ಕಲಬುರಗಿ: ಚಿತ್ತಾಪುರ ಪಟ್ಟಣದಲ್ಲಿ ಜೂಜಾಟ ತಾಣದ ಮೇಲೆ ದಾಳಿ ಮಾಡಿದ ಚಿತ್ತಾಪುರ ಠಾಣೆಯ ಪೊಲೀಸರು ಏಳು ಮಂದಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ದಿಗ್ಗಾಂವನ ಶಿವರುದ್ರಪ್ಪ ಶಿವಲಿಂಗಪ್ಪ ಬೇಣಿ (54), ಚಿತ್ತಾಪುರದ ಸೋಮಶೇಖರ ಬಾಪುರಾವ ಪಾಟೀಲ (64), ರಾಮತೀರ್ಥದ ಜಗನಗೌಡ ಗುರುನಾಥರೆಡ್ಡಿ ಪಾಟೀಲ (58), ಭೀಮನಹಳ್ಳಿಯ ಶರಣಗೌಡ ಬಸಣ್ಣಗೌಡ (74), ಭಂಕಲಗಾದ ರವೀಂದ್ರ ರೆಡ್ಡಿ ಜಗದೇವ ರೆಡ್ಡಿ (55), ಚಿತ್ತಾಪುರದ ವೆಂಕಟೇಶ ನಗರದ ಶಿವಣ್ಣ ಶರಣಪ್ಪ ಹಿಟ್ಟಿನ (75) ಮತ್ತು ರೇಷ್ಮಿ ಗಲ್ಲಿಯ ಓಂಕಾರೇಶ್ವರ ಪ್ರಭುರಾಜ ರೇಷ್ಮಿ (57) ವಿರುದ್ಧ ಸೆಕ್ಷನ್ 87 ಕೆಪಿ ಕಾಯ್ದೆ ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪಟ್ಟಣದ ಲಾಡ್ಜಿಂಗ್ ಕ್ರಾಸ್ ಸಮೀಪದ ಕಲ್ಯಾಣ ಮಂಟಪ ಹಿಂಬದಿಯ ಅಂಗಳದಲ್ಲಿ ಜೂಜಾಟ ಆಡುತ್ತಿದ್ದರು. ದಾಳಿ ಮಾಡಿದಾಗ ಶಿವರುದ್ರಪ್ಪ ಬಳಿ ₹ 11,600, ಸೋಮಶೇಖರ ಬಳಿ ₹ 19,600, ಜಗನಗೌಡ ಬಳಿ ₹ 2,700, ಶರಣಗೌಡ ಬಳಿ ₹ 7,700, ರವಿಂದ್ರ ಬಳಿ ₹ 1,520, ಶಿವಣ್ಣ ಬಳಿ ₹ 6,000, ಓಂಕಾರೇಶ್ವರ ಬಳಿ ₹ 5,300 ಹಾಗೂ ಜೂಜಾಟದ ಸ್ಥಳದಲ್ಲಿ ₹ 4,800 ಸೇರಿ ₹ 59,220 ವಶಕ್ಕೆ ಪಡೆಯಲಾಗಿದೆ ಎಂದು ಮಾಹಿತಿ ನೀಡಿದರು.
ಪೊಲೀಸರ ದಾಳಿಯಲ್ಲಿ ಸಿಲುಕಿದವರಲ್ಲಿ ರಾಜಕೀಯ ಪಕ್ಷಗಳೊಂದಿಗೆ ಗುರುತಿಸಿಕೊಂಡಿದ್ದವರೂ ಇದ್ದಾರೆ ಎನ್ನಲಾಗುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.