ADVERTISEMENT

ದ್ವಿಶತಕ ದಾಟಿದ ಸೋಂಕಿತರು

ಮಹಾರಾಷ್ಟ್ರದಿಂದ ಮರಳಿದ ಕಾರ್ಮಿಕರನ್ನು ಬೆಂಬಿಡದ ವೈರಾಣು, ಕ್ವಾರಂಟೈನ್‌ ಕೇಂದ್ರಗಳಲ್ಲಿ ಮುಂದುವರಿದ ಆತಂಕ

​ಪ್ರಜಾವಾಣಿ ವಾರ್ತೆ
Published 29 ಮೇ 2020, 12:34 IST
Last Updated 29 ಮೇ 2020, 12:34 IST
   

ಕಲಬುರ್ಗಿ: ಮಹಾರಾಷ್ಟ್ರದ ಮುಂಬೈ ಹಾಗೂ ಪುಣೆ ನಗರಗಳಿಂದ ಜಿಲ್ಲೆಗೆ ಮರಳಿದ 15 ಜನರಲ್ಲಿ ಶುಕ್ರವಾರ ಕೋವಿಡ್‌–19 ದೃಢಪಟ್ಟಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ದ್ವಿಶತಕ ದಾಟಿದೆ.

ಎರಡು ವಾರಗಳ ಹಿಂದೆ ಮಹಾರಾಷ್ಟ್ರದಿಂದ ಬಂದಿದ್ದ ಇವರೆಲ್ಲ ವಿವಿಧೆಡೆ ಕ್ವಾರಂಟೈನ್‌ ಕೇಂದ್ರಗಳಲ್ಲಿ ವಾಸಿಸುತ್ತಿದ್ದರು. ಸೋಂಕಿತರಾದ ಎಲ್ಲರನ್ನೂ ಇಲ್ಲಿ ಜಿಮ್ಸ್‌ನ ಐಸೋಲೇಷನ್‌ ವಾರ್ಡ್‌ಗೆ ದಾಖಲಿಸಲಾಗಿದೆ. ಇವರಲ್ಲಿ 12 ಮಂದಿ ಚಿತ್ತಾಪುರ ತಾಲ್ಲೂಕಿನವರೇ ಇದ್ದಾರೆ.

ಚಿತ್ತಾಪುರ ತಾಲ್ಲೂಕಿನ ತೇರಿ ತಾಂಡಾದ 20 ವರ್ಷದ ಯುವಕ, ಅನಿಕೇರಾ ತಾಂಡಾದ 8 ವರ್ಷದ ಬಾಲಕಿ, 34 ವರ್ಷದ ಮಹಿಳೆ, 36 ವರ್ಷದ ಮಹಿಳೆ, 33 ವರ್ಷದ ಮಹಿಳೆ, 6 ವರ್ಷದ ಬಾಲಕ, ದೇವಾಪುರ ತಾಂಡಾದ 35 ವರ್ಷದ ಯುವಕ, ಬಳಗೇರಾ ತಾಂಡಾದ 38 ವರ್ಷದ ಯುವಕ, ಚಿತ್ತಾಪುರ ಪಟ್ಟಣದ 23 ವರ್ಷದ ಯುವಕ, 42 ವರ್ಷದ ಪುರುಷ, 32 ವರ್ಷದ ಯುವತಿ ಹಾಗೂ 12 ವರ್ಷದ ಬಾಲಕಿಗೆ ಕೊರೊನಾ ವೈರಾಣು ಅಂಟಿಕೊಂಡಿದೆ.

ADVERTISEMENT

ಶಹಾಬಾದ್‌ ತಾಲ್ಲೂಕಿನ ಭಂಕೂರ ಗ್ರಾಮದ 25 ವರ್ಷದ ಯುವತಿ, 10 ವರ್ಷದ ಬಾಲಕಿ ಹಾಗೂ 20 ವರ್ಷದ ಯುವಕ ಕೂಡ ಕೋವಿಡ್‌ನಿಂದ ಬಳಲುತ್ತಿದ್ದಾರೆ.

ಇದರಿಂದ ಸೋಂಕಿತರ ಸಂಖ್ಯೆ ಜಿಲ್ಲೆಯಲ್ಲಿ 205ಕ್ಕೆ ಏರಿಕೆಯಾಗಿದ್ದು, 123 ಸಕ್ರಿಯ ರೋಗಿಗಳಾಗಿದ್ದಾರೆ. ಇವರೊಂದಿಗೆ ಕ್ವಾರಂಟೈನ್‌ ಕೇಂದ್ರಗಳಲ್ಲಿ ಇದ್ದವರನ್ನು ಅಲ್ಲಿಯೇ ಮುಂದುವರಿಸುವ ಕುರಿತು ನಿರ್ದರಿಸಲಾಗಿದೆ ಎಂದು ಜಿಲ್ಲಾಡಳಿತದ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.