ADVERTISEMENT

ಕೇಂದ್ರ ತಂಡದಿಂದ ಬೆಳೆ ಹಾನಿ ಪರಿಶೀಲನೆ: ಅನ್ನದಾತರ ಅಳಲು ಆಲಿಸಿದ‌ ತಂಡ

​ಪ್ರಜಾವಾಣಿ ವಾರ್ತೆ
Published 13 ಜನವರಿ 2026, 8:34 IST
Last Updated 13 ಜನವರಿ 2026, 8:34 IST
   

ಕಲಬುರಗಿ: ಕಳೆದ‌ ಆಗಸ್ಟ್, ಸೆಪ್ಟೆಂಬರ್ ತಿಂಗಳಲ್ಲಿ ವ್ಯಾಪಕ ಮಳೆಯಿಂದ ಜಿಲ್ಲೆಯಲ್ಲಿ ಹಾಳಾದ ಬೆಳೆಗಳ ಹಾನಿಗಳ ಅಧ್ಯಯನಕ್ಕೆ ಜಿಲ್ಲೆ ಕೇಂದ್ರ ತಂಡವು ಬಂದಿದ್ದು, ಮಂಗಳವಾರ ಜಿಲ್ಲೆಯ ಕಮಲಾಪುರ ತಾಲ್ಲೂಕಿನ ಕಿಣ್ಣಿ ಸಡಕ್, ಡೊಂಗರಗಾಂವ, ಭೀಮನಾಳ, ಕಮಲಾಪೂರ ಗ್ರಾಮಗಳಿಗೆ ಭೇಟಿ ನೀಡಿ ನೆರೆಯಿಂದ ಹಾನಿಯಾದ ಬೆಳೆ,‌ ರಸ್ತೆ, ಸೇತುವೆ ಹಾನಿ ವೀಕ್ಷಣೆ‌ ಮಾಡಿತು.

ಕೇಂದ್ರದ ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯದ ಹೈದರಾಬಾದನ ಎಣ್ಣೆ ಬೀಜ ಅಭಿವೃದ್ಧಿ ವಿಭಾಗದ ನಿರ್ದೇಶಕ ಡಾ.ಪೊನ್ನುಸ್ವಾಮಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವಾಲಯದ ಅಧೀನ ಕಾರ್ಯದರ್ಶಿ ಜಯಶ್ರೀ ಕಕ್ಕರ್ ಅವರು ಬೆಳೆ ಹಾನಿ, ಮೂಲಸೌಕರ್ಯ ಹಾನಿ ವೀಕ್ಷಿಸಿ ರೈತರ ಅಳಲು ಆಲಿಸಿದರು.

ಡೊಂಗರಗಾಂವ ಗ್ರಾಮದ ಸರ್ವೇ ‌ನಂ. 20/3ರಲ್ಲಿ ಸುಮಾರು 4.32 ಎಕರೆ ಪ್ರದೇಶದಲ್ಲಿ ತೊಗರಿ ಬೆಳೆದು ಬೆಳೆ ಹಾನಿಗೊಳಗಾಗಿರುವ ರೈತ ಅಭಿಷೇಕ್ ಅವರ ಹೊಲಕ್ಕೆ ಭೇಟಿ ನೀಡಿ ಹಾಳಾದ ತೊಗರಿ ಬೆಳೆ‌ ವೀಕ್ಷಿಸಿದರು. ಪ್ರತಿ ಎಕರೆ 30 ಸಾವಿರ ಖರ್ಚು ಮಾಡಿ ತೊಗರಿ ಬೆಳೆದಿದ್ದು, ವಿಪರೀತ ಮಳೆಯಿಂದ ಎಲ್ಲವೂ ಹಾಳಾಗಿದೆ. ಬಿತ್ತಿದ ಬೆಳೆಯು ಐದಾರು ಕೆ.ಜಿ.ಗಳಷ್ಟೂ ಬಾರದ ಸ್ಥಿತಿಯಲ್ಲಿದೆ ಎಂದು ಅಧಿಕಾರಿಗಳ ಮುಂದೆ ರೈತ ಅಭಿಷೇಕ ತನ್ನ ಅಳಲು ತೋಡಿಕೊಂಡರುಮ

