ಕಲಬುರಗಿ: ಗ್ರಾಮ ಪಂಚಾಯಿತಿ ವತಿಯಿಂದ ನಿವೇಶನ ಕೊಡಿಸುವುದಾಗಿ ಇಬ್ಬರಿಂದ ತಲಾ ₹ 6 ಲಕ್ಷದಂತೆ ₹ 12 ಲಕ್ಷ ಪಡೆದುಕೊಂಡು ಪರಾರಿಯಾಗಿದ್ದ ಗಣೇಶ ನಗರದ ನಿವಾಸಿ ಗುಂಡೂರಾವ್ ಪ್ರಭಾಕರ ಯರಬಾರಕರ್ ಎಂಬಾತನನ್ನು ವಿಶ್ವವಿದ್ಯಾಲಯ ಠಾಣೆ ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಕುಸನೂರ ಗ್ರಾಮ ಪಂಚಾಯಿತಿ ವತಿಯಿಂದ ಜಿಡಿಎ ನಿವೇಶನಗಳನ್ನು ಹಂಚಿಕೆ ಮಾಡಲು ಸರ್ಕಾರ ಅನುಮತಿ ನೀಡಿದೆ ಎಂದು ಸುಳ್ಳು ಮಾಹಿತಿ ನೀಡಿದ ಗುಂಡೂರಾವ್ ಸ್ಟೇಶನ್ ರಸ್ತೆಯ ಪ್ರೀತಿ ರಾಘವೇಂದ್ರ ಹಾಗೂ ಮಲ್ಲಮ್ಮ ವಿಶ್ವನಾಥ ಸಾಳ ಎಂಬುವವರಿಂದ 2017ರ ಅಕ್ಟೋಬರ್ ಹಾಗೂ ಡಿಸೆಂಬರ್ ತಿಂಗಳಲ್ಲಿ ಹಣ ಪಡೆದಿದ್ದ. ಇದಕ್ಕೆ ಪ್ರತಿಯಾಗಿ ಗ್ರಾಮ ಪಂಚಾಯಿತಿ ಕಾರ್ಯಾಲಯದ ನಕಲಿ ರಸೀದಿ ಕೊಟ್ಟು ಮೋಸ ಮಾಡಿದ್ದ ಎಂದು ಹಣ ಕಳೆದುಕೊಂಡವರು ದೂರು ನೀಡಿದ್ದರು.
ಡಿಸಿಪಿ ಅಡ್ಡೂರು ಶ್ರೀನಿವಾಸಲು, ಉಪನಗರ ಎಸಿಪಿ ಜೆ.ಎಚ್. ಇನಾಮದಾರ ಮಾರ್ಗದರ್ಶನದಲ್ಲಿ ವಿಶ್ವವಿದ್ಯಾಲಯ ಠಾಣೆ ಪೊಲೀಸ್ ಇನ್ಸ್ಪೆಕ್ಟರ್ ಶಿವಾನಂದ ಘಾಣಿಗೇರ, ಸಿಬ್ಬಂದಿಯಾದ ಹುಸೇನ್ಸಾಬ್, ವಿಶ್ವನಾಥ, ಪ್ರಭಾಕರ, ಚನ್ನವೀರ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.