ಕಲಬುರ್ಗಿ: ಜನರ ಮಧ್ಯೆ ಬಂದೋಬಸ್ತ್ಗೆಂದು ಓಡಾಡಿದಾಗ ನನಗೂ ಕೋವಿಡ್–19 ಸೋಂಕು ಬಂದಿತ್ತು. ಅದನ್ನು ಧೈರ್ಯದಿಂದ ಎದುರಿಸಿದೆ. ಒಂದು ವಾರ ಐಸೋಲೇಶನ್ ವಾರ್ಡ್ನಲ್ಲಿ ಇದ್ದೆ. ಆ ಬಳಿಕ ನೆಗೆಟಿವ್ ಬಂದು ಇದೀಗ ಆರಾಮವಾಗಿ ಇದ್ದೇನೆ.
ಪಾಸಿಟಿವ್ ಬಂದು ಐಸೋಲೇಶನ್ ಕೊಠಡಿಯಲ್ಲಿ ಇದ್ದಾಗಲೂ ನನಗೆ ಕಾಯಿಲೆಯ ಯಾವುದೇ ಲಕ್ಷಣಗಳೂ ಇರಲಿಲ್ಲ. ಸಣ್ಣ ವಯಸ್ಸಿನಲ್ಲಿಯೇ ಬಾವಿಯಲ್ಲಿ ಈಜಾಡಿ, ಹಾಲು, ಮೊಸರು, ತುಪ್ಪ ಉಂಡು ಬೆಳೆದವರು ನಾವು. ಹಾಗಾಗಿ, ಕೊರೊನಾ ಬಂದಿದೆ ಎಂಬುದು ನನಗೆ ಗೊತ್ತೇ ಆಗಲಿಲ್ಲ. ಆದರೂ, ಧೈರ್ಯ ತಂದುಕೊಂಡು ನಿತ್ಯವೂ ಉಸಿರಿಗೆ ಸಂಬಂಧಿಸಿದ ಯೋಗಾಭ್ಯಾಸ ಮಾಡಿದೆ.
ಆಗಾಗ ಬಿಸಿ ನೀರು, ಕಷಾಯ ಕುಡಿಯುತ್ತಾ ಮೈಯನ್ನು ಬಿಸಿಯಾಗಿ ಇಟ್ಟುಕೊಳ್ಳುವುದು ಬಹಳ ಅಗತ್ಯ. ನಮ್ಮಲ್ಲಿ ಸೋಂಕಿನ ಲಕ್ಷಣಗಳು ಕಂಡು ಬಂದು ನಾವು ಆಸ್ಪತ್ರೆಗೆ ಹೋಗಬೇಕಾದರೂ ಯಾವುದಕ್ಕೂ ಹಿಂಜರಿಯದೇ ಧೈರ್ಯ ದಿಂದಲೇ ಹೋಗಬೇಕು. ಯಾವ ಕಾರಣಕ್ಕೂ ಮಾನಸಿಕವಾಗಿ ನಾವು ಕುಗ್ಗಬಾರದು.
ಸೋಂಕು ದೃಢಪಟ್ಟ ಸಂದರ್ಭದಲ್ಲಿ ವೈದ್ಯರು ಅಗತ್ಯ ಗುಳಿಗೆಗಳನ್ನು ಕೊಡುತ್ತಿದ್ದರು. ಆ ಮೂಲಕ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತಿದ್ದರು. ನಿಯಮಿತವಾಗಿ ಊಟ, ವಾಕಿಂಗ್, ಯೋಗ ಇದ್ದರೆ ಸೋಂಕು ನಮ್ಮ ಹತ್ತಿರಕ್ಕೂ ಸುಳಿಯುವುದಿಲ್ಲ. ಯಾವುದೇ ಸಮಸ್ಯೆಯಾಗದೇ ನಾನು ಗುಣಮುಖನಾಗಿದ್ದೇನೆ. ಒಂದೊಮ್ಮೆ ಪಾಸಿಟಿವ್ ಬಂದರೂ ಯಾರೂ ಹೆದರುವ ಅವಶ್ಯಕತೆಯಿಲ್ಲ.ಆದಷ್ಟೂ ಹೊರಗೆ ಓಡಾಡುವುದನ್ನು ಕಡಿಮೆ ಮಾಡಬೇಕು.
ಆಗಾಗ ಕೈಗಳನ್ನು ಸ್ಯಾನಿಟೈಸರ್, ಸಾಬೂನಿನಿಂದ ತೊಳೆಯಬೇಕು. ಮುಖಕ್ಕೆ ಮಾಸ್ಕ್ ಧರಿಸಬೇಕು.
- ಸೋಮಲಿಂಗ ಕಿರದಳ್ಳಿ ಗ್ರಾಮೀಣ ಠಾಣೆ ಪೊಲೀಸ್ ಇನ್ಸ್ಪೆಕ್ಟರ್, ಕಲಬುರ್ಗಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.