ADVERTISEMENT

ಚಿಂಚೋಳಿ: ಜೋಳ ಬೇಸಾಯ ಕ್ಷೇತ್ರ ಕುಸಿತ

ಚಿಂಚೋಳಿ: ಕಣಕಿ ತಿನ್ನುವ ಜಾನುವಾರುಗಳ ಸಂಖ್ಯೆಯೂ ಕ್ಷೀಣ

ಜಗನ್ನಾಥ ಡಿ.ಶೇರಿಕಾರ
Published 14 ಮಾರ್ಚ್ 2025, 6:07 IST
Last Updated 14 ಮಾರ್ಚ್ 2025, 6:07 IST
ಚಿಂಚೋಳಿ ಹೊರವಲಯದ ಹೊಲವೊಂದರಲ್ಲಿ ಬುತ್ತಿಯಾಕಾರದ ತೆನೆ ಹೊತ್ತು ಆಕರ್ಷಿಸುತ್ತಿರುವ ಜೋಳದ ಬೆಳೆ
ಚಿಂಚೋಳಿ ಹೊರವಲಯದ ಹೊಲವೊಂದರಲ್ಲಿ ಬುತ್ತಿಯಾಕಾರದ ತೆನೆ ಹೊತ್ತು ಆಕರ್ಷಿಸುತ್ತಿರುವ ಜೋಳದ ಬೆಳೆ   

ಚಿಂಚೋಳಿ: ರೊಟ್ಟಿ ಪ್ರಿಯರ ಹೊಟ್ಟೆ ತುಂಬಿಸುವ ಜೋಳ ಬೇಸಾಯ ತಾಲ್ಲೂಕಿನಲ್ಲಿ ವರ್ಷದಿಂದ ವರ್ಷಕ್ಕೆ ಕುಸಿಯುತ್ತಿದೆ.

ಒಂದೆಡೆ ಜೋಳದ ಗೂಡು ಮುರಿಯುವ ಕಾರ್ಮಿಕರ ಕೊರತೆಯಿಂದ ರೈತರು ಸಾಧ್ಯವಾದಷ್ಟು ಕಡಿಮೆ ಪ್ರಮಾಣದಲ್ಲಿ ಜೋಳ ಬಿತ್ತನೆಯಲ್ಲಿ ತೊಡಗಿದರೆ, ಜೋಳದ ರಾಶಿಯ ನಂತರ (ಮೇವು) ಕಣಕಿ ತಿನ್ನುವ ಜಾನುವಾರುಗಳ ಸಂಖ್ಯೆಯೂ ಕ್ಷೀಣಿಸುತ್ತಿರುವುದು ಕಳವಳಕಾರಿ.

ಸದ್ಯ ರೈತರ ಹೊಲದಲ್ಲಿ ಜೋಳದ ಬೆಳೆ ಕೊಯ್ಲಿಗೆ ಬಂದಿದೆ. ಎರಡು ವಾರಗಳಲ್ಲಿ ಜೋಳದ ರಾಶಿಯೂ ಮುಗಿಯುವ ಸಾಧ್ಯತೆಯಿದೆ.

ADVERTISEMENT

ಜೋಳ ಜನರಿಂದಲೇ ರಾಶಿ ಮಾಡಬೇಕು. ಜೋಳದ ದಂಟುಗಳನ್ನು ಕಿತ್ತು ಸೂಡು ಕಟ್ಟಿ ತೆನೆಗಳನ್ನು ಮುರಿದು ಕಣದಲ್ಲಿ ಹಾಕಿ ಹಂತಿ ಕಟ್ಟುವುದು ಸಾಮಾನ್ಯವಾದರೆ, ಈಗ ಆಧುನಿಕತೆಯ ಭರಾಟೆಯಲ್ಲಿ ಹಂತಿಗಳು ಮಾಯವಾಗಿವೆ. ಹಂತಿ ಹೂಡಲು ಎತ್ತುಗಳೇ ಇಲ್ಲದಂತಾಗುತ್ತಿದೆ. ಬಹುತೇಕ ಕೃಷಿ ಈಗ ಟ್ರ್ಯಾಕ್ಟರ್‌ ಅವಲಂಬಿಸುತ್ತಿದೆ.

ಹೆಚ್ಚಿನ ಜನರು ಜೋಳ ಬೇಸಾಯಕ್ಕೆ ನಿರಾಸಕ್ತಿ ತೋರಿಸುತ್ತಿದ್ದಾರೆ. ತಾಲ್ಲೂಕಿನಲ್ಲಿ ಮಾನದಂಡಿ, ಕಾಟಿ, ಕೋಡಮುರಕಿ, ಬಸವಣ್ಣನ ಮಾರಿ, ಅಳ್ಳಿನ ಜೋಳ, ಹೋಳಿ ಜೋಳ ಹೀಗೆ ವಿವಿಧ ಪ್ರಕಾರದ ಜೋಳ ಬೇಸಾಯ ಮಾಡಲಾಗುತ್ತಿದೆ.

