ಕಲಬುರ್ಗಿ: ಇಲ್ಲಿನ ಜಿಮ್ಸ್ ಆಸ್ಪತ್ರೆಯ ಡಿ ದರ್ಜೆ ನೌಕರ ಅನಂತರಾಜ ಅವರಿಗೆ ಶನಿವಾರ ಮೊದಲ ಕೊರೊನಾ ಲಸಿಕೆ ನೀಡಲಾಯಿತು.
ಮಹಾದೇವಪ್ಪ ರಾಂಪೂರೆ ವೈದ್ಯಕೀಯ ಕಾಲೇಜಿನಲ್ಲಿ ತೆರೆದ ವಿಶೇಷ ವಿಭಾಗದಲ್ಲಿ ತಜ್ಞರು ಚುಚ್ಚುಮದ್ದು ನೀಡಿದರು.
ಇವರ ಹಿಂದೆಯೇ ನೋಂದಣಿ ಮಾಡಿಕೊಂಡ ಜೀಮ್ಸ್ ಮಹಿಳಾ ಸಿಬ್ಬಂದಿ ಅಂಜಲಿ ಅಪ್ಪಣ್ಣ ಬಂಡಗಾರ ಅವರಿಗೆ ಚುಚ್ಚುಮದ್ದು ನೀಡಲಾಯಿತು.
ಮಾರ್ಗದರ್ಶಿ ಪ್ರಕಾರ ಮೊದಲು ನೋಂದಣಿ ಮಾಡಲಾಯಿತು. ಅಲ್ಲಿಂದ ದಾಖಲೆಗಳನ್ನು ಪರಿಶೀಲನೆ ಮಾಡಿ, ವೆಬ್ ಸೈಟಿಗೆ ಅಪ್ಲೋಡ್ ಮಾಡಿದ ನಂತರ ವ್ಯಾಕ್ಸಿನೇಷನ್ ಕೊಠಡಿಗೆ ಕಳಿಸಲಾಯಿತು.
ಫಲಾನುಭವಿಗಳ ಎಡಗೈಗೆ ಚುಚ್ಚುಮದ್ದು ನೀಡಿದ ನಂತರ ವಿಶ್ರಾಂತಿ ಕೊಠಡಿಗೆ ಕಳಿಸಲಾಯಿತು. ಅಲ್ಲಿಯೂ ವೈದ್ಯರಿಬ್ಬರನ್ನು ನಿಯೋಜಿಸಿ ಆರೋಗ್ಯದ ಮೇಲೆ ನಿಗಾ ಇಡಲಾಯಿತು.
ಅರ್ಧ ತಾಸಿನ ನಂತರವು ಇಬ್ಬರೂ ಫಲಾನುಭವಿಗಳ ಆರೋಗ್ಯದಲ್ಲಿ ವ್ಯತ್ಯಾಸ ಕಂಡುಬರಲಿಲ್ಲ. ಇದರ ಜತೆಜತೆಗೇ ಮತ್ತಷ್ಟು ಫಲಾನುಭವಿಗಳಿಗೆ ವಸಿಕೆ ನೀಡುವುದನ್ನು ಮುಂದುವರಿಸಲಾಯಿತು.
ಇದಕ್ಕೂ ಮುನ್ನ ಪ್ರಧಾನಿ ಮೋದಿ ಅವರು ವರ್ಚುವಲ್ ಕ್ಯಾನ್ಸರನ್ಸ್ ಮೂಲಕ ಲಸಿಕೆ ನೀಡುವ ಕಾರ್ಯಕ್ಕೆ ಚಾಲನೆ ನೀಡಿದರು. ಸಂಸದ ಡಾ.ಉಮೇಶ ಜಾಧವ, ಶಾಸಕರಾದ ದತ್ತಾತ್ರೇಯ ಪಾಟೀಲ ರೇವೂರ, ಬಸವರಾಜ ಮತ್ತಿಮೂಡ, ವಿಧಾನ ಪರಿಷತ್ ಸದಸ್ಯ ಬಿ.ಜಿ.ಪಾಟೀಲ, ಜಿಲ್ಲಾಧಿಕಾರಿ ವಿ.ವಿ. ಜೋತ್ಸ್ನಾ, ಸಿಇಒ ಡಾ.ಪಿ.ರಾಜಾ, ಡಿಎಚ್ಒ ಡಾ.ರಾಜಶೇಖರ ಮಾಲಿ, ವೈದ್ಯಕೀಯ ಮಹಾವಿದ್ಯಾಲಯದ ಡೀನ್ ಡಾ.ಕವಿತಾ ಪಾಟೀಲ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.