ಕಲಬುರ್ಗಿ: ‘ಈ ಭಾಗದ ಕನ್ನಡ ಸಂಘಟನೆಯಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರೀಷತ್ ಅಧ್ಯಕ್ಷ ವೀರಭದ್ರ ಸಿಂಪಿ ಅವರದು ಉತ್ತಮ ಪ್ರಯತ್ನ’ ಎಂದು ಸುಲಫಲ ಮಠದ ಸಾರಂಗಧರ ದೇಶಿಕೇಂದ್ರ ಸ್ವಾಮೀಜಿ ಬಣ್ಣಿಸಿದರು.
ನಗರದಲ್ಲಿ ಭಾನುವಾರ ಉದಯೋನ್ಮುಖ ಯುವ ಬರಹಗಾರರ ಬಳಗ ಆಯೋಜಿಸಿದ್ದ ‘ಸಾಹಿತ್ಯ ಸೇವಕ ವೀರಭದ್ರಸಿಂಪಿಗೆ–60, ಸಂಘಟನೆಗೆ 40 ವರ್ಷ’ ಕಿರು ಹೊತ್ತಿಗೆ ಬಿಡುಗಡೆಗೊಳಿಸಿ ಅವರು ಆಶೀವರ್ಚನ ನೀಡಿದರು.
‘ಬಡತನದಲ್ಲಿ ಬೆಳೆದ ಸಿಂಪಿ, ಸಾಹಿತ್ಯ ಕ್ಷೇತ್ರವನ್ನು ಶ್ರೀಮಂತಗೊಳಿಸಿದ್ದಾರೆ. ಅವರು ಎಷ್ಟೆ ಬೆಳೆದರೂ ಅವರ ಮನೆತನದ ಪುರವಂತರ ಕಲೆ ಉಳಿಸಿಕೊಂಡು ಬಂದಿದ್ದಾರೆ. ಪ್ರಸ್ತುತ ಸಿಂಪಿ ಅವರ ಪುತ್ರರು ಕೂಡ ಪುರವಂತಿಕೆ ಕಲೆ ಮುನ್ನಡೆಸುತ್ತಿರುವುದು ಶ್ಲಾಘನೀಯ’ ಎಂದರು.
‘ಕಡಕೋಳ ಮಡಿವಾಳೇಶ್ವರರ ತತ್ವಪದ ಸಮ್ಮೇಳನ, ಮಹಿಳಾ ಸಮ್ಮೇಳನ, ಜಾನಪದ, ಮಕ್ಕಳ, ದಲಿತ, ದಾಸ ಸಾಹಿತ್ಯ ಸೇರಿ ವಿವಿಧ ಸಾಹಿತ್ಯ ಸಮ್ಮೇಳನ ಆಯೋಜಿಸುವ ಮೂಲಕ ಕನ್ನಡ ಸಾಹಿತ್ಯಕ್ಕೆ ಕೊಡುಗೆ ನೀಡಿದ್ದಾರೆ. ಅಖಿಲ ಭಾರತ 85ನೇ ಕನ್ನಡ ಸಾಹಿತ್ಯ ಸಮ್ಮೇಳನ ಅಚ್ಚುಕಟ್ಟಾಗಿ ಆಯೋಜಿಸುವಲ್ಲಿ ಮುಖ್ಯ ಪಾತ್ರ ವಹಿಸಿದ್ದಾರೆ’ ಎಂದರು.
ಸಾನ್ನಿಧ್ಯ ವಹಿಸಿದ್ದ ಸೊನ್ನ ಮಠದ ಡಾ.ಶಿವಾನಂದ ಸ್ವಾಮೀಜಿ ಮಾತನಾಡಿ, ‘40 ವರ್ಷದ ಅವರ ಸಂಘಟನಾತ್ಮಕ ಪರಿಚಯವನ್ನು ಪುಸ್ತಕ ರೂಪದಲ್ಲಿ ಹೊರತಂದ ಉದಯೋನ್ಮುಖ ಯುವ ಬರಗಾರರ ಬಳಗದ ಕಾರ್ಯ ಮಾದರಿಯಾಗಿದೆ’ ಎಂದರು.
ಇದೇ ವೇಳೇ ಸನ್ಮಾನ ಸ್ವೀಕರಿಸಿದ ವೀರಭದ್ರ ಸಿಂಪಿ ಮಾತನಾಡಿದರು. ಬರಹಗಾರರ ಬಳಗದ ಅಧ್ಯಕ್ಷ ಪ್ರೇಮಚಂದ ಚವ್ಹಾಣ ಅಧ್ಯಕ್ಷತೆ ವಹಿಸಿದ್ದರು. ದೈಹಿಕ ಶಿಕ್ಷಣ ಇಲಾಖೆ ನಿವೃತ್ತ ನಿರ್ದೇಶಕ ಮಲ್ಕಣಗೌಡ ಪಾಟೀಲ, ಮಡಿವಾಳಪ್ಪ ನಾಗರಳ್ಳಿ, ಸಿದ್ರಾಮಯ್ಯ ಹಿರೇಮಠ, ಆನಂದ ನಂದೂರ, ನೀಮಾ ಸಿಂಪಿ ಹಾಗೂ ಸಾಹಿತಿಗಳು ಪಾಲ್ಗೊಂಡಿದ್ದರು.
ದೌಲತರಾವ್ ಪಾಟೀಲ ಸ್ವಾಗತಿಸಿದರು. ಡಾ.ಸೂರ್ಯಕಾಂತ ಪಾಟೀಲ ಪ್ರಾಸ್ತಾವಿಕ ಮಾತನಾಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.