ಹೆಚ್ಚಿನ ಪ್ರಮಾಣದಲ್ಲಿ ಮಾನದಂಡಿ ಜೋಳ ಬೇಸಾಯವಿದ್ದು ಉಳಿದ ಜೋಳದಲ್ಲಿ ಕಾಟಿ, ಕೋಡಮುರಕಿ ಹೊರತುಪಡಿಸಿದರೆ ಹೋಳಿಜೋಳ(ಕಡುಬು), ಅಳ್ಳಿನ ಜೋಳ(ನಾಗಪಂಚಮಿ ಅಳ್ಳು ತಯಾರಿಸುವ) ಜೋಳ ಬೇಸಾಯ ಒಂದೆರಡು ಸಾಲು ಮಾತ್ರ ರೈತರು ತಮ್ಮ ಹೊಲಗಳಲ್ಲಿ ಬಿತ್ತನೆ ನಡೆಸುವುದು ರೂಢಿ.

ತಾಲ್ಲೂಕಿನ ಚಂದ್ರಂಪಳ್ಳಿ ನೀರಾವರಿ ಯೋಜನೆ ಅಚ್ಚುಕಟ್ಟು ಪ್ರದೇಶದಲ್ಲಿ ಜೋಳದ ಬೇಸಾಯ ಅಧಿಕ ಪ್ರಮಾಣದಲ್ಲಿ ಕಾಣ ಸಿಗುತ್ತಿತ್ತು ಆದರೆ ಇತ್ತೀಚಿನ ದಿನಗಳಲ್ಲಿ ಜೋಳ ಬೇಸಾಯ ಕ್ಷೇತ್ರ ಕ್ಷೀಣಿಸುತ್ತಿದೆ.

ಹಿಂದಿನ ದಿನಗಳಲ್ಲಿ ರೈತರು ಒಂದು ವರ್ಷ ದ್ವಿದಳ ಧಾನ್ಯ ಮತ್ತೊಂದು ವರ್ಷ ಏಕದಳ ಧಾನ್ಯ ಬೇಸಾಯ ಮಾಡುವ ಮೂಲಕ ಭೂಮಿಯ ಆರೋಗ್ಯ ಕಾಪಾಡುತ್ತಿದ್ದರು. ಆದರೆ ಈಗ ಹೆಚ್ಚಿನ ರೈತರು ತೊಗರಿ ಮಾತ್ರ ಅವಲಂಬಿಸುತ್ತಿರುವುದು ಮಣ್ಣಿನ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ.

ಚಿಂಚೋಳಿ ಹೊರ ವಲಯದ ಹೊಲವೊಂದರಲ್ಲಿ ಬುತ್ತಿಯಾಕಾರದ ತೆನೆ ಹೊತ್ತು ಆಕರ್ಷಿಸುತ್ತಿರುವ ಜೋಳದ ಬೆಳೆ
ವರ್ಷದಿಂದ ವರ್ಷಕ್ಕೆ ಜೋಳದ ಬೇಸಾಯ ಕ್ಷೇತ್ರ ಕ್ಷೀಣಿಸುತ್ತಿರುವುದು ನೋಡಿದರೆ ಮುಂದಿನ ದಿನಗಳಲ್ಲಿ ಜೋಳಕ್ಕೆ ಹೆಚ್ಚಿನ ಬೆಲೆ ಬರುವುದರಲ್ಲಿ ಅನುಮಾನವಿಲ್ಲ
ವೀರಪ್ಪ ನಾಯಕ ಕೃಷಿಕ ತಿರುಮಲಾಪುರ
ಹಿಂದಿನ ಮೂರು ವರ್ಷಗಳಿಗೆ ಹೋಲಿಸಿದರೆ ಪ್ರಸಕ್ತ ವರ್ಷ ಜೋಳದ ಬೇಸಾಯ ಕ್ಷೇತ್ರ ಕಡಿಮೆಯಾಗಿದೆ. ಇದಕ್ಕೆ ಕಾರ್ಮಿಕರ ಕೊರತೆಯೇ ಕಾರಣ
ವೀರಶೆಟ್ಟಿ ರಾಠೋಡ್ ಸಹಾಯಕ ಕೃಷಿ ನಿರ್ದೇಶಕ ಚಿಂಚೋಳಿ
ತಾಲ್ಲೂಕಿನಲ್ಲಿ ಜೋಳ ಬೇಸಾಯ (ಹೆಕ್ಟೇರ್‌ಗಳಲ್ಲಿ) ವರ್ಷ;ಗುರಿ;ಸಾಧನೆ 2019-20;10000;40002022-23;8000;40172023-24;7500;48742024-25;6500;4000

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.