ADVERTISEMENT

ಉಸಿರಾಟ ಸಮಸ್ಯೆಯಿಂದ ಅಕ್ಕ, ಬಿಸಿಲಿ ಹೊಡೆತಕ್ಕೆ ತಮ್ಮ ಸಾವು

ಮಕ್ಕಳ ಆರೋಗ್ಯ ತಪಾಸಣೆ ವರದಿಯಲ್ಲಿ ಉಲ್ಲೇಖ; ಪೋಷಕರಿಂದ ಮಾಹಿತಿ ಸಂಗ್ರಹ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2020, 15:41 IST
Last Updated 6 ಮಾರ್ಚ್ 2020, 15:41 IST
ಚಿಂಚೋಳಿ ತಾಲ್ಲೂಕು ಗಣಾಪುರ ಗ್ರಾಮಕ್ಕೆ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ದೀಪಕ್ ಪಾಟೀಲ ನೇತೃತ್ವದಲ್ಲಿ ವೈದ್ಯರ ತಂಡ ಶುಕ್ರವಾರ ಭೇಟಿ ನೀಡಿ ರಕ್ತವಾಂತಿ ಮಾಡಿಕೊಂಡು ಸಾವನ್ನಪ್ಪಿರುವ ಮಕ್ಕಳ ಮಾಹಿತಿ ಪಡೆದರು
ಚಿಂಚೋಳಿ ತಾಲ್ಲೂಕು ಗಣಾಪುರ ಗ್ರಾಮಕ್ಕೆ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ದೀಪಕ್ ಪಾಟೀಲ ನೇತೃತ್ವದಲ್ಲಿ ವೈದ್ಯರ ತಂಡ ಶುಕ್ರವಾರ ಭೇಟಿ ನೀಡಿ ರಕ್ತವಾಂತಿ ಮಾಡಿಕೊಂಡು ಸಾವನ್ನಪ್ಪಿರುವ ಮಕ್ಕಳ ಮಾಹಿತಿ ಪಡೆದರು   

ಚಿಂಚೋಳಿ: ತಾಲ್ಲೂಕಿನ ಗಣಾಪುರದಲ್ಲಿ ಒಂದೇ ಕುಟುಂಬದ ಇಬ್ಬರು ಮಕ್ಕಳು 4 ದಿನಗಳ ಅಂತರದಲ್ಲಿ ಮೃತಪಟ್ಟ ಬೆನ್ನಲ್ಲೇ ಗ್ರಾಮಕ್ಕೆ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ದೀಪಕ್ ಪಾಟೀಲ ನೇತೃತ್ವದಲ್ಲಿ ಆರ್‌ಆರ್‌ಟಿ ತಂಡ (ತುರ್ತು ಸ್ಪಂದನ ದಳ)ದ ಸದಸ್ಯರು ಶುಕ್ರವಾರ ಗ್ರಾಮಕ್ಕೆ ಭೇಟಿ ನೀಡಿ ಮೃತ ಮಕ್ಕಳ ಕುಟುಂಬದ ಸದಸ್ಯರಿಂದ ಮಾಹಿತಿ ಪಡೆದರು.

ಅಕ್ಕ ನವಿನಾ, ತಮ್ಮ ಗುಣಸಾಗರ ಅವರ ತಂದೆ–ತಾಯಿಯನ್ನು ಭೇಟಿ ಮಾಡಿದ ವೈದ್ಯರ ತಂಡ ಅವರಿಂದ ಮಾಹಿತಿ ಸಂಗ್ರಹಿಸಿದರು. ಮಕ್ಕಳಿಗೆ ಚಿಕಿತ್ಸೆ ಕೊಡಿಸಿದ ಆಸ್ಪತ್ರೆಗಳ (ದಾಖಲೆ) ಆರೋಗ್ಯ ತಪಾಸಣೆ ವರದಿ ಪರಿಶೀಲಿಸಿದಾಗ ಇಬ್ಬರೂ ಮಕ್ಕಳಲ್ಲಿ ಯಾವುದೇ ದೋಷ ಕಾಣಿಸಿಕೊಂಡಿಲ್ಲ. ಆದರೆ ಗುಣಸಾಗರನಿಗೆ ಸಕಾಲದಲ್ಲಿ ಚಿಕಿತ್ಸೆ ಕೊಡಿಸದೇ ಉದಾಸೀನ ಮಾಡಿದ್ದರಿಂದ ಆ ಮಗು ತೀವ್ರ ಜ್ವರದಿಂದ ಬಳಲುತ್ತಿತ್ತು. 3, 4 ದಿನ ಬಿಸಿಲಿನಲ್ಲಿಯೇ ಮಲಗಿತ್ತು. ಹೀಗಾಗಿ ಮಗುವಿನ ದೇಹದಲ್ಲಿ ನೀರಿನ ಅಂಶ ಕಡಿಮೆಯಾಗಿ ಬಿಸಿಲಿನ ಹೊಡೆತದಿಂದ ರಕ್ತವಾಂತಿ ಮಾಡಿಕೊಂಡು ಸಾವನ್ನಪ್ಪಿರುವ ಸಾಧ್ಯತೆಯಿದೆ ಎಂದು ವೈದ್ಯರ ತಂಡ ಅಭಿಪ್ರಾಯಪಟ್ಟಿದೆ.

ಬಾಲಕಿ ನವಿನಾ ವೈದ್ಯಕೀಯ ವರದಿಯಲ್ಲಿ ಯಾವುದೇ ದೋಷ ಕಂಡು ಬಂದಿಲ್ಲ. ಬುಧವಾರ ಸಂಜೆ ತಾಂಡೂರಿನಲ್ಲಿ ತಂದೆಯ ಜತೆಗೆ ಒಂದೇ ತಾಟಿನಲ್ಲಿ ಊಟ ಮಾಡಿ ಚೆನ್ನಾಗಿಯೇ ಇದ್ದಳು. ಆರಾಮ ಆಗಿದೆ ಮನೆಗೆ ಹೋಗಬೇಕು ಎನ್ನುವಷ್ಟರಲ್ಲಿಯೇ ಉಸಿರಾಟದ ತೊಂದರೆ ಕಾಣಿಸಿಕೊಂಡಿತು. ಆಗ ವೈದ್ಯರ ಗಮನಕ್ಕೆ ತಂದರೆ ಅವರು ವೆಂಟಿಲೇಟರ್ ಅಳವಡಿಸಬೇಕಾಗುತ್ತದೆ. ಹೀಗಾಗಿ ನೀವು ಹೈದರಾಬಾದಗೆ ಕರೆದೊಯ್ಯಿರಿ ಎಂದಾಗ ಹೈದರಾಬಾದ್‌ಗೆ ಅಂಬುಲೆನ್ಸ್‌ನಲ್ಲಿ ಕರೆದೊಯ್ಯುವಾಗ ಚವೆಳ್ಳಾ ಬಳಿ ಬಾಲಕಿ ಅಸು ನೀಗಿದ್ದಾಳೆ, ಬಾಲಕಿಯಲ್ಲಿ ಉಸಿರಾಟ ಸಮಸ್ಯೆಯಿಂದ ಮೃತಪಟ್ಟಿರುವ ಸಾಧ್ಯತೆಯಿದೆ ಎಂದು ಪಾಲಕರ ಹೇಳಿಕೆ ಆಧರಿಸಿ ಅಭಿಪ್ರಾಯ ಪಟ್ಟಿದ್ದಾರೆ.

ADVERTISEMENT

ಆರ್‌ಆರ್‌ಟಿ ತಂಡದಲ್ಲಿ ದೀಪಕ್ ಪಾಟೀಲ, ಮಕ್ಕಳ ರೋಗ ತಜ್ಞ ಸಂತೋಷ ಪಾಟೀಲ, ರುದನೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಅಜಿತ್ ಪಾಟೀಲ ಮತ್ತು ಮಿರಿಯಾಣ ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ. ಬೀರಪ್ಪ ಉಡುಮನಳ್ಳಿ ಇದ್ದರು.

122 ಜನರ ರಕ್ತಮಾದರಿ ಸಂಗ್ರಹ: ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ತೆರೆದ ತಾತ್ಕಾಲಿಕ ಚಿಕಿತ್ಸಾ ಕೇಂದ್ರದಲ್ಲಿ ಇಲ್ಲಿಯವರೆಗೆ 122 ಜನರ ರಕ್ತದ ಮಾದರಿ ಸಂಗ್ರಹಿಸಿ ಪರೀಕ್ಷೆಗಾಗಿ ಗುಲಬರ್ಗಾ ವೈದ್ಯಕೀಯ ವಿಜ್ಞಾನ ಸಂಸ್ಥೆಯ (ಜಿಮ್ಸ್) ಜಿಲ್ಲಾ ಆರೋಗ್ಯ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಗುರುವಾರ ಪಡೆದ ರಕ್ತದ ಮಾದರಿಯಲ್ಲಿ 86 ಜನರಿಗೆ ಚಿಕಿತ್ಸೆ ನೀಡಿ ಅವರಲ್ಲಿ ಸಕ್ಕರೆ ಕಾಯಿಲೆ ಪರೀಕ್ಷಿಸಲಾಗಿದೆ. ಇದರ ಜತೆಗೆ ಮೂರು ಡೆಂಗಿ ಮತ್ತು 17 ಮಲೇರಿಯಾ ಮತ್ತು ಇತರೆ ಮಾದರಿಗಳು ಪರೀಕ್ಷೆಗಾಗಿ ಕಳುಹಿಸಲಾಗಿದೆ. ಶುಕ್ರವಾರ 109 ಜನರಿಗೆ ತಪಾಸಣೆ ನಡೆಸಲಾಗಿದೆ. ಈ ಪೈಕಿ 4 ಡೆಂಗಿ ಮತ್ತು 14 ಮಲೇರಿಯಾ ಹಾಗೂ ಇತರೆ ರೋಗ ಪತ್ತೆಗೆ ರಕ್ತದ ಮಾದರಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಡಾ.ದೀಪಕ ಪಾಟೀಲ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.