ADVERTISEMENT

40 ಜನರ ಮೇಲೆ ಪ್ರಕರಣ ದಾಖಲು

ಜಾತ್ರೆಯಲ್ಲಿ ಎರಡು ಸಮುದಾಯ ನಡುವೆ ಕ್ಷುಲ್ಲಕ ಕಾರಣಕ್ಕೆ ಗಲಾಟೆ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2024, 6:26 IST
Last Updated 17 ಏಪ್ರಿಲ್ 2024, 6:26 IST
ಆಳಂದ ತಾಲ್ಲೂಕಿನ ಕಡಗಂಚಿ ಗ್ರಾಮದಲ್ಲಿ ಮಂಗಳವಾರ ಜಮಾಯಿಸಿದ ಜನರು
ಆಳಂದ ತಾಲ್ಲೂಕಿನ ಕಡಗಂಚಿ ಗ್ರಾಮದಲ್ಲಿ ಮಂಗಳವಾರ ಜಮಾಯಿಸಿದ ಜನರು   

ಆಳಂದ: ತಾಲ್ಲೂಕಿನ ಕಡಗಂಚಿ ಗ್ರಾಮದ ಶಾಂತಲಿಂಗೇಶ್ವರ ಜಾತ್ರೆಯಲ್ಲಿ ಕ್ಷುಲ್ಲಕ ಕಾರಣಕ್ಕೆ ಎರಡು ಸಮುದಾಯಗಳ ನಡುವೆ ನಡೆದ ಗಲಾಟೆಯ ಆರೋಪದಡಿ ಸುಮಾರು 40 ಜನರ ಮೇಲೆ ನರೋಣಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗಲಾಟೆಯಿಂದಾಗಿ ಗ್ರಾಮದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದೆ. ಗ್ರಾಮದಲ್ಲಿ ಪೊಲೀಸ್ ಪಡೆಗಳು ಬೀಡುಬಿಟ್ಟಿದ್ದು, ಹಲವು ಯುವಕರು ಗ್ರಾಮ ತೊರೆದು ತಮ್ಮ ಮೊಬೈ‍ಲ್‌ಗಳನ್ನು ಸ್ವಿಚ್‌ಆಫ್‌ ಮಾಡಿಕೊಂಡಿದ್ದಾರೆ. ಜಾತ್ರೆಯ ಅಂಗವಾಗಿ ಮಂಗಳವಾರ ನಡೆಯಬೇಕಿದ್ದ ಕುಸ್ತಿ, ನಾಟಕ ಪ್ರದರ್ಶನವೂ ರದ್ದಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಪರಿಶಿಷ್ಟ ಜಾತಿಯ ಸಮುದಾಯದವರು ಜಾತಿ ನಿಂದನೆ ಪ್ರಕರಣ ದಾಖಲಿಸಿದ್ದಾರೆ ಎಂದು ಆರೋಪಿಸಿದ ಮತ್ತೊಂದು ಸಮುದಾಯದ ಗುಂಪು ಗ್ರಾಮದಲ್ಲಿ ಪ್ರತಿಭಟನೆ ನಡೆಸಿತು. ಮುಖ್ಯ ರಸ್ತೆಯಲ್ಲಿ ಜಮಾಯಿಸಿದ ಮಹಿಳೆಯರು, ಪುರುಷರು ತಾವು ನೀಡುವ ದೂರನ್ನೂ ದಾಖಲಿಸಿಕೊಳ್ಳುವಂತೆ ಪೊಲೀಸರನ್ನು ಒತ್ತಾಯಿಸಿದರು.

ADVERTISEMENT

ಮಧ್ಯಾಹ್ನ 1ರಿಂದ ಶುರುವಾದ ರಸ್ತೆ ತಡೆಯು 3 ಗಂಟೆಯ ವರೆಗೆ ನಡೆಯಿತು. ಇದರಿಂದ ಎರಡೂ ಕಡೆ ನೂರಾರು ವಾಹನಗಳು ಸಾಲುಗಟ್ಟಿ ನಿಂತಿದ್ದವು. ಸ್ಥಳಕ್ಕೆ ಧಾವಿಸಿದ ಡಿವೈಎಸ್‌ಪಿ ಮೊಹ್ಮದ್ ಶರೀಫ್ ಅವರು, ಪ್ರತಿಭಟನಾಕಾರರಿಗೆ ಕ್ರಮದ ಭರವಸೆ ನೀಡಿದ ನಂತರ ರಸ್ತೆ ತಡೆ ಹಿಂತೆಗೆದುಕೊಂಡರು.

ಸೋಮವಾರ ರಾತ್ರಿಯೇ ಎಸ್‌ಪಿ ಅಕ್ಷಯ್ ಹಾಕೆ, ಹೆಚ್ಚುವರಿ ಎಸ್‌ಪಿ ಎನ್. ಶ್ರೀನಿಧಿ, ಸಿಪಿಐ ಸಿದ್ರಾಮಯ್ಯ ಮಠಪತಿ ಸೇರಿದಂತೆ ಹಲವು ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿದರು. ವಾತಾವರಣವನ್ನು ತಿಳಿಗೊಳಿಸಿದ್ದಾರೆ ಎಂದು ಗ್ರಾಮಸ್ಥರೊಬ್ಬರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.