ADVERTISEMENT

ಕಲಬುರಗಿ| ಹೆರಿಗೆಯಲ್ಲಿ ಕಳಪೆ ಸಾಧನೆ: ಸಿಎಚ್‌ಸಿಗಳ ತಜ್ಞವೈದ್ಯರ ಹುದ್ದೆಗೆ ಸಂಚಕಾರ

ಜಗನ್ನಾಥ ಡಿ.ಶೇರಿಕಾರ
Published 23 ನವೆಂಬರ್ 2025, 7:51 IST
Last Updated 23 ನವೆಂಬರ್ 2025, 7:51 IST
ತೆಲಂಗಾಣ ರಾಜ್ಯದ ಗಡಿಗೆ ಹೊಂದಿಕೊಂಡಿರುವ ಚಿಂಚೋಳಿ ತಾಲ್ಲೂಕಿನ ಕುಂಚಾವರ ಸಮುದಾಯ ಆರೋಗ್ಯ ಕೇಂದ್ರ
ತೆಲಂಗಾಣ ರಾಜ್ಯದ ಗಡಿಗೆ ಹೊಂದಿಕೊಂಡಿರುವ ಚಿಂಚೋಳಿ ತಾಲ್ಲೂಕಿನ ಕುಂಚಾವರ ಸಮುದಾಯ ಆರೋಗ್ಯ ಕೇಂದ್ರ   

ಚಿಂಚೋಳಿ (ಕಲಬುರಗಿ ಜಿಲ್ಲೆ): ನಿಗದಿತ ಪ್ರಮಾಣದಲ್ಲಿ ಪ್ರತಿ ತಿಂಗಳು ಹೆರಿಗೆಯಾಗದ ಕಾರಣಕ್ಕೆ ರಾಜ್ಯದ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿನ (ಸಿಎಚ್‌ಸಿ) ತಜ್ಞ ವೈದ್ಯರ ಹುದ್ದೆಗೆ ಸಂಚಕಾರ ಬಂದಿದೆ.

ರಾಜ್ಯದಲ್ಲಿ ಪ್ರತಿ ತಿಂಗಳು 30 ಹೆರಿಗೆ ಪ್ರಗತಿಯನ್ನು ಸಾಧಿಸದ ಕಡಿಮೆ ಕಾರ್ಯಕ್ಷಮತೆಯ 228 ಸಿಎಚ್‌ಸಿಗಳಲ್ಲಿನ 114 ಸ್ತ್ರೀರೋಗ ತಜ್ಞರು, 86 ಅರವಳಿಕೆ ತಜ್ಞರು ಹಾಗೂ 119 ಮಕ್ಕಳ ತಜ್ಞರ ಹುದ್ದೆಗಳನ್ನು ತಾಲ್ಲೂಕು ಆಸ್ಪತ್ರೆಗಳು ಮತ್ತು ಹೆರಿಗೆಯಲ್ಲಿ ಉತ್ತಮ ಸಾಧನೆ ತೋರಿದ 42 ಸಿಎಚ್‌ಸಿಗಳಿಗೆ ಮರು ಹೊಂದಾಣಿಕೆ ಮಾಡಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮುಂದಾಗಿದೆ. ಗುರಿ ಸಾಧಿಸದ ಸಿಎಚ್‌ಸಿಗಳಲ್ಲಿ ಇನ್ನು ಮುಂದೆ ಕೇವಲ ಎಂಬಿಬಿಎಸ್‌ ವೈದ್ಯರು ಮಾತ್ರ ಇರಲಿದ್ದಾರೆ. ಇದರಿಂದಾಗಿ ಆ ಭಾಗದ ರೋಗಿಗಳಿಗೆ ತಜ್ಞ ವೈದ್ಯರ ಸೇವೆ ಲಭ್ಯವಾಗದೇ ಪರದಾಡುವ ಸ್ಥಿತಿ ನಿರ್ಮಾಣಗೊಳ್ಳಲಿದೆ.

