ಚಿಂಚೋಳಿ: ತಾಲ್ಲೂಕಿನ ಕಲ್ಲೂರು ರೋಡ್ ಗ್ರಾಮದಲ್ಲಿ ಬುಧವಾರ ನಡೆಯಬೇಕಿದ್ದ ಬಾಲ್ಯವಿವಾಹವೊಂದನ್ನು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ಪೊಲೀಸರು ಹಾಗೂ ಮಾರ್ಗದರ್ಶಿ ಸಂಸ್ಥೆಯ ಚೈಲ್ಡ್ಲೈನ್ ಉಪಕೇಂದ್ರದವರು ತಡೆದಿದ್ದಾರೆ.
ಬಾಲಕಿಯ ಮದುವೆ ಸಿದ್ಧತೆಗಳು ನಡೆಯುತ್ತಿರುವುದರ ಮಾಹಿತಿ ಪಡೆದ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಭೀಮಸೇನ್ ಚವ್ಹಾಣ, ಮಾರ್ಗದರ್ಶಿ ಸಂಸ್ಥೆಯ ಚೈಲ್ಡ್ ಲೈನ್ ಉಪ ಕೇಂದ್ರದ ನಿರ್ದೇಶಕ ಆನಂದ್ ರಾಜ್ ಹಾಗೂ ಮಿರಿಯಾಣ ಠಾಣೆಯ ಪಿಎಸ್ಐ ಸಂತೋಷ ರಾಠೋಡ ಸ್ಥಳಕ್ಕೆ ತೆರಳಿ ಮದುವೆ ಮಾಡಿದರೆ ಎದುರಾಗುವ ಕಾನೂನಾತ್ಮಕ ಸಮಸ್ಯೆಗಳ ಬಗ್ಗೆ ಮನವರಿಕೆ ಮಾಡಿಕೊಟ್ಟರು. ಇದನ್ನು ಕೇಳಿದ ಎರಡೂ ಕಡೆಯವರು ಮದುವೆ ರದ್ದುಗೊಳಿಸಿ ಬಾಲಕಿಯನ್ನು ಮಕ್ಕಳ ಕಲ್ಯಾಣ ಸಮಿತಿ ಎದುರು ಹಾಜರುಪಡಿಸಲು ಒಪ್ಪಿಕೊಂಡರು.
ಬಾಲಕಿಯ ತಂದೆ ತಾಯಿ ಇಬ್ಬರೂ ತೀರಿಕೊಂಡಿದ್ದು, ಅಣ್ಣ ಇದ್ದಾನೆ. ಚಿಕ್ಕಪ್ಪ, ಚಿಕ್ಕಮ್ಮ ಮತ್ತು ದೊಡ್ಡಮ್ಮ ಮದುವೆ ಮಾಡಿಕೊಡಲು ಮುಂದಾಗಿದ್ದರು. ರಕ್ಷಣಾ ತಂಡದಲ್ಲಿ ಪಿಎಸ್ಐ ಸಂತೋಷ ರಾಠೋಡ, ಅಂಗನವಾಡಿ ಮೇಲ್ವಿಚಾರಕಿ ಮಿನಾಕ್ಷಿ ಗೌನಳಿ ಮತ್ತು ಮಾರ್ಗದರ್ಶಿ ಸಂಸ್ಥೆಯ ಚೈಲ್ಡ್ ಲೈನ್ ಉಪ ಕೇಂದ್ರದ ತಂಡದ ಸದಸ್ಯ ದೇವೀಂದ್ರಪ್ಪ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.