
ಕಲಬುರಗಿ: ವಚನ ಟಿವಿ ವತಿಯಿಂದ ದುಬೈನಲ್ಲಿ ಶನಿವಾರ ನಡೆದ ಸಮಾರಂಭದಲ್ಲಿ ಶರಣಬಸವ ವಿಶ್ವವಿದ್ಯಾಲಯದ ಕುಲಾಧಿಪತಿ ದಾಕ್ಷಾಯಿಣಿ ಎಸ್. ಅಪ್ಪ ಅವರಿಗೆ ಗದಗಿನ ತೋಂಟದಾರ್ಯ ಸಿದ್ದಲಿಂಗ ಸ್ವಾಮಿಗಳ ಸ್ಮರಣಾರ್ಥ ಅಂತರರಾಷ್ಟ್ರೀಯ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಮಿಲೇನಿಯಂ ಪ್ಲಾಜಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಾಹ್ಯಾಕಾಶ ವಿಜ್ಞಾನಿ, ಇಸ್ರೋದ ಮಾಜಿ ಅಧ್ಯಕ್ಷ ಡಾ.ಎ.ಎಸ್.ಕಿರಣಕುಮಾರ, ಸಾಣೆಹಳ್ಳಿಯ ಪಂಡಿತರಾಧ್ಯ ಸ್ವಾಮೀಜಿ, ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಸೇರಿದಂತೆ ಅನೇಕ ಗಣ್ಯರ ಸಮ್ಮುಖದಲ್ಲಿ ಶರಣಬಸವೇಶ್ವರ ಸಂಸ್ಥಾನದ 9ನೇ ಪೀಠಾಧಿಪತಿ ಅವರೊಂದಿಗೆ ದಾಕ್ಷಾಯಿಣಿ ಅಪ್ಪ ಪ್ರಶಸ್ತಿ ಸ್ವೀಕರಿಸಿದರು.
ಈ ಪ್ರಶಸ್ತಿ ನಗದು, ಫಲಕ ಹಾಗೂ ಪ್ರಶಂಸಾ ಪ್ರಮಾಣಪತ್ರ ಹೊಂದಿದೆ. ಸಾಣೆಹಳ್ಳಿ ಪಂಡಿತರಾಧ್ಯ ಸ್ವಾಮೀಜಿ, ಡಾ.ಎ.ಎಸ್.ಕಿರಣಕುಮಾರ ಮಾತನಾಡಿದರು.
ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ, ಶರಣಬಸವ ವಿಶ್ವವಿದ್ಯಾಲಯದ ಡೀನ್ ಲಕ್ಷ್ಮೀ ಪಾಟೀಲ ಮಾಕಾ, ಹಣಕಾಸು ಅಧಿಕಾರಿ ಕಿರಣ ಮಾಕಾ, ಭವಾನಿ, ಶಿವಾನಿ, ಮಹೇಶ್ವರಿ ಎಸ್.ಅಪ್ಪ, ಎಂಎಲ್ಸಿ ಉಮಾಶ್ರೀ, ನಟಿ ಸುಧಾರಾಣಿ, ಟಿಸಿಎಸ್ ಡ್ರೀಮ್ ಹಾಲಿಡೇಸ್ ಮುಖ್ಯಸ್ಥ ಎಸ್.ಎಂ. ಸುರೇಶ, ನಿರ್ದೇಶಕ ಸುದೇಶ್ ರಾವ್, ಪ್ರೊ. ಸಿದ್ದು ಯಾಪಲಪರವಿ ಸೇರಿದಂತೆ ರಾಜ್ಯದ ವಿವಿಧ ಕ್ಷೇತ್ರಗಳ ಅನೇಕ ಗಣ್ಯರು ಇದ್ದರು.
ಇದೇ ಕಾರ್ಯಕ್ರಮದಲ್ಲಿ ಅಶ್ವಿನಿ ಪುನೀತ್ರಾಜಕುಮಾರ್ ಅವರಿಗೆ ಶರಣಬಸವಪ್ಪ ಅಪ್ಪ ಸ್ಮರಣಾರ್ಥ ಪ್ರಶಸ್ತಿ ನೀಡಲಾಯಿತು. ವಿಜಯಲಕ್ಷ್ಮಿ ಮತ್ತು ಗುರುನಾಥ ಗಡ್ಡಿ ಅವರಿಗೆ ಫ.ಗು.ಹಳಕಟ್ಟಿ ಪ್ರಶಸ್ತಿ, ಸಂಗೀತ ನಿರ್ದೇಶಕ ಹಂಸಲೇಖ ಅವರಿಗೆ ಲಿಂಗಾನಂದ ಶ್ರೀಗಳ ಪ್ರಶಸ್ತಿ, ಮಾತೆ ಗಂಗಾದೇವಿಯವರಿಗೆ ಇಳಕಲ್ ಮಹಾಂತ ಅಪ್ಪ ಸ್ಮರಣಾರ್ಥ ಪ್ರಶಸ್ತಿ ನೀಡಲಾಯಿತು.
ಪ್ರೊ.ಎಸ್.ಜಿ.ಸಿದ್ದರಾಮಯ್ಯ ಅವರಿಗೆ ತರಳಬಾಳು ಶಿವಕುಮಾರ ಶ್ರೀಗಳ ಹೆಸರಿನ ಪ್ರಶಸ್ತಿ, ಐ.ಆರ್. ಮಠಪತಿ ಅವರಿಗೆ ಭಾಲ್ಕಿಯ ಚನ್ನಬಸವ ಪಟ್ಟದ್ದೇವರ ಹೆಸರಿನಲ್ಲಿ ಪ್ರಶಸ್ತಿ ನೀಡಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.