ಆರೋಗ್ಯ ಇಲಾಖೆಯು ತಜ್ಞ ವೈದ್ಯರನ್ನು ಹೊಸದಾಗಿ ನೇಮಕಾತಿ ಮಾಡಿಕೊಳ್ಳುವ ಬದಲು ಮರು ಹೊಂದಾಣಿಕೆ ಮಾಡುತ್ತಿದೆ. ಕಲಬುರಗಿ ಜಿಲ್ಲೆಯ ಒಟ್ಟು 16 ಸಿಎಚ್‌ಸಿಗಳ ಪೈಕಿ ಶಹಾಬಾದ್‌ ಕೇಂದ್ರ ಹೊರತುಪಡಿಸಿ ಉಳಿದ ಕಡೆ ತಜ್ಞ ವೈದ್ಯರ ಹುದ್ದೆಗಳನ್ನು ಮರು ಹೊಂದಾಣಿಕೆ ಮಾಡಲಾಗುತ್ತಿದೆ.

ADVERTISEMENT

ಗ್ರಾಮೀಣ ಭಾಗದ ಜನ ತಜ್ಞ ವೈದ್ಯರ ಸೇವೆ ಪಡೆಯಲು ತಾಲ್ಲೂಕು ಆಸ್ಪತ್ರೆಗಳಿಗೆ ದೌಡಾಯಿಸಬೇಕಾಗಲಿದೆ. ಗ್ರಾಮೀಣ ಭಾಗದ ಜನರ ಆಶಾಕಿರಣವಾಗಿದ್ದ ಸಿಎಚ್‌ಸಿ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳು (ಪಿಎಚ್‌ಸಿ), ಆರೋಗ್ಯ ಇಲಾಖೆಯ ಈ ಕ್ರಮದಿಂದಾಗಿ ಮತ್ತುಷ್ಟು ದುರ್ಬಲಗೊಳ್ಳುವ ಸಾಧ್ಯತೆಯಿದೆ ಎಂಬ ಆತಂಕ ಜನರನ್ನು ಕಾಡುತ್ತಿದೆ. 

ಪ್ರತಿ ತಾಲ್ಲೂಕಿನಲ್ಲಿ ತಾಲ್ಲೂಕು ಆಸ್ಪತ್ರೆ ಜೊತೆಗೆ 2–3 ಸಿಎಚ್‌ಸಿಗಳು, 8–10 ಪಿಎಚ್‌ಸಿಗಳು, 1–2 ಆರೋಗ್ಯ ವಿಸ್ತರಣಾ ಕೇಂದ್ರಗಳಿವೆ. ತಾಲ್ಲೂಕು ಆಸ್ಪತ್ರೆಯಲ್ಲಿ ಮಕ್ಕಳ ತಜ್ಞರು–2, ಸ್ತ್ರೀರೋಗ ತಜ್ಞರು–2, ಅರವಳಿಕೆ ತಜ್ಞರು ಸೇರಿ ವಿವಿಧ ತಜ್ಞ ವೈದ್ಯರ ಹುದ್ದೆಗಳನ್ನು ಹೆಚ್ಚಿಸಲು ಇಲಾಖೆ ಮುಂದಾಗಿದೆ. ಹೀಗಾಗಿ ಹೆರಿಗೆ ಪ್ರಮಾಣ ಕಡಿಮೆ ಇರುವ ಸಿಎಚ್‌ಸಿಗಳಲ್ಲಿನ ತಜ್ಞ ವೈದ್ಯರ ಹುದ್ದೆಗಳನ್ನು ಸ್ಥಳಾಂತರಿಸಲಾಗುತ್ತಿದೆ.

‘ತಾಲ್ಲೂಕು ಆಸ್ಪತ್ರೆ ಬಲಪಡಿಸುವುದಕ್ಕೆ ನಮ್ಮ ಅಭ್ಯಂತರವಿಲ್ಲ. ಆದರೆ, ಗ್ರಾಮೀಣ ಜನರಿಗೆ ದೊರೆಯುತ್ತಿದ್ದ ತಜ್ಞ ವೈದ್ಯರ ಸೇವೆ ಕಸಿದುಕೊಳ್ಳುವುದು ಎಷ್ಟು ಸರಿ? ನಿಗದಿತ ಪ್ರಮಾಣದಲ್ಲಿ ಹೆರಿಗೆ ಆಗದಿರಲು ಕಾರಣಗಳನ್ನು ಹುಡುಕಿ ಪರಿಹಾರ ಕಂಡುಕೊಳ್ಳಬೇಕು. ಈ ಬಗ್ಗೆ ಸರ್ಕಾರ ಮರು ಪರಿಶೀಲಿಸಬೇಕು’ ಎಂದು ಕಲಬುರಗಿ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಉಪಾಧ್ಯಕ್ಷ ನರಶಿಮ್ಲು ಕುಂಬಾರ ಅಭಿಪ್ರಾಯಪಡುತ್ತಾರೆ.

‘ಚಿಂಚೋಳಿ ತಾಲ್ಲೂಕಿನ ಕುಂಚಾವರಂ ಸಿಎಚ್‌ಸಿಯಲ್ಲಿ ಮಾಸಿಕ 23 ಹೆರಿಗೆ ಆಗುತ್ತಿವೆ. 30 ಹೆರಿಗೆ ಆಗಿಲ್ಲ ಎಂದು ಕೇಂದ್ರ ದುರ್ಬಲಗೊಳಿಸಿದರೆ ಹೇಗೆ? ಇಲ್ಲಿ ಅರವಳಿಕೆ ತಜ್ಙರಿಲ್ಲ. ಈ ಸೌಲಭ್ಯ ಕಲ್ಪಿಸಿದರೆ 30ರ ಗಡಿ ದಾಟಲಿದೆ’ ಎನ್ನುತ್ತಾರೆ ಕಲ್ಲೂರು ಗ್ರಾಮದ ಮುಖಂಡ ವೀರಾರೆಡ್ಡಿ ಪಾಟೀಲ.

ಮೊದಲ ಪಟ್ಟಿಯಲ್ಲಿ ಕಲಬುರಗಿ ಜಿಲ್ಲೆಯಲ್ಲಿ 15 ಸಿಎಚ್‌ಸಿಗಳ ಹುದ್ದೆ ಮರುಹೊಂದಾಣಿಕೆಗೆ ಗುರುತಿಸಲಾಗಿತ್ತು. ಪರಿಷ್ಕೃತ ಪಟ್ಟಿ ಪ್ರಕಾರ 10 ಕೇಂದ್ರಗಳ ಹುದ್ದೆಗಳು ಸ್ಥಳಾಂತಗೊಳ್ಳಲಿವೆ. ‌
ಶರಣಬಸ್ಸಪ್ಪ ಕ್ಯಾತನಾಳ್ ಡಿಎಚ್‌ಒ ಕಲಬುರಗಿ

ಗ್ರಾಮೀಣ ಆರೋಗ್ಯ ಸೇವೆಗೆ ಪೆಟ್ಟು

ನಿಗದಿತ ಹೆರಿಗೆ ಗುರಿ ಸಾಧಿಸದ ಸಿಎಚ್‌ಸಿಗಳಲ್ಲಿನ ತಜ್ಞ ವೈದ್ಯರನ್ನು ತಾಲ್ಲೂಕು ಆಸ್ಪತ್ರೆಗೆ ಹಾಗೂ ಆರೋಗ್ಯ ವಿಸ್ತರಣಾ ಕೇಂದ್ರಗಳಲ್ಲಿನ ಎಂಬಿಬಿಎಸ್‌ ವೈದ್ಯರ ಹುದ್ದೆಗಳನ್ನು ಪಿಎಚ್‌ಸಿಗಳಿಗೆ ಸ್ಥಳಾಂತರಿಸಲಾಗುತ್ತಿದೆ. ಜೊತೆಗೆ ಗುರಿ ಸಾಧಿಸದ ಪಿಎಚ್‌ಸಿಗಳ ಶುಶ್ರೂಷಕರ ಹುದ್ದೆಗಳನ್ನು ಗುರಿ ಸಾಧಿಸಿದ ಪಿಎಚ್‌ಸಿಗಳಿಗೆ ವರ್ಗಾವಣೆ ಮಾಡಲಾಗುತ್ತಿದೆ. ಈ ರೀತಿ ತಜ್ಞ ವೈದ್ಯರು ಹಾಗೂ ಶುಶ್ರೂಷಕರ ಹುದ್ದೆ ಸ್ಥಳಾಂತರ ಮಾಡುತ್ತಿರುವುದರಿಂದ ಗ್ರಾಮೀಣ ಆರೋಗ್ಯ ಸೇವೆಗೆ ಪೆಟ್ಟು ಬೀಳಲಿದೆ ಎಂಬ ಆರೋಪಿಗಳು ಕೇಳಿಬಂದಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.