ಕಲಬುರಗಿ: ‘ನೆಟೆರೋಗ, ಕಳಪೆ ಬೀಜ ವಿತರಣೆ, ತೇವಾಂಶ ಕೊರತೆಯಿಂದ ಹಾನಿಯಾದ ತೊಗರಿ ಹಾಗೂ ಇತರೆ ಬೆಳೆಗಳ ಬಾಕಿ ಇರುವ ₹ 326.83 ಕೋಟಿ ವಿಮೆ ಪರಿಹಾರವನ್ನು ತಕ್ಷಣ ಸರ್ಕಾರ ಬಿಡುಗಡೆ ಮಾಡಬೇಕು’ ಎಂದು ಜಿಲ್ಲಾ ರೈತ ಹೋರಾಟ ಸಮಿತಿಯ ಮುಖಂಡ ಅವ್ವಣ್ಣ ಮ್ಯಾಕೇರಿ ಆಗ್ರಹಿಸಿದರು.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘₹ 663.73 ಕೋಟಿ ವಿಮಾ ಪರಿಹಾರ ಮಂಜೂರಾಗಿತ್ತು. ಅದಲ್ಲಿ ಅರ್ಧ ಮಾತ್ರ ರೈತರ ಖಾತೆಗಳಿಗೆ ಹಾಕಲಾಗಿದೆ’ ಎಂದರು.
‘ಶೀಘ್ರ ವಿಮೆ ಪರಿಹಾರ ಹಣ ಬಿಡುಗಡೆ ಮಾಡಬೇಕು ಹಾಗೂ ವಿಮೆ ಮೊತ್ತ ಪಾವತಿಸದ ರೈತರಿಗೂ ಸರ್ಕಾರದಿಂದ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೃಷಿ ಸಚಿವ ಚಲುವರಾಯಸ್ವಾಮಿ ಅವರ ಬಳಿ ರೈತರ ನಿಯೋಗ ಕರೆದುಕೊಂಡು ಹೋಗಿ ಭೇಟಿ ಮಾಡಲಾಗುವುದು. ಸ್ಪಂದಿಸದೇ ಹೋದರೆ ಆ.19ರಂದು ಬೃಹತ್ ಪ್ರತಿಭಟನೆ ಮಾಡಲಾಗುವುದು’ ಎಂದು ಹೇಳಿದರು.
ಜಿಲ್ಲಾ ಕೃಷಿ ಸಮಾಜದ ಅಧ್ಯಕ್ಷ ಸಿದ್ರಾಮಪ್ಪ ಪಾಟೀಲ ಧಂಗಾಪುರ ಮಾತನಾಡಿ, ‘ರೈತರು ತಮ್ಮ ಪಾಲಿನ ವಿಮೆ ಹಣ ಪಾವತಿ ಮಾಡಿದರೂ ಸರ್ಕಾರ ಹಾನಿಯಾದ ಬೆಳೆಗಳ ಪರಿಹಾರ ಹಣ ನೀಡಲು ಹಿಂದೇಟು ಹಾಕುತ್ತಿದೆ. ಇದು ಸರಿಯಾದ ಧೋರಣೆಯಲ್ಲ. ಬೇಗ ವಿಮೆ ಪರಿಹಾರದ ಹಣವನ್ನು ಬಿಡುಗಡೆ ಮಾಡಬೇಕು’ ಎಂದರು.
‘ಮೂರು ತಿಂಗಳಲ್ಲಿ ಬೆಳೆಯುವ ಬೆಳೆಗಳಿಗೂ ತೊಗರಿಗಿಂತ ಅಧಿಕ ಬೆಂಬಲ ಬೆಲೆ ನೀಡುತ್ತಿದ್ದಾರೆ. ಇದು ಸರ್ಕಾರಗಳ ಅವೈಜ್ಞಾನಿಕ ನಡೆಯಾಗಿದೆ. ವರ್ಷದಲ್ಲಿ ಒಂದೇ ಬೆಳೆ ಬೆಳೆಯುವ ತೊಗರಿಗೆ ಕೇಂದ್ರ ಹಾಗೂ ರಾಜ್ಯಗಳು ಸೇರಿ ಕನಿಷ್ಠ ವರ್ಷ ₹ 10 ಸಾವಿರ ಬೆಂಬಲ ಬೆಲೆ ನೀಡಬೇಕು’ ಎಂದು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಶಿವಕುಮಾರ ಪಾಟೀಲ, ಮಲ್ಲಣ್ಣ ಕುಲಕರ್ಣಿ, ಬಸವರಾಜ ಪಾಟೀಲ, ಯುಗಾಂತ್ರಿ ದೇಶಮಾನೆ, ಗಿರೀಶ ಪಾಟೀಲ ಇತರರು ಹಾಜರಿದ್ದರು.
‘ರಾಜ್ಯ ಸರ್ಕಾರವೂ ಸಹಾಯಧನ ನೀಡಲಿ’
‘ಕೇಂದ್ರ ಸರ್ಕಾರ ತೊಗರಿಗೆ ₹8 ಸಾವಿರ ಬೆಂಬಲ ಬೆಲೆ ಈ ಬಾರಿ ಘೋಷಣೆ ಮಾಡಿದೆ. ಆದರೆ ರಾಜ್ಯ ಕೃಷಿ ಸಚಿವರು ಅದೇ ಬೆಂಬಲ ಬೆಲೆ ಹೇಳುತ್ತಿದ್ದಾರೆ. ರಾಜ್ಯ ಸರ್ಕಾರವೂ ಈ ಬಾರಿ ಹೆಚ್ಚುವರಿಯಾಗಿ ₹500 ನೀಡಿ ಒಟ್ಟು ರೈತರಿಗೆ ₹ 8500 ಬೆಂಬಲ ಬೆಲೆ ಸಿಗುವಂತೆ ಮಾಡಬೇಕು’ ಎಂದು ಕರ್ನಾಟಕ ಪ್ರದೇಶ ತೊಗರಿ ಬೆಳೆಗಾರರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಬಸವರಾಜ ಇಂಗಿನ್ ಒತ್ತಾಯಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.