ADVERTISEMENT

ಕಲಬುರಗಿ: ಐವರ ಸಿಐಡಿ ಕಸ್ಟಡಿ ಅಂತ್ಯ

​ಪ್ರಜಾವಾಣಿ ವಾರ್ತೆ
Published 7 ಮೇ 2022, 3:03 IST
Last Updated 7 ಮೇ 2022, 3:03 IST
ಕೆಎಸ್‌ಆರ್‌ಪಿ ಡಿವೈಎಸ್ಪಿ ವೈಜನಾಥ ರೇವೂರ ಅವರನ್ನು ಕಲಬುರಗಿಯಲ್ಲಿ ಸಿಐಡಿ ಅಧಿಕಾರಿಗಳು ವಶಕ್ಕೆ ಪಡೆದು ವಿಚಾರಣೆಗೆ ಕರೆತಂದರು
ಕೆಎಸ್‌ಆರ್‌ಪಿ ಡಿವೈಎಸ್ಪಿ ವೈಜನಾಥ ರೇವೂರ ಅವರನ್ನು ಕಲಬುರಗಿಯಲ್ಲಿ ಸಿಐಡಿ ಅಧಿಕಾರಿಗಳು ವಶಕ್ಕೆ ಪಡೆದು ವಿಚಾರಣೆಗೆ ಕರೆತಂದರು   

ಕಲಬುರಗಿ: ಪಿಎಸ್‌ಐ ಅಕ್ರಮ ನೇಮಕಾತಿ ಪ್ರಕರಣಕ್ಕೆ ಸಂಬಂಧಿಸದಿಂತೆ ಸಿಐಡಿ ವಶದಲ್ಲಿದ್ದ ಸುರೇಶ ಕಾಟೆಗಾಂವ, ಕಾಳಿದಾಸ, ದಿವ್ಯಾ ಹಾಗರಗಿ ಅವರ ಕಾರು ಚಾಲಕ ಸದ್ದಾಂ, ಜ್ಞಾನಜ್ಯೋತಿ ಶಿಕ್ಷಣ ಸಂಸ್ಥೆಯ ಶಿಕ್ಷಕಿಯರಾದ ಸುನಂದಾ, ಅರ್ಚನಾ ಅವರನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಿ 3ನೇ ಹೆಚ್ಚುವರಿ ಜೆಎಂಎಫ್‌ ನ್ಯಾಯಾಲಯ ಶುಕ್ರವಾರ ಆದೇಶ ಹೊರಡಿಸಿದೆ.

ವಿಚಾರಣೆಗಾಗಿ ಏಪ್ರಿಲ್‌ 30ರಿಂದ ಸಿಐಡಿ ವಶಕ್ಕೆ ನೀಡಲಾಗಿತ್ತು. ವಿಚಾರಣೆ ಪೂರ್ಣಗೊಂಡಿದ್ದರಿಂದ ನ್ಯಾಯಾಂಗ ವಶಕ್ಕೆ ಒಪ್ಪಿಸಿ ನ್ಯಾಯಾಧೀಶ ಸಂತೋಷ ಶ್ರೀವಾಸ್ತವ ಅವರು ಆದೇಶಿಸಿದರು. ಜಾಮೀನಿಗಾಗಿ ಆರೋಪಿಗಳು ಅರ್ಜಿ ಸಲ್ಲಿಸಿದ್ದರಾದರೂ ಸಿಐಡಿ ಪರ ವಕೀಲರಾದ ಸಹಾಯಕ ಸರ್ಕಾರಿ ಅಭಿಯೋಜಕ ಶಿವಶರಣಪ್ಪ ಹೋತಪೇಟ ಅವರು, ಪ್ರಕರಣ ಗಂಭೀರ ಸ್ವರೂಪದ್ದಾಗಿದ್ದು, ಜಾಮೀನಿನ ಮೇಲೆ ಬಿಡುಗಡೆಯಾದರೆ ತನಿಖೆಗೆ ಅಡ್ಡಿಯಾಗುವ ಸಂಭವವಿದೆ ಎಂದು ತಕರಾರು ಮಾಡಿದ್ದರು. ಹೀಗಾಗಿ, ಜಾಮೀನು ಅರ್ಜಿಯನ್ನು ತಿರಸ್ಕರಿಸಿದರು.

ಇದೇ 9ರಂದು ದಿವ್ಯಾ ಹಾಗರಗಿ ಅವರ ಸಿಐಡಿ ಕಸ್ಟಡಿ ಅವಧಿ ಅಂತ್ಯಗೊಳ್ಳಲಿದ್ದು, ಅಂದು ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ.

ADVERTISEMENT

ಕಾರ್ಯಕ್ರಮದಲ್ಲಿದ್ದ ವೈಜನಾಥ: ತಾಜಸುಲ್ತಾನಪುರದ ಕೆಎಸ್‌ಆರ್‌ಪಿ ಮೈದಾನದಲ್ಲಿ ನಡೆದ ನಿರ್ಗಮನ ಪಥಸಂಚಲನದಲ್ಲಿ ಗೃಹಸಚಿವರು ಭಾಗವಹಿಸಿದ್ದರು. ಶುಕ್ರವಾರ ಸಂಜೆ ಸಿಐಡಿ ಪೊಲೀಸರಿಂದ ಬಂಧನಕ್ಕೊಳಗಾದ ವೈಜನಾಥ ರೇವೂರ ಅಲ್ಲಿಯೇ ಓಡಾಡಿಕೊಂಡಿದ್ದರು.

ಸಚಿವರು ತೆರಳಿದ ಬಳಿಕ ಸಂಜೆ ಸಿಐಡಿ ಅಧಿಕಾರಿಗಳ ತಂಡ ವೈಜನಾಥ ಅವರನ್ನು ವಶಕ್ಕೆ ಪಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.