ಕಲಬುರ್ಗಿ: ನಗೆರದಲ್ಲಿ ಮಹಡಿ ಮೇಲಿಂದ ಬಿದ್ದು ಗಾಯಗೊಂಡಿದ್ದ ಯುವಕನ ಮಿದುಳು ನಿಷ್ಕ್ರಿಯವಾಗಿದ್ದರಿಂದ ಪಾಲಕರು ಅಂಗಾಂಗ ದಾನಕ್ಕೆ ಒಪ್ಪಿಗೆ ನೀಡಿದ್ದು, ಯುವಕನ ಲಿವರ್ ಅನ್ನು ಝೀರೊ ಟ್ರಾಫಿಕ್ ಮೂಲಕ ಹೈದರಾಬಾದ್ ವಿಮಾನ ನಿಲ್ದಾಣಕ್ಕೆ ಕೊಂಡೊಯ್ಯಲಾಯಿತು.
ನಗರದ ಖೂಬಾ ಪ್ಲಾಟ್ ನಿವಾಸಿ, ಮೂಲತಃ ಕಮಲಾಪುರ ತಾಲ್ಲೂಕಿನ ಲಾಡಮುಗಳಿ ಗ್ರಾಮದ ಮಹೇಶ ರೇವಣಸಿದ್ದಪ್ಪ ಕಲಬುರ್ಗಿ (19) ಆಗಸ್ಟ್ 20ರಂದು ಮನೆಯ ಮಹಡಿ ಮೇಲಿಂದ ಬಿದ್ದಿದ್ದರು. ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆದರೆ, ಮಿದುಳು ನಿಷ್ಕ್ರಿಯಗೊಂಡಿದ್ದರಿಂದ ಚೇತರಿಸಿಕೊಳ್ಳುವ ಸಾಧ್ಯತೆ ಕಡಿಮೆ ಇತ್ತು. ಹೀಗಾಗಿ ಪಾಲಕರು ತಮ್ಮ ಮಗನ ಅಂಗಾಂಗ ದಾನ ಮಾಡಲು ಒಪ್ಪಿದರು.
ಹೀಗಾಗಿ ನಗರದ ಚಿರಾಯು ಆಸ್ಪತ್ರೆ ವೈದ್ಯರು ಯವಕನ ಲಿವರ್ ಗಳನ್ನು ತೆಗೆದು ಆಂಬುಲೆನ್ಸ್ ಮೂಲಕ ಹೈದರಾಬಾದ್ ವಿಮಾನ ನಿಲ್ದಾಣಕ್ಕೆ ರವಾನಿಸಿದರು. ಅಲ್ಲಿಂದ ಬೆಂಗಳೂರಿಗೆ ವಿಮಾನದ ಮೂಲಕ ಕೊಂಡೊಯ್ದು ಅಲ್ಲಿನ ಆಸ್ಟರ್ ಆರ್. ವಿ. ಆಸ್ಪತ್ರೆಯಲ್ಲಿರುವ ರೋಗಿಗೆ ಅಳವಡಿಸಲಾಗುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ.
ಯುವಕನ ಕಣ್ಣುಗಳನ್ನು ನಗರದ ಬಸವೇಶ್ವರ ಆಸ್ಪತ್ರೆಯ ನೇತ್ರ ಬ್ಯಾಂಕ್ ಗೆ ನೀಡಲಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.