ADVERTISEMENT

ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಮಾತನಾಡಿ, ಜಿಲ್ಲೆಯಾದ್ಯಂತ ವಾಡಿಕೆಗೂ ಹೆಚ್ಚಿನ ಮಳೆಯಿಂದ ಅಪಾರ ಪ್ರಮಾಣದ ಬೆಳೆಗಳು ಹಾನಿಯಾಗಿವೆ. ಇದಲ್ಲದೆ ಶಾಲೆ, ಅರೋಗ್ಯ ಕೇಂದ್ರ, ಅಂಗನವಾಡಿ, ರಸ್ತೆ, ಸೇತುವೆಯಂಥ ಮೂಲಸೌಕರ್ಯಗಳು ಸಹ ಹಾನಿಗೊಳಗಾಗಿವೆ. ಈಗಾಗಲೆ ಎನ್.ಡಿ.ಆರ್.ಎಫ್ ಮಾರ್ಗಸೂಚಿಯಂತೆ ಪರಿಹಾರ ಒದಗಿಸಿದೆ. ಮುಖ್ಯಮಂತ್ರಿಗಳು ಈ ಪ್ರದೇಶದಲ್ಲಿ ವೈಮಾನಿಕ ಸಮೀಕ್ಷೆ ನಡೆಸಿ ರಾಜ್ಯ ಸರ್ಕಾರದಿಂದ ಪರಿಹಾರ ಘೋಷಿಸಿದ್ದು, ‌ಅದರಂತೆ ಪರಿಹಾರ ಸಹ ಪಾವತಿಸಿದೆ‌ ಎಂದು ವಿವರಿಸಿದರು.

ಜಂಟಿ ಕೃಷಿ ನಿರ್ದೇಶಕ ಸಮದ್ ಪಟೇಲ್ ಮಾತನಾಡಿ ಕಮಲಾಪುರ ತಾಲ್ಲೂಕಿನಲ್ಲಿ 7,892 ಹೆಕ್ಟೇರ್ ಪ್ರದೇಶದಲ್ಲಿ ತೊಗರಿ ಬಿತ್ತಿದ್ದು, ಇದರಲ್ಲಿ ಶೇ.80ರಷ್ಟು ಬೆಳೆ ಹಾನಿಯಾಗಿದೆ. ಮಣ್ಣಿನಲ್ಲಿ ಇನ್ನು ತೇವಾಂಶ ಇದ್ದು, ಎರಡನೇ ಬೆಳೆ ಬೆಳೆಯುವಂತಿಲ್ಲ. ತೀರಾ ಕೆಟ್ಟ ಸ್ಥಿತಿಯಲ್ಲಿ ರೈತಾಪಿ ವರ್ಗವಿದೆ ಎಂದು ಅಧ್ಯಯನ ತಂಡಕ್ಕೆ ಮಾಹಿತಿ ನೀಡಿದರು.

ಕಮಲಾಪುರದಲ್ಲಿ ಬೆಳೆ ಹಾನಿ ವೀಕ್ಷಣೆ:

ಕಮಲಾಪುರ ಗ್ರಾಮದ ಸರ್ವೆ ನಂ. 323 ರಲ್ಲಿ ಮಹಾದೇವಪ್ಪ ಬಸವಣಪ್ಪ ಸವರಿಗೆ ಸೇರಿದ 6.19 ಎಕರೆಯಲ್ಲಿ ಬೆಳೆದ ತೊಗರಿ ಬೆಳೆ ಹಾನಿ ಸಹ ತಂಡ ವೀಕ್ಷಿಸಿತು. ರೈತ ಪ್ರಶಾಂತ ಮಾತನಾಡಿ ಮೂರಕ್ಕಿಂತ ಹೆಚ್ಚಿನ ಎಕರೆ ಮಳೆಗೆ ಬೆಳೆ ಹಾಳಾಗಿದೆ. ಪ್ರತಿ ಎಕರೆಗೆ ₹25-30 ಸಾವಿರ ಖರ್ಚು ಮಾಡಿವೆ. ಮಳೆ‌ ಎಲ್ಲವನ್ನು ಕೊಚ್ಚಿಕೊಂಡು ಹೋಗಿದೆ. ತದನಂತರ ಕುಸಬಿ ಬೆಳೆದಿದ್ದು, ವ್ಯಾಪಕ ಮಳೆಯಿಂದ ಇದರ ಇಳುವರಿ ಬರೋದರ ಕುರಿತು ಅನುಮಾನ ವ್ಯಕ್ತಪಡಿಸಿದರು.

ಇದಕ್ಕೂ ಮುನ್ನ ತಂಡವು ಕಿಣ್ಣಿಸಡಕ್‌-ಡೋರ ಜಂಬಗಾ ನಡುವಿನ ಸೇತುವೆ, ಭೀಮನಾಳ ಗ್ರಾಮದಲ್ಲಿನ ರಸ್ತೆ ಹಾನಿ ವೀಕ್ಷಣೆ ಮಾಡಿತು.

ಜಿಲ್ಲಾ ಪಂಚಾಯಿತಿ ಸಿಇಒ ಭಂವರ್ ಸಿಂಗ್ ಮೀನಾ, ತೋಟಗಾರಿಕೆ ಉಪನಿರ್ದೇಶಕ ಸಂತೋಷ ಇನಾಂದಾರ, ತಹಶೀಲ್ದಾರ್ ಮೊಹಮ್ಮದ್ ಮೋಹಸೀನ್, ಸಹಾಯಕ ಕೃಷಿ ನಿರ್ದೇಶಕ ಡಾ.ಅರುಣಕುಮಾರ ಮೂಲಿಮನಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.