ADVERTISEMENT

ಜಾತಿ ಪ್ರಮಾಣಪತ್ರ ದುರ್ಬಳಕೆ ಖಂಡಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2019, 10:30 IST
Last Updated 29 ನವೆಂಬರ್ 2019, 10:30 IST
ಬೇಡ ಜಂಗಮ, ಬುಡ್ಗ ಜಂಗಮರ ಜಾತಿ ಪ್ರಮಾಣಪತ್ರವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದು, ಈ ಬಗ್ಗೆ ಸಂಸತ್ತಿನಲ್ಲಿ ಧ್ವನಿ ಎತ್ತಬೇಕು ಎಂದು ಒತ್ತಾಯಿಸಿ ನಕಲಿ ಬೇಡ ಜಂಗಮರ ವಿರೋಧಿ ವೇದಿಕೆ ಪದಾಧಿಕಾರಿಗಳು ಸಂಸದ ಡಾ.ಉಮೇಶ ಜಾಧವ್ ಮನೆ ಎದುರು ಪ್ರತಿಭಟನೆ ನಡೆಸಿದರು
ಬೇಡ ಜಂಗಮ, ಬುಡ್ಗ ಜಂಗಮರ ಜಾತಿ ಪ್ರಮಾಣಪತ್ರವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದು, ಈ ಬಗ್ಗೆ ಸಂಸತ್ತಿನಲ್ಲಿ ಧ್ವನಿ ಎತ್ತಬೇಕು ಎಂದು ಒತ್ತಾಯಿಸಿ ನಕಲಿ ಬೇಡ ಜಂಗಮರ ವಿರೋಧಿ ವೇದಿಕೆ ಪದಾಧಿಕಾರಿಗಳು ಸಂಸದ ಡಾ.ಉಮೇಶ ಜಾಧವ್ ಮನೆ ಎದುರು ಪ್ರತಿಭಟನೆ ನಡೆಸಿದರು   

ಕಲಬುರ್ಗಿ: ಬೇಡ ಜಂಗಮ, ಬುಡ್ಗ ಜಂಗಮರು ಪರಿಶಿಷ್ಟ ಜಾತಿಗೆ ಸೇರುತ್ತಾರೆ. ಆದರೆ, ಇವರ ಹೆಸರಿನಲ್ಲಿ ವೀರಶೈವರು ಜಾತಿ ಪ್ರಮಾಣಪತ್ರವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದು, ಈ ಬಗ್ಗೆ ಸಂಸತ್ತಿನಲ್ಲಿ ಧ್ವನಿ ಎತ್ತಬೇಕು ಎಂದು ಒತ್ತಾಯಿಸಿ ನಕಲಿ ಬೇಡ ಜಂಗಮರ ವಿರೋಧಿ ವೇದಿಕೆ ಪದಾಧಿಕಾರಿಗಳು ನಗರದಲ್ಲಿರುವ ಸಂಸದ ಡಾ.ಉಮೇಶ ಜಾಧವ್ ಅವರ ಮನೆ ಎದುರು ಗುರುವಾರ ಪ್ರತಿಭಟನೆ ನಡೆಸಿದರು.

ಮಹಾರಾಷ್ಟ್ರದ ಸೊಲ್ಲಾಪುರ ಕ್ಷೇತ್ರದ ಸಂಸದರಾದ ವೀರಶೈವ ಜಂಗಮ ಜಾತಿಗೆ ಸೇರಿದ ಗೌಡಗಾಂವ ಸಂಸ್ಥಾನ ಹಿರೇಮಠದ ಡಾ.ಜಯಸಿದ್ಧೇಶ್ವರ ಶಿವಾಚಾರ್ಯ ಸ್ವಾಮೀಜಿ ಬಿಜೆಪಿ ಟಿಕೆಟ್‌ನಿಂದ ಆಯ್ಕೆಯಾದರು. ಆ ಮೂಲಕ ನಿಜವಾದ ದಲಿತ ಸಮುದಾಯದವರಿಗೆ ಅನ್ಯಾಯವಾಯಿತು. ಕರ್ನಾಟಕದಲ್ಲಿಯೂ ನಕಲಿ ಬೇಡ ಜಂಗಮರು ಪರಿಶಿಷ್ಟ ಪ್ರಮಾಣಪತ್ರ ಪಡೆಯುವುದರ ಮೂಲಕ ನಿಜವಾದ ದಲಿತರಿಗೆ ಸಿಗಬೇಕಿದ್ದ ಹಕ್ಕುಗಳನ್ನು ಕಿತ್ತುಕೊಂಡಿದ್ದಾರೆ ಎಂದು ಆರೋಪಿಸಿದರು.

‘ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದಿಂದ ಆಯ್ಕೆಯಾದ ಸಂಸದರು, ಶಾಸಕರು, ಸಚಿವರು ಪರಿಶಿಷ್ಟ ಜಾತಿಯ ಹಿತರಕ್ಷಣೆಗೆ ನಿಲ್ಲುವ ಬದಲು ವೋಟ್ ಬ್ಯಾಂಕ್‌ ರಾಜಕಾರಣ ಮಾಡಬಾರದು’ ಎಂದು ಒತ್ತಾಯಿಸಿದರು.

ADVERTISEMENT

ಸಂಘಟನೆಯ ಮುಖಂಡರಾದ ಮಹಾಂತೇಶ ಬಡದಾಳ, ಸಿದ್ರಾಮ ಧನ್ನಿ, ಹಣಮಂತ ಬೋಧನ, ಅರ್ಜುನ ಭದ್ರೆ, ಬಸಲಿಂಗಪ್ಪ ಗಾಯಕವಾಡ, ಚಂದ್ರಶೇಖರ ಕೋಟನೂರ, ಜಯಪಾಲ ಭದ್ರೆ, ಪಾಂಡುರಂಗ ಮಾವಿನ, ಸಂತೋಷ ಗದಿ, ಬಸವರಾಜ ಪಾಸ್ವಾನ್‌, ಶಿವಮೂರ್ತಿ ಶಾಸ್ತ್ರಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.