ADVERTISEMENT

ಬಿಜೆಪಿ ಮುಖಂಡ ಶರಣು ಸಲಗರ ವಿರುದ್ಧ ಪ್ರಕರಣ ದಾಖಲು

ಪಿಎಸ್‌ಐ ಕರ್ತವ್ಯಕ್ಕೆ ಅಡೆತಡೆ

​ಪ್ರಜಾವಾಣಿ ವಾರ್ತೆ
Published 6 ಜುಲೈ 2018, 12:17 IST
Last Updated 6 ಜುಲೈ 2018, 12:17 IST

ಕಲಬುರ್ಗಿ: ಆಳಂದ ತಾಲ್ಲೂಕು ನರೋಣಾ ಪೊಲೀಸ್ ಠಾಣೆಗೆ ತೆರಳಿ ಕರ್ತವ್ಯದಲ್ಲಿದ್ದ ಪಿಎಸ್‌ಐ ಗಜಾನನ ನಾಯಕ್ ಅವರ ವಿರುದ್ಧ ಏರುದನಿಯಲ್ಲಿ ಮಾತನಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಗ್ರಾಮೀಣ ಮಂಡಲ ಅಧ್ಯಕ್ಷ ಶರಣು ಸಲಗರ ವಿರುದ್ಧ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಶಶಿಕುಮಾರ್, ‘ಸರ್ಕಾರಿ ಕರ್ತವ್ಯಕ್ಕೆ ಅಡೆತಡೆವೊಡಿದ್ದಾರೆ ಎಂದು ಪಿಎಸ್‌ಐ ದೂರು ದಾಖಲಿಸಿದ್ದಾರೆ. ಶರಣು ಸಲಗರ ಠಾಣೆಯಲ್ಲಿ ಏರು ದನಿಯಲ್ಲಿ ಪಿಎಸ್‌ಐ ಅವರ ವಿರುದ್ಧ ಮಾತನಾಡಿರುವ ವಿಡಿಯೋ ದೃಶ್ಯಾವಳಿಯನ್ನು ಪರಿಶೀಲಿಸಿ ದೂರು ದಾಖಲು ಮಾಡಿಕೊಳ್ಳಲಾಗಿದೆ’ ಎಂದರು.

‘ಪಿಎಸ್‌ಐ ಏನನ್ನೂ ಮಾತನಾಡದೆ ಸುಮ್ಮನೆ ಕುಳಿತಿದ್ದಾರೆ. ಸಲಗರ ಜತೆ ಗ್ರಾಮೀಣ ಮತಕ್ಷೇತ್ರದ ಶಾಸಕ ಬಸವರಾಜ ಮತ್ತಿಕೂಡ ಕೂಡ ಉಪಸ್ಥಿತರಿದ್ದರು. ಗ್ರಾಮದಲ್ಲಿನ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಪಿಎಸ್‌ಐ ದೂರು ದಾಖಲಿಸಿಕೊಂಡಿಲ್ಲ ಎಂದು ಆರೋಪಿಸಿದ್ದಾರೆ. ಗ್ರಾಮಸ್ಥರು ರಾಜಿ ಪಂಚಾಯಿತಿ ಮಾಡಿಸಿದ್ದರಿಂದ ಪ್ರಕರಣ ದಾಖಲಾಗಿಲ್ಲ. ಆದಾಗ್ಯೂ ಈ ಬಗ್ಗೆ ಸಮಗ್ರವಾಗಿ ವಿಚಾರಣೆ ಮಾಡಲಾಗುವುದು’ ಎಂದು ಹೇಳಿದರು.

ADVERTISEMENT

‘ಕಲಬುರ್ಗಿ ಗ್ರಾಮೀಣ ಮತಕ್ಷೇತ್ರದ ಬಿಜೆಪಿ ಟಿಕೆಟ್ ಹಂಚಿಕೆ ವಿಷಯಕ್ಕೆ ಸಂಬಂಧಿಂತೆ ಬಿಜೆಪಿ ಕಚೇರಿಯಲ್ಲಿ ಈ ಹಿಂದೆ ಗಲಾಟೆ ನಡೆದಿತ್ತು. ಆಗ ಶರಣು ಸಲಗರ ವಿರುದ್ಧ ದೂರು ದಾಖಲಾಗಿತ್ತು. ಅವರ ವಿರುದ್ಧ ರೌಡಿ ಶೀಟ್‌ ತೆರೆಯುವಂತೆ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಲಾಗಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.