ್ (17) ಎಂಬುವವ ನಾಪತ್ತೆಯಾದ ಯುವಕ.
ಶನಿವಾರ 10 ಜನ ಗೆಳೆಯರು ಜಲಾಶಯಕ್ಕೆ ಬಂದಿದ್ದಾರೆ. ಜಲಾಶಯದ ಕೆಳಭಾಗದ ನೀರಿನಲ್ಲಿ ಸೆಲ್ಫಿ ತೆಗೆದುಕೊಳ್ಳಲು ಹೋಗಿದ್ದಾರೆ. ಈ ವೇಳೆ ಕಾಲುಜಾರಿ ಹಸನ್ ಮತ್ತು ಸರ್ಪರಾಜ್ ಜೈಯದ್ ಮನ್ಸೂರ (19) ನೀರಿನಲ್ಲಿ ಬಿದ್ದಿದ್ದಾರೆ. ಸರ್ಫರಾಜ್ ನೀರಿನಲ್ಲೇ ಗಿಡವೊಂದರ ಆಸರೆ ಪಡೆದರೆ, ಹಸನ್ ನಾಪತ್ತೆಯಾಗಿದ್ದಾನೆ.
ವಿಷಯ ತಿಳಿಯುತ್ತಿದ್ದಂತೆ ತಹಶೀಲ್ದಾರ್ ಪೃಥ್ವಿರಾಜ ಪಾಟೀಲ, ಕಂದಾಯ ನಿರೀಕ್ಷಕ ರವೀಂದ್ರ ಮುತ್ತಗಿ ಹಾಗೂ ಕಾಳಗಿ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ.
ಕಲಬುರಗಿ ಅಗ್ನಿಶಾಮಕ ಅಧಿಕಾರಿ ಮಲ್ಲಿಕಾರ್ಜುನ ನೇತೃತ್ವದ ತಂಡ ಧಾವಿಸಿ, ಗಿಡದ ಆಸರೆ ಪಡೆದಿದ್ದ ಸರ್ಫರಾಜನನ್ನು ದಡಕ್ಕೆ ತಂದು ರಕ್ಷಿಸಿದ್ದಾರೆ.
ಹಸನ್ಗಾಗಿ ಶೆಳ್ಳಗಿ, ಕಲ್ಲಹಿಪ್ಪರಗಿ ತನಕ ಹುಡುಕಾಡಿದರೂ ಪತ್ತೆಯಾಗಿಲ್ಲ. ರಾತ್ರಿಯಾಗಿದ್ದರಿಂದ ಕಾರ್ಯಾಚರಣೆ ತಾತ್ಕಾಲಿಕವಾಗಿ ಮೊಟಕುಗೊಳಿಸಲಾಗಿದೆ ಎಂದು ತಿಳಿದುಬಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.