ಚಿತ್ತಾಪುರ: ಬುಧವಾರ ರಾತ್ರಿ ಸುರಿದ ಧಾರಾಕಾರ ಮಳೆಗೆ ತಾಲ್ಲೂಕಿನಾದ್ಯಂತ ಜನಜೀವನ ಅಸ್ತವ್ಯಸ್ತಗೊಂಡಿದೆ.
ಪಟ್ಟಣದ ಬಹಾರಪೇಟದಲ್ಲಿನ ಕೆಲ ಮನೆಗಳು ಹಾಗೂ ಭಂಕಲಗಾ ಗ್ರಾಮದಲ್ಲಿ ಐದಾರು ಮನೆಗಳಿಗೆ ಮಳೆ ನೀರು ನುಗ್ಗಿ ದವಸ ಧಾನ್ಯ ಹಾಳಾಗಿದೆ. ರಾಶಿ ಮಾಡಿ ರಸ್ತೆಯ ಮೇಲೆ ಹಾಕಿದ್ದ ಹೆಸರು ಕಾಳು ನೀರಿನಲ್ಲಿ ಹಾನಿಯಾಗಿವೆ.
ಮೂರು ದಿನಗಳ ಕಾಲ ಬಿಡುವು ನೀಡಿದ್ದ ಮಳೆ ಮತ್ತೆ ಬಂದಿದ್ದರಿಂದ ಹೆಸರು ರಾಶಿಗೆ ಅಡಚಣೆಯಾಗಿದ್ದು ಕಟಾವಿಗೆ ಸಿದ್ಧಗೊಂಡಿದ್ದ ಹೆಸರು ಬೆಳೆ ಮಳೆಯಲ್ಲಿ ಹೋಮ ಮಾಡಿದಂತಾಗಿದೆ. ತಗ್ಗು ಪ್ರದೇಶದಲ್ಲಿ ಮಳೆನೀರು ನಿಂತು ತೊಗರಿ, ಹತ್ತಿ, ಉದ್ದು ಬೆಳೆಗಳು ಹಾನಿಯಾಗಿವೆ.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಬಾಲಕ ಮತ್ತು ಬಾಲಕಿಯರ ವಸತಿ ನಿಲಯದ ಕಟ್ಟಡಗಳ ಆವರಣವು ನಾಗಾವಿ ಹಳ್ಳದ ಪ್ರವಾಹದಿಂದ ಜಲಾವೃತವಾಗಿ ವಿದ್ಯಾರ್ಥಿಗಳು ಪರದಾಡಿದರು.
ಚಿತ್ತಾಪುರ 50.2 ಮಿ.ಮೀ, ನಾಲವಾರ-70.6 ಮಿ.ಮೀ, ಅಳ್ಳೊಳ್ಳಿ 40.8 ಮಿ.ಮೀ, ಗುಂಡಗುರ್ತಿ 6.4 ಮಿ.ಮೀ ಮಳೆ ದಾಖಲಾಗಿದೆ ಎಂದು ತಹಶೀಲ್ದಾರ್ ನಾಗಯ್ಯ ಹಿರೇಮಠ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.