ADVERTISEMENT

ಚಿಕ್ಕಲಿಂಗದಳ್ಳಿ ಕೆರೆಯ ಹೂಳು ತೆಗೆದ ಸ್ಥಳ ಪರಿಶೀಲಿಸಿದ ಕೆ. ನೀಲಾ

ಉದ್ಯೋಗ ಖಾತ್ರಿ ಅನುಷ್ಠಾನಕ್ಕೆ ವಿಪುಲ ಅವಕಾಶ

​ಪ್ರಜಾವಾಣಿ ವಾರ್ತೆ
Published 20 ಜೂನ್ 2018, 9:16 IST
Last Updated 20 ಜೂನ್ 2018, 9:16 IST
ಚಿಂಚೋಳಿ ತಾಲ್ಲೂಕು ಚಿಕ್ಕಲಿಂಗದಳ್ಳಿ ಕೆರೆಯನ್ನು ಜನವಾದಿ ಮಹಿಳಾ ಸಂಘಟನೆಯ ಉಪಾಧ್ಯಕ್ಷೆ ಕೆ. ನೀಲಾ ಈಚೆಗೆ ಪರಿಶೀಲಿಸಿದರು
ಚಿಂಚೋಳಿ ತಾಲ್ಲೂಕು ಚಿಕ್ಕಲಿಂಗದಳ್ಳಿ ಕೆರೆಯನ್ನು ಜನವಾದಿ ಮಹಿಳಾ ಸಂಘಟನೆಯ ಉಪಾಧ್ಯಕ್ಷೆ ಕೆ. ನೀಲಾ ಈಚೆಗೆ ಪರಿಶೀಲಿಸಿದರು   

ಚಿಂಚೋಳಿ: ಉದ್ಯೋಗ ಖಾತ್ರಿ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ತಾಲ್ಲೂಕಿನಲ್ಲಿ ಸಾಕಷ್ಟು ಅವಕಾಶಗಳಿವೆ ಎಂದು ಜನವಾದಿ ಮಹಿಳಾ ಸಂಘಟನೆಯ ಉಪಾಧ್ಯಕ್ಷೆ ಕೆ.ನೀಲಾ ತಿಳಿಸಿದರು.

ತಾಲ್ಲೂಕಿನ ಚಿಕ್ಕಲಿಂಗದಳ್ಳಿ ಕೆರೆಗೆ ಈಚೆಗೆ ಭೇಟಿ ನೀಡಿದ ಅವರು, 2017ರಲ್ಲಿ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಹೂಳು ತೆಗೆದ ಕೆರೆ ‍ಪರಿಶೀಲಿಸಿದ ನಂತರ ಮಾತನಾಡಿದರು.

ಹೂಳು ತೆಗೆಯುವುದರಿಂದ ಕೆರೆಗಳಲ್ಲಿ ಹೆಚ್ಚು ನೀರು ನಿಲ್ಲಿಸಬಹುದು. ಜತೆಗೆ ಫಲವತ್ತಾದ ಮಣ್ಣು ರೈತರು ತಮ್ಮ ಹೊಲಗಳಲ್ಲಿ ಹಾಕಿಕೊಂಡರೆ ಇಳುವರಿ ಜಾಸ್ತಿ ಪಡೆಯಲು ನೆರವಾಗುತ್ತದೆ. ಇದಕ್ಕಿಂತಲೂ ಮುಖ್ಯವಾಗಿ ದುಡಿಯುವ ಜನರಿಗೆ ಸ್ವಗ್ರಾಮದಲ್ಲಿ ಉದ್ಯೋಗ ದೊರೆಯುವುದರಿಂದ ಗುಳೆ ತಪ್ಪಿಸಬಹುದಾಗಿದೆ ಎಂದರು.

ADVERTISEMENT

ತಾಲ್ಲೂಕಿನಲ್ಲಿ ಹತ್ತಾರು ಬ್ಯಾರೇಜುಗಳು, 20ಕ್ಕೂ ಹೆಚ್ಚು ಸಣ್ಣ ಮತ್ತುಅತಿ ಸಣ್ಣ ಕೆರೆಗಳು, ನದಿ ನಾಲಾ , ಚೆಕ್‌ ಡ್ಯಾಂಗಳು ಮತ್ತು ಇರುವುದರಿಂದ ಹೂಳು ತೆಗೆಯಲು ಹೆಚ್ಚಿನ ಅವಕಾಶಗಳಿವೆ ಎಂದರು.

ಅನಿರುದ್ಧ ಶ್ರವಣ ಅವರು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆಗಿದ್ದಾಗ ರಾಜ್ಯಕ್ಕೆ ಮಾದರಿ ಎನ್ನುವಂತೆ ಉದ್ಯೋಗ ಖಾತ್ರಿ ಯೋಜನೆ ಅನುಷ್ಠಾನ ಗೊಳಿಸಿದ್ದಾರೆ. ಯೋಜನೆ ಕುರಿತು ಹತ್ತಾರು ಯಶೋಗಾಥೆಗಳು ರೂಪುಗೊಳ್ಳುವಂತೆ ಮಾಡುವಲ್ಲಿ ಅವರು ಸಹಕಾರ ನೀಡಿದ್ದರು ಎಂದು ಸ್ಮರಿಸಿದರು.

ಅವರ ನಂತರ ಬಂದ ಅಧಿಕಾರಿಗಳಿಗೆ ಯೋಜನೆ ಪರಿಣಾಮಕಾರಿಯಾಗಿ ಅನುಷ್ಠಾನ ಗೊಳಿಸಲು ಮತ್ತು ಬಡವರಿಗೆ ಉದ್ಯೋಗ ಕೊಡಿಸಲು ಮನಸ್ಸಿಲ್ಲದ್ದ ರಿಂದ
ಯೋಜನೆ ಕುಂಟುತ್ತ ಸಾಗಿದೆ ಎಂದು ವಿಷಾದಿಸಿದರು.

ಚಿಕ್ಕಲಿಂಗದಳ್ಳಿ ಕೆರೆ ಕುಂಚಾವರಂ ಕಾಡಿನ ಸೆರಗಿಗೆ ಹೊಂದಿಕೊಂಡಿದ್ದು, ಹಸಿರು ಪರಿಸರ ಮನಸೂರೆಗೊಳ್ಳುತ್ತದೆ. ಇದನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿ ಪಡಿಸಬೇಕೆಂದು ಅವರು